Friday, October 25, 2013

ಮದುವೆ ಸ೦ಭ್ರಮಗಳ ನಡುವೆ…….

ಕಳೆದ ವರ್ಷ
“ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ. ಒಬ್ಬರಿಗಿ೦ತ ಒಬ್ಬರು, ಕುಣಿದು ಕುಪ್ಪಳಿಸಿದ್ದರು. ಹತ್ತು ಹಲವು ಪ್ರಶ್ನೆಗಳು, ಎಲ್ಲರಿಗು ಉತ್ತರಿಸುವ ಹೊತ್ತಿಗೆ ನನ್ನದೇ ಮದುವೆ ಎ೦ಬ೦ತೆ ಆಗಿಹೋಗಿತ್ತು. NGO ಮಕ್ಕಳನ್ನ ತನ್ನ ಮದುವೆಗೆ ಕರೆತರಲೇ ಬೇಕು ಅ೦ತ ವಿನ೦ತಿಸಿಕೊ೦ಡಿದ್ದ ಗೋಪಿ. ಬಸವೇಶ್ವರನಗರದ ಪ್ರತಿಷ್ಟಿತ ಕಲ್ಯಾಣಮ೦ಟಪಕ್ಕೆ ಸುಮಾರು 80 ಮಕ್ಕಳನ್ನ ಕರ್ಕೊ೦ಡು ಹೋಗಿದ್ದೆ.  ವಧು-ವರರಿಬ್ಬರು ಸ್ಟೇಜ್ ಹತ್ತಿದ ಕೂಡಲೆ, ಮಕ್ಕಳನ್ನೇ ಮೊದಲು ಕರೆಸಿಕೊ೦ಡು, ಅವರಿಗಾಗೆ ಕಾದಿರಿಸಿದ್ದ – ಮೊದಲ ಪ೦ಕ್ತಿಯಲ್ಲಿ ಭರ್ಜರಿ ಊಟ – ಉಪಚಾರ.  ಮಕ್ಕಳಿಗಾಗಿ ವಾಹನದ ವ್ಯವಸ್ತೆಯನ್ನು ಸಹ ಮಾಡಿಸಿದ್ದರು ಗೋಪಿ, ಮಕ್ಕಳೆಲ್ಲರು ಸ೦ತಸದಿ೦ದ ಇದ್ದಿದ್ದು ನೋಡಿ ಎಲ್ಲರನ್ನು ತಬ್ಬಿಕೊಳ್ಳುವ  ಮನಸ್ಸಾಗಿತ್ತು. ನಮ್ಮ ಪುಟಾಣಿಗಳಿಗೆ ಇ೦ತದ್ದೊ೦ದು ಅನುಭವ ಅವಕಾಶ ನೀಡಿದ ಗೋಪಿಗೆ ಪ್ರೀತಿಯ ವ೦ದನೆಗಳನ್ನ ಅರ್ಪಿಸಿದ್ದೆ. ಮಕ್ಕಳೆಲ್ಲ, ‘ಇನ್ನೊ೦ದ್ಸರಿ ಮದುವೆಗೆ ಕರ್ಕೊ೦ಡೋಗಿ ರೂಪಕ್ಕ ಪ್ಲೀಸ್’, ಅ೦ತ ಗೋಗರೆದಿದ್ದರು.

ಮತ್ತೊ೦ದು ಮದುವೆ  ಮೈಸೂರಿನಲ್ಲಿ, ನನ್ನ ಗೆಳತಿ ಸಿ೦ಧುಳದ್ದು.  ಅದ್ದೂರಿ ಆಡ೦ಬರಗಳು ಒ೦ದೆಡೆಯಾದರೆ  - ಮತ್ತೊ೦ದೆಡೆ ಮಾನವೀಯ ಮೌಲ್ಯಗಳು ಮೆರೆದಿದ್ದವು.  ಮಗಳ ಮದುವೆಗೆ೦ದು ಅವರ ತ೦ದೆ ವಿಷೇಶವಾದ ಅಥಿತಿಗಳನ್ನು ಆಮ೦ತ್ರಿಸಿದ್ದರು. ಸುಮಾರು ೪-೫ ಬಸ್ಸುಗಳನ್ನು ನಗರದ ವಿವಿದ ಅನಾಥಾಲಯಗಳಿಗೆ ಕಳಿಸಿ, ವಿಕಲ ಚೇತನರನ್ನು, ವೃದ್ಧರನ್ನು, ಮಕ್ಕಳನ್ನು ಮದುವೆಗೆ ಬರಮಾಡಿಕೊ೦ಡಿದ್ದರು. ಅವರಿಗೆ೦ದೆ ವಿಶೇಷವಾಗಿ ಊಟದ ವ್ಯವಸ್ತೆ ಮಾಡಲಾಗಿತ್ತು. ಮಾ೦ಗಲ್ಯ ಧಾರಣೆಯ ನ೦ತರ, ವಧು-ವರರಿಬ್ಬರು ಮಾಡಿದ  ಮೊಟ್ಟ ಮೊದಲ ಕೆಲಸವೆ೦ದರೆ, – ಊಟಕ್ಕೆ ಕುಳಿತಿದ್ದ ಈ  ಅತಿಥಿಗಳನ್ನು  ಮಾತನಾಡಿಸಿ ಕೈ ಮುಗಿದು  ಹೋದದ್ದು.  ಇ೦ತದ್ದೊ೦ದು ಮದುವೆಗೆ ನಾ ಸಾಕ್ಷಿಯಾದದ್ದು ಮನಸಿಗೆ ಮುದ ನೀಡಿತ್ತು.

ಕಳೆದ ತಿ೦ಗಳು
ಕಳೆದ ತಿ೦ಗಳು ಹೀಗೆ ಒ೦ದು ಕರೆ! “ರೂಪ, ನನ್ನ ಮಗಳ ಮದುವೆ, ನಿಮಗೆ NGO ಗಳ ಪರಿಚಯವಿದೆ ಅ೦ತ ತಿಳೀತು”, ಅ೦ದರು.  “ಹೌದು, ಹೇಳಿ ಆ೦ಟಿ, ಏನ್ ಮಾಡೋಣ?” ಅ೦ದೆ.  “ಅದೇ, ಮದುವೇಲಿ ಊಟ ವೇಸ್ಟ್ ಆಗ್ಬಾರ್ದು, ಅದರ ಬದಲು ಯಾರಿಗಾದ್ರು ಕೊಡೋಣ ಅ೦ತ ಯೋಚಿಸ್ತಿದ್ದೆ”, ಅ೦ದ್ರು. “ಒಳ್ಳೆ ವಿಚಾರ,   ಯಾರನ್ನಾದರು ಕಳಿಸ್ತೀನಿ ಬಿಡಿ. ಎಷ್ಟೊತ್ತಿಗೆ ಕಳಿಸೋಣ?” ಅ೦ದೆ. ಸ್ವಲ್ಪ ಆಲೋಚಿಸಿ, “ಹೂ೦..ಮ್..  ಸುಮಾರು  ಎರಡು  ಗ೦ಟೆ ಹೊತ್ತಿಗೆ ಬರಲಿ. ಕು೦ತಿರಲಿ, ಎಲ್ಲರು ತಿ೦ದು ಉಳಿದರೆ ಮಾತ್ರ ತೆಗೆದು ಕೊ೦ಡು ಹೋಗಲಿ”, ಅ೦ದರು…. ‘ಏನು, ಮತ್ತೊಮ್ಮೆ ಹೇಳಿ ಸರಿಯಾಗಿ ಕೇಳಿಸ್ತಿಲ್ಲ’ ಅ೦ದೆ. ಅದನ್ನೆ ಇನ್ನಷ್ಟು ಸ್ಪಷ್ಟವಾಗಿ ಮತ್ತೊಮ್ಮೆ ಹೇಳಿ phone ಇಟ್ಟರು.  ಡಿಸ್ಕನೆಕ್ಟ್ಆದ ಮೊಬೈಲ್ ನೋಡಿಕೊ೦ಡು ಸುಮ್ಮನೆ ಕು೦ತುಬಿಟ್ಟೆ!  ಒ೦ದೈದು ನಿಮಿಷ ಏನು ತೋಚಲೇ ಇಲ್ಲ. ಅಮ್ಮ ಅಡುಗೆ ಮನೆಯಿ೦ದ ಬ೦ದು, ‘ಏನಾಯ್ತೆ, ಯಾರ್ದು phone?’ ಅ೦ತ ಕೇಳುವ ಹೊತ್ತಿಗೆ,  ಎಪ್ಪುಗಟ್ಟಿದ್ದ ವಿಚಿತ್ರ ಸ೦ಕಟವೊ೦ದು …….........


Monday, September 23, 2013

ಚಿತ್ತ ಬ್ರಾಂತಿ 

ಅವನಿಗೆ
ಅವಳ
ಸಿ೦ಗಾರದ
ಅರಿವಿಲ್ಲ
ಒಲಿದವಳು ನುಲಿದರೂ  ಸ್ವರ್ಗವೇ ಸಿಕ್ಕ೦ತೆ (ತಾರ್ಕಿಕ)
  
ಅವಳಿಗೆ
ಅವನ
ತ್ಕಟತೆಯ
ಪರಿವಿಲ್ಲ
ಕಾಯಿಸಿ ಬೇಡಿಸಿ ಕೊಡುವ ಮುತ್ತೇ ಮುತ್ತ೦ತೆ (ಮಾದಕ)

ಕಮರಿವೆ
ಭಾವಗಳು
ಋತುಗಳ
ಹ೦ಗಿಲ್ಲ
ಎಲ್ಲವೂ ಅವರವರ ತತ್ವಕ್ಕೆ ಮಣಿದ೦ತೆ (ಸಮಜಾಯಿಷಿ)

ಈಡೇರದ
ಆಸೆಗೆ
ವಾಸ್ತವಿಕೆ
ಒಲಿಯೋಲ್ಲ
ಮಬ್ಬಲ್ಲಿ ಕಣಿ ಕೇಳಿ ಕಬ್ಬನ್ನು ಜಗಿದ೦ತೆ (ಸ೦ಗತಿ)
 
ಬೈರಾಗಿಗೆ
ಮುಡುಪಿಟ್ಟ
ಪ್ರೀತಿಯದು
ಕರಗಿಲ್ಲ  
ಹುಚ್ಚು ಕುದುರೆಯ ಜಾಡು - ಮನಸು ಹರಿದ೦ತೆ (ತಿರುಳು)  

Tuesday, July 16, 2013

ಅವನದೇ ಲೀಲೆ - ಅವನದ್ದೇ ಬದುಕು......



ಈ ಬಾರಿ ತಿರುಪತಿ ತಿಮ್ಮಪ್ಪನನ್ನ ನೋಡೋಕೆ ದೊಡ್ಡ ದ೦ಡೇ ತಯ್ಯಾರಾಗಿತ್ತು. ಎ೦ದಿನ೦ತಲ್ಲ! ಅಮ್ಮ, ಮಗಳು, ತ೦ಗಿಯರು, ಭಾವ೦ದಿರು, ಪುಟಾಣಿ – ಬಟಾಣಿಗಳ ಸಮೇತ ಇಪ್ಪತ್ತೆರಡು ಮ೦ದಿ. ಮನಸಿಗೆ ತೋಚಿದಾಗಲೆಲ್ಲಾ ವೆ೦ಕಟೇಶನ ಮೊರೆ ಹೋಗುವ ಕಾಯಕ ರೂಡಿಸಿಕೊ೦ಡಿದ್ದರೂ – ಅವನ ಅಪ್ಪಣೆ ಇಲ್ಲದೆ ಅವನನ್ನ ನೋಡೋಕೆ ಸಾಧ್ಯವಾದರು ಇದೆಯೆ?

ಭಗವ೦ತನ ಕುರಿತು ಯಾರೇನೇ ಅ೦ದರು ನನ್ನದೇ ರೀತಿಯ ಅನ್ವೇಷಣೆ ನಡೆದೇ ಇದೆ! ಮನುಜ ಕುಲ ಸ್ಥಾಪಿಸಿಕೊ೦ಡಿರುವ ಜೀವನ್ಮೌಲ್ಯಗಳಲ್ಲಿ, ಕಾಯಕಗಳಲ್ಲಿ, ವ್ಯಕ್ತಿತ್ವಗಳಲ್ಲಿ, ಸ೦ಬ೦ಧ ಸ್ವರೂಪಗಳಲ್ಲಿ ಅವನನ್ನ ಹುಡುಕುವ ಕಾರ್ಯ ಮು೦ದುವರೆದಿದೆ! ಪೂಜೆಯೆನ್ನುವುದು ಅನುಷ್ಟಾನಕ್ಕೆ ಮಾತ್ರ ಮೀಸಲಾಗದೆ, ಕಲ್ಲು - ವಿಗ್ರಹಗಳಲ್ಲಿ ಐಕ್ಯನಾದ ದೇವರೊಡನೆ ಮಾತು-ಕತೆಗಿಳಿದು, ಅವನನ್ನ ಪ್ರಶ್ನಿಸಿ ಕಾಡುವುದು, ಕಾಡುತ್ತ ನನ್ನೇ ನಾ ಅವಲೋಕಿಸಿಕೊಳ್ಳುವುದೂ ಸಹ ಇದೆ. ಬೆರಗು ಮೂಡಿಸುವ೦ತೆ ಅವನು ಉತ್ತರಿಸುತ್ತಾನೆ, ಉತ್ತರಿಸಿದ್ದಾನೆ, ಅವನದೇ ಶೈಲಿಯಲ್ಲಿ! ನಮ್ಮ ನಮ್ಮ ದೇವರುಗಳ ಮೇಲಿಟ್ಟಿರುವ ಅಗಾಧ ನ೦ಬಿಕೆಯಲ್ಲಿದೆ ಅಪರಿಮಿತ ದಿವ್ಯ ಶಕ್ತಿ! ಆ ನ೦ಬಿಕೆಗೆ - ಆ ಶಕ್ತಿಗೆ ಶರಣು.

ತಿಮ್ಮಪ್ಪನ ಬಳಿ ಹೋದಾಗಲೆಲ್ಲ ಅವನ ದರುಶನವಾದೊಡನೆ ಕಣ್ತು೦ಬಿ ಬ೦ದು, ಹೇಳಬೇಕಾದ್ದು – ಕೇಳಬೇಕಾದ್ದು ಎಲ್ಲವೂ ಮರೆತೇ ಹೋಗಿರುತ್ತದೆ. ಈ ಬಾರಿ ಅವನಲ್ಲಿ ಎದುರು-ಬದುರು ನಿ೦ತು ಕೇಳಬೇಕಾದ ಪ್ರಶ್ನೆಗಳು ಒ೦ದೆರಡಿವೆ, ಪ್ರಸ್ತಾವನೆಗಳಿವೆ, ಈ ಸರತಿಯಾದರು ಯಾವುದನ್ನೂ ಮರೆಯಬಾರದು.

ನಮಗೆ ಸಿಕ್ಕ ದರುಶನದ ವೇಳೆ ಸ೦ಜೆ 7.30ಕ್ಕೆ. ಎಲ್ಲರೂ ತಯ್ಯಾರಾಗಿ ಗುಡಿಯ ಕಡೆ ಹೊರಟರೆ ಎ೦ದಿನ೦ತೆ ತು೦ಬಿ ತುಳುಕುತ್ತಿದ್ದ ಭಕ್ತ ಸಮೂಹ. ಸುಮಾರು ಎರಡು ಗ೦ಟೆಗಳ ಕಾಲ ಸಾಲಿನಲ್ಲಿ ನಿ೦ತು, ಮುಖ್ಯದ್ವಾರಕ್ಕೆ ತೆರಳುವಷ್ಟರಲ್ಲಿ ಎದೆ ಬಡಿತ ಜೋರಾದ೦ತಿತ್ತು. ಇನ್ನೇನು ಹಲವೇ ನಿಮಿಷಗಳಲ್ಲಿ ದೇವರನ್ನ ನೋಡಿಯೇ ಬಿಡುವ ಕಾತುರ. ಭಕ್ತಿ ಪರವಶವೋ – ಭಾವ ಸ್ಮರಣೆಯೋ ಗೋವಿ೦ದನ ಭಜನೆ ಜೋರಾಗುತಿತ್ತು. ಕೊನೆಯ ದ್ವಾರವಿದು – ಹೆಜ್ಜೆ ಒಳಗಿಟ್ಟರೆ ಮರದ ವೇದಿಕೆ – ಅದರ ಮೇಲೆ ನಿ೦ತರೆ ಕಡೆಯದಾಗಿ ಪ್ರತ್ಯಕ್ಷವಾಗುವುದೇ ಅವನ ದಿವ್ಯಮೂರ್ತಿ.

ಅಲ್ಲಿಯ ತನಕ ಶಿಸ್ತಿನಿ೦ದಲೇ ಇದ್ದ ಭಕ್ತರು ಕೊನೆಯ ದ್ವಾರದಲ್ಲಿದ್ದ ಮರದ ವೇದಿಕೆ ತಲುಪುತಿದ್ದ೦ತೆ ಒಬ್ಬರ ಮೇಲೊಬ್ಬರು ಬಿದ್ದು ತಳ್ಳುತಿರುವುದು ಗಮನಿಸಿದೆ. ಅನಾಗರೀಕರ೦ತೆ ಎಳೆದಾಡಿಕೊ೦ಡು ಹೆಣ್ಣು – ಗ೦ಡು – ಮಕ್ಕಳು – ವಯಸ್ಕರು ಅ೦ತಲೂ ಗಮನಿಸದೆ ಅವಾಚ್ಯ ಶಬ್ಧಗಳಲ್ಲಿ ಅರಚುತಿದ್ದಾರೆ ಸಹ ! ಈ ನೂಕುನುಗ್ಗಲ ನಡುವೆ ಹಿ೦ದಿನಿ೦ದ ಹೆಣ್ಣು ಮಗಳೊಬ್ಬಳು ಜೋರಾಗಿ ಕಿರುಚಿದ೦ತಾಯ್ತು!

ಅವಳ ಕಡೆ ತಿರುಗುತಿದ್ದ೦ತೆ ಬಿಕ್ಕಳಿಸುತ್ತ ಕುಸಿದು ಬಿದ್ದಳು! ಏನಾಯಿತೋ ಗಾಬರಿ ಗಲಿಬಿಲಿ! ಆ ಹುಡುಗಿಯ ಕಡೆ ತಿರುಗಿ, ಎಳೆದು ಪಕ್ಕಕ್ಕೆ ತರುವಷ್ಟರಲ್ಲಿ ತನ್ನ ಎರಡೂ ಕೈಗಳಿ೦ದ ತನ್ನ ಭುಜ ಹೊಟ್ಟೆ ಗಟ್ಟಿಯಾಗಿ ಹಿಡಿದು ಅಳಲಾರ೦ಬಿಸಿದಳು! ಮು೦ದೆ ನೋಡಿದರೆ ನನ್ನೊಟ್ಟಿಗಿದ್ದವರೆಲ್ಲಾ ಸಾಗಿ ಹೋಗಿದ್ದರು. ಆ ಹುಡುಗಿಯ ಚಿಕ್ಕಮ್ಮ ಹೊರತು ಅವಳೊಟ್ಟಿಗಿದ್ದವರೂ ಸಹ ಆ ಜನರ ನಡುವೆ ಅಲ್ಲೆಲ್ಲೂ ಕಾಣಲಿಲ್ಲ. ಅವಳ ಚಿಕ್ಕಮ್ಮ, ಏನಾಯ್ತು? ಯಾಕಳ್ತಿದ್ದೀಯಾ? ಅ೦ತ ಕೇಳುತಿದ್ದರೂ ಯಾವುದಕ್ಕೂ ಆ ಹುಡುಗಿ ಉತ್ತರಿಸಲಾಗದೆ ಇನ್ನೂ ಜೋರಾಗಿ ಅಳತೊಡಗಿದಳು! ಅವಳ ಚಿಕ್ಕಮ್ಮನ ಮುಖದಲ್ಲಿ ಭಯ ಆತ೦ಕ!  ಆ ಹುಡುಗಿಯ ಕಡೆ ನೋಡುತಿದ್ದ೦ತೆಯೇ ಅವಳ ಉಸಿರುಗಟ್ಟಿ ಬಿಕ್ಕಳಿಕೆ ಶುರುವಾಯಿತು. ಯಾರ ಬಳಿಯಾದರು ನೀರಿದ್ದರೆ ಕೊಡಿ ಅ೦ತ ಕೇಳೋಕೆ ಹೋದೆ, ಯಾರ ಬಳಿಯೂ ಇರಲಿಲ್ಲವಾದರು – ಯಾವ ಭಕ್ತರೂ ಸಹ ಏನಾಯಿತು ಈ ಹೆಣ್ಣು ಮಗಳಿಗೆ ಅ೦ತ ಕೇಳಲೂ ಸಹ ಮು೦ದಾಗಲಿಲ್ಲ. ಗೋವಿ೦ದ -  ಗೋವಿ೦ದನೆ೦ದು ಭಜಿಸಿಕೊ೦ಡು ನಮ್ಮನ್ನೇ ನೋಡಿಕೊ೦ಡು ಮು೦ದೆ ಸಾಗುತಿದ್ದರು. ದೇವರ ಸನ್ನಿಧಿಯಲ್ಲಿ ಈ ರೀತಿಯ ಅಸಹಾಯಕ ಪರಿಸ್ತಿತಿ, ಯಾರ ಕಡೆ ತಿರುಗಿದರೂ ಏನೂ ಪ್ರಯೋಜನವಾಗುತಿಲ್ಲ.... ಯಾರಾದರು ಮು೦ದೆ ಬ೦ದು ನೋಡಿ ಅ೦ತ ಜೋರಾಗಿ ಚೀರಿದೆ... ಪ್ರಯೋಜನವಿಲ್ಲ!!.  ನಡುಬೀದಿಯಲ್ಲಿ ಅಪಘಾತವಾಗಿ ಅಳುತಿರುವ ಹೆಣ್ಣುಮಗಳನ್ನು ಲಕ್ಷಿಸದೆ ಹಾದು ಹೋಗುತಿದ್ದ ಜನಜ೦ಗುಳಿಯನ್ನು ಕ೦ಡ ಅನುಭವವದು.

ಕಡೆಗೆ ಗರ್ಭಗುಡಿಯ ಮು೦ದೆ ನಿ೦ತು ಜನರನ್ನ ಸಾಗಿಸುತಿದ್ದ Volunteerರೊಬ್ಬರನ್ನು ದೂರದಿ೦ದಲೇ ನೀರಿದ್ದರೆ ಕೊಡಿ ಅ೦ತ ಕೇಳಿದೆ. ನಮ್ಮನ್ನ ನೋಡಿ, ಅಲ್ಲಿಯೇ ಪಕ್ಕದಲ್ಲಿದ್ದ ಮರದ ಪೆಟ್ಟಿಗೆಯೊ೦ದರ ಮೇಲೆ ಕುಳಿತುಕೊಳ್ಳಿ ಅ೦ತ ಸನ್ಹೆ ಮಾಡಿದರು. ಆ ಹುಡುಗಿಯನ್ನ ಕೂರಿಸಿ ಒಮ್ಮೆ ನೋಡಿದೆ, ಅವಳ ಅಳುವಿನಲ್ಲಿ ಸಹಜತೆಯಿರಲಿಲ್ಲ. ಅವಳ ಕೈ ಹಿಡಿದು, ಹಣೆಗೊಮ್ಮೆ ಮುತ್ತಿಟ್ಟು ಅಳಬಾರ್ದು ಸಮಾದಾನ ಮಾಡಿಕೋ ಅ೦ತ ಹೇಳಿ ತಬ್ಬಿಕೊ೦ಡೆ! ಆ Volunteer ನೀರಿನ ಬಾಟಲಿ ತ೦ದು ಕೊಟ್ಟರು. ನೀರು ಕುಡಿಸಿ, ಈಗ ಹೇಳಮ್ಮ ಏನಾಯಿತು ಅ೦ತ ಕೇಳುತಿದ್ದ೦ತೆ ನನ್ನ ಮುಖ ನೋಡಿ "aunty, someone….. some boy I don’t know aunty he held my stomach, he pinched me hard, here, here, here tightly he hurt me ...." ಅ೦ತ ಮುಖ ಮುಚ್ಚಿಕೊ೦ಡು ಜೋರಾಗಿ ಅಳೋಕೆ ಶುರುವಿಟ್ಟಳು :( ...... ಮೂಕಳಾಗಿಹೋದೆ.... ಭಗವ೦ತಾ……. ನಿಜವಾಗಿಯೂ ನಿನ್ನ ಸನ್ನಿಧಿಯಲ್ಲಿ ಪು೦ಡ ಪೋಕರಿಗಳು ಹೀಗೆಲ್ಲಾ ಮಾಡೋಕೆ ಸಾಧ್ಯನಾ?????????????? ಆ ಹುಡುಗಿಯ ಅಳುವಿನೊಡನೆ ನನ್ನಲ್ಲಿ ಅಡಗಿದ್ದ ದುಗುಡ ಕಣ್ಣೀರಾಗಿ ಉಕ್ಕಿ ಬ೦ತು..... ಅರಿವಿಲ್ಲದೆಯೇ ಹಲ್ಲು ಮಸಿದು ಅಲ್ಲಿ ನೆರೆದಿದ್ದ ಜನರ ಕಡೆ ಒಮ್ಮೆ ನೋಡಿದೆ…. ಆ ಹುಡುಗಿಯನ್ನ ಮತ್ತೊಮ್ಮೆ ತಬ್ಬಿಕೊ೦ಡು ಬೆನ್ನು ನೀವಿ ಸಮಾದಾನಿಸಿದೆ…. ಅವಳು ಬಿಕ್ಕಿ ಬಿಕ್ಕಿ ಅಳುತಿದ್ದರೆ ಕರುಳು ಕಿವುಚಿದ೦ತಾಗಿ ಅದೊ೦ದು ದೇವಸ್ಥಾನವೆ೦ದೇ ಮರೆತುಹೋಯ್ತು. ವಾಸ್ತವಕ್ಕೆ ಬರುಲು ಸ್ವಲ್ಪ ಸಮಯವೇ ಹಿಡಿಯಿತು.

ಆಯ್ತಾ ಹೋಗೋಣ್ವಾ? ಅ೦ತ ಕೇಳಿ ಅವಳನ್ನ ಎಬ್ಬಿಸಿಕೊ೦ಡು ಆ ಮರದ ವೇದಿಕೆಯನ್ನ ಮತ್ತೆ ಹೇಗೆ ಹತ್ತುವುದು ಅ೦ತ ನೋಡುತಿದ್ದೆ. ನಮ್ಮನ್ನೇ ನೋಡುತಿದ್ದ ಆ Volunteer ನನ್ನ ಬಳಿ ಬ೦ದು “ಅಲ್ಲೆಲ್ಲಿ ಹೋಗ್ತಿದ್ದೀರ – ಬನ್ನಿ ಈ ಕಡೆ” ಅ೦ತ ತೆಲುಗಿನಲ್ಲಿ ಹೇಳಿ ಮರದ ವೇದಿಕೆಯ ಬಲಗಡೆಯಿದ್ದ ಪುಟ್ಟ ಗೇಟಿನ ಕೀ ತೆಗೆದು ಒಳಗೆ ಕರೆದರು !!!!!!!! ಅದು V.V.I.P ಗೇಟ್…………………… ಆ ಗೇಟೀನ ಮೂಲಕ ಹೋಗಿ ನಿ೦ತಿದ್ದು ಸೀದ ಗರ್ಭಗುಡಿಯ ಬಾಗಿಲಿನ ಮು೦ದೆ !!!!! ವಿಸ್ಮಯವೆನ್ನಬೇಕೊ, ಲೀಲೆ ಎನ್ನಬೇಕೊ, ಅವನಿಗೆ ನಮ್ಮ ಕೂಗು ಕೇಳಿಸಿತೆನ್ನಬೇಕೊ......... ದೇವರನ್ನ ನೋಡು ನೋಡುತ್ತಲೇ ಭಾವಗಳೆಲ್ಲ ಮೂಲೆಗು೦ಪಾದವು…. ಮೂಕಳಾಗಿ, ವಿಸ್ಮಿತಳಾಗಿ ಭಗವ೦ತನನ್ನ ಕಣ್ತು೦ಬಿಕೊ೦ಡು ನೋಡಲಾರ೦ಭಿಸಿದೆ. ಬಣ್ಣ-ಬಣ್ಣದ ಹೂಗಳ ವಿಜೃ೦ಬಣೆಯಲ್ಲಿ ಅಲ೦ಕೃತನಾದ ಸ್ವಾಮಿ!!!! ಇಷ್ಟೊ೦ದು ಹತ್ತಿರದಿ೦ದ, ನನ್ನ ಜೀವಮಾನದಲ್ಲಿ!!! ಯಾರೂ ಇರದ ಪ್ರಶಾ೦ತತೆಯಲ್ಲಿ ತಿಮ್ಮಪ್ಪನನ್ನ ನೋಡಿಯೇ ಇರಲಿಲ್ಲ... ನೋಡುವ ಭಾಗ್ಯ ಒದಗುವುದೆ೦ದು ಎ೦ದಿಗೂ ಎಣಿಸಿರಲಿಲ್ಲ! ಅವನ ಅಪರಿಮಿತ – ದಿವ್ಯ ಶಕ್ತಿಯಲ್ಲಿ ತೇಲಿಹೋದ೦ತ ಅನುಭವ. ಎದುರಿಗೆ ನಿ೦ತು ಕೇಳಬೇಕಾದ್ದೆಲ್ಲ ನೆನಪೇ ಆಗಲಿಲ್ಲ. ಆ ಹೊತ್ತಿಗೆ - ಕಣ್ಣು ಹರಿದಕಡೆಯೆಲ್ಲ ಕ೦ಡದ್ದು ಭಗವ೦ತನ ದಿವ್ಯಮೂರ್ತಿಯೇ!! ಅದಾವ ಧ್ಯಾನವೋ, ಅದಾವ ಮ೦ತ್ರವೋ, ಎಲ್ಲೆಲ್ಲೂ ಅವನ ಧ್ಯಾನವೇ...  ಬಿಕ್ಕಳಿಸುವ ಕಣ್ಣೀರ ಧಾರೆ ನಿಲ್ಲಲೇ ಇಲ್ಲ...

ಸುಮಾರು ೪-೫ ನಿಮಿಷಗಳ ನ೦ತರ, “ಇ೦ಕ ವೆಳ್ಳ೦ಡಿ ವೆಳ್ಳ೦ಡಿ” ಅ೦ತ ಹೇಳಿಸಿಕೊ೦ಡ ಮೇಲೆ, ಈ ಅವಕಾಶ ಒದಗಿಸಿಕೊಟ್ಟ  ಆ Volunteerಗೆ  ಧನ್ಯತೆಯ ನಮನವಿಟ್ಟು,  ಆ ಹುಡುಗಿ, ಅವಳ ಚಿಕ್ಕಮ್ಮಳ ಜೊತೆ ಹೊರಗೆ ನಡೆದೆ. ಕಾಯುತಿದ್ದ ಅವಳ ಕುಟು೦ಬದವರಿಗೆ ಒಪ್ಪಿಸಿ, ನನ್ನ ಮನೆಯವರೆಲ್ಲಿದ್ದಾರೆ೦ದು ಹುಡುಕಲಾರ೦ಬಿಸಿದೆ. ನನ್ನ೦ತೆಯೇ ನನ್ನ ತ೦ಗಿ, ಭಾವ ಇಬ್ಬರೂ ನನ್ನ ಹುಡುಕುತ್ತಿರುವುದು ನೋಡಿದೆ, ಅವರ ಬಳಿ ಹೋಗುತಿದ್ದ೦ತೆ,........ಯಾಕೆ, ಏನಾಯ್ತು, ಇಷ್ಟೊ೦ದು ಬೆವರು, ಅಳ್ತಿದ್ದ್ಯಾ.... ಹಿ೦ದೆ ಇದ್ಯಾ, ಜೊತೆಗಿರಬಾರ್ದಿತ್ತ ಎನ್ನುವ ಅವರ ಪ್ರಶ್ನೆಗಳಿಗೆ ಆ ಕ್ಷಣದಲ್ಲಿ ನನ್ನಲ್ಲಿ ಯಾವ ಉತ್ತರವೂ ಇರಲಿಲ್ಲ. .................

ಜೀವನದಲ್ಲಿ ಆಗಿಹೋಗುವ ಅನುಭವಗಳೆಷ್ಟೊ..... ಈ ರೀತಿಯ ಒ೦ದು ಅನುಭವದ ಬಗ್ಗೆ ಏನು ಹೇಳೋದು! ಎದುರಿಗೆ ಬ೦ದರೆ ಮೂಕಳಾಗಿಸಿಬಿಡುವ ತಿಮ್ಮಪ್ಪನ ಪಾದಕ್ಕೆ ಜೀವನವೇ ಅರ್ಪಣೆ.... ಬೇಡ ತ೦ದೆ, ನಿನ್ನ ಬಳಿ ಬ೦ದು ಏನನ್ನೂ ಮಾತನಾಡದೆ ಸುಮ್ಮನೆ ಕಣ್ತು೦ಬ, ಮನಸ್ತು೦ಬು ನೋಡಿಕೊ೦ಡೇ ಬ೦ದು ಬಿಡ್ತೀನಿ, ಮಾತು-ಕತೆಯೆಲ್ಲಾ ಇಲ್ಲಿ೦ದಲೇ ಇರಲಿ ಅ೦ತ ನಿರ್ಧರಿಸಿದೆ....... ನಾನೇನೇ ನಿರ್ಧರಿಸಿದರೂ "ಅವನದೇ ಲೀಲೆ......ಅವನದ್ದೇ ಬದುಕು" ಅಲ್ಲವೆ.....

- ಬಾಳೊ೦ದು ಭಾವಗೀತೆ -

Thursday, June 20, 2013

ನನ್ನೂರಿನ ಚ೦ದಿರ

ನನ್ನೂರಿನ ಚ೦ದಿರ
 

ಭುವಿ ಕಾಯವ ಲಾ೦ದ್ರ
ಕರ್ಮಯೋಗಿಯ೦ತೆ
ಹಿ೦ದಿರುಗಿ ನೋಡದೆ
ಸರ-ಸರನೆ ಸರಿದ೦ತೆ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ..... 

ಕದ್ದು ಕಾಡುವ
ಇಣುಕಿ ಕೆಣಕುವ
ಬಿದಿಗೆಯ ಚ೦ದಿರನ
ಮ೦ದ ನಗುವಿಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ಹುಣ್ಣಿಮೆಯ ಬೆಳದಿ೦ಗಳೇಕೆ
ಹುಸಿ - ಮುನಿಸಿನ
ಕ೦ಗಳಿಲ್ಲ
ಕದ್ದಿ೦ಗಳೂ ಇಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ನಾ ನಿ೦ತೆಡೆ - ನಾ ಹೋದೆಡೆ
ಹಿ೦ದಿ೦ದೆ ಬರುವುದಿಲ್ಲ 
ನುಸುಳಿ ಕಚಗುಳಿಯಿಡುವ
ತು೦ಟತನವೂ ಇಲ್ಲ
ನಾನಿರುವ ಊರಿನಲಿ…..ಚ೦ದಿರನ ಸುಳಿವಿಲ್ಲ.....

ಸುಳಿವಿಲ್ಲ..... ಸುಳಿವಿಲ್ಲ.....

RS
* * * ಬಾಳೊ೦ದು ಭಾವಗೀತೆ * * *

Monday, June 3, 2013

ಸೂಚನೆ : ಸಸ್ಯಹಾರಿಗಳಿಗೆ ಸೂಕ್ತವಲ್ಲ :)

ಹಿ ಹಿ ಹೀಗೊಂದು ಭಾನುವಾರ!

ಪ್ರತಿ ದಿನ ಬೆಳಗ್ಗೆ 6.30 ಕ್ಕೆ ಆಫಿಸ್ ಹೊರಡುವ ಸಮಯ, ಹಾಗಾಗಿ 5 ಗಂಟೆಗೆ ಏಳುವ ಅಭ್ಯಾಸ! ಅಮ್ಮ ನಮ್ಮೊಟ್ಟಿಗೆ ಉಳಿಯುವ೦ದಿನಿಂದ ಅರ್ಧ ಗಂಟೆ ಬೋನಸ್ ನಿದ್ದೆ, ಈ ನಡುವೆ ಏಳುವುದು 5.30ಕ್ಕೆ. ಭಾನುವಾರವೆಂದರೆ - ಬೇಕಾದಷ್ಟು ನಿದ್ದೆ ಮಾಡುವ ದಿನ, ಯಾರನ್ನೂ ಯಾರು ನಿದ್ದೆಯಿಂದೆಬ್ಬಿಸದೆ - ಯಾರು ಮೊದಲು ಏಳ್ತಾರೊ ಅವರೇ ಎಲ್ಲರಿಗು ಕಾಫಿ ಮಾಡಬೇಕು, ಇದು ನಾವು ರೂಡಿಸಿಕೊಂಡಿರುವ ಪದ್ಧತಿ. "ಕಾಫಿ" ಅಂತ ಅಮ್ಮ ಕೂಗುವವರೆಗೂ ಹಾಸಿಗೆ ಬಿಟ್ಟು ಏಳುವ ಪ್ರಾಣಿ ನಾನಂತೂ ಅಲ್ಲ. ಇವತ್ತು ಭಾನುವಾರ, ಆರಾಮ್ ನಿದ್ದೆ, ಅಮ್ಮನ ಕೂಗು ಕೇಳಿ ಬಂದು ನಾನು ಕಣ್ ಬಿಟ್ಟಾಗ ಒಂಬತ್ತಕ್ಕೆ ಇನ್ನು ಹತ್ತು ನಿಮಿಷ ಬಾಕಿ.

ತಿಂಡಿಯಾದ ಮೇಲೆ ಅಮ್ಮನಿಗೆ ಏನನ್ನಿಸಿತೋ, ಒಂಟಿ ಕೊಪ್ಪಲ್ ಪಂಚಾಗ ಹಿಡಿದು, "ಇವತ್ತು ತಿನ್ನಬಹುದು" ಎಂದರು! "ಅಜ್ಜಿ ತಿನ್ನೋದಕ್ಕೂ ವಾರ - ನಕ್ಷತ್ರ ನೋಡ್ತಾರ?", ಅಂತ ಮಗಳ ನಗು / ಕೀಟಲೆ. "ಇವತ್ತು ಅರ್ಧ - ಮುಕ್ಕಾಲು KG ಮಟನ್ ತಂದು ಬಿಡು, ಸಾರು ಮಾಡಿ ಮುದ್ದೆ ಮಾಡ್ಬಿಡ್ತೀನಿ" ಅಂತ ಅಮ್ಮ ಹೆಳ್ತಿದ್ದಂಗೆ, ಮನೆಯಲ್ಲಿ ಸ್ಪೆಷಲ್ ಅಡುಗೆ ಅಂತ ಮಗಳಿಗೆ ಖುಷಿ. ಸರಿ ಮನೆಯ ಬಳಿ ಇರುವ "ಚಾಯ್ಸ್ ಚಿಕೆನ್" ಅಂಗಡಿಯಿಂದ ಕೋಳಿ ಅಥವಾ ಅದರ ಮೊಟ್ಟೆ ತಂದು ಅಭ್ಯಾಸ, ಹಿಂದೆಂದು ಹೋದದ್ದಿಲ್ಲ ಈಗ ಮಟನ್ ಅಂಗಡಿ ಹುಡುಕಿಕೊಂಡು ಎಲ್ಲಿ ಹೋಗಲಿ? ಮನೆಯಲ್ಲಿ ಮಟನ್ ಅಪರೂಪವೆಂದರೆ ವರುಷಕ್ಕೆಲ್ಲ ಒಂದು - ಎರಡು ಬಾರಿ ಅಷ್ಟೇ!!.... "ಅಪ್ಪ ಎಲ್ಲಿ ತರ್ತಿದ್ದು ಗೊತ್ತಾ?" ಅಂತ ಮಗಳು ಕೇಳಿದಾಗ ನೆನಪಾಯ್ತು ಇನ್ನು ಸ್ವಲ್ಪ ದೂರದಲ್ಲಿರುವ ಮೀನಿನಂಗಡಿ, ಅದರ ಪಕ್ಕದಲ್ಲೇ ಇರುವ ಮಟನ್ ಅಂಗಡಿ. ಅಲ್ಲಿ ಹೋದ ಮೇಲೆ ತಿಳಿಯಿತು ಅದು "ರೆಹಮಾನ್ ಮಟನ್ ಸ್ಟಾಲ್"! .

"KG - 400/-" ಅಂತ ಬರೆದ ಸ್ಲೇಟು ನೇತಾಡುತ್ತಿತ್ತಾದರು ಅಂಗಡಿ ತುಂಬಾ ಊರಹಬ್ಬ ಮಾಡುವ೦ತೆ ಜನ-ಜಂಗುಳಿ. ನನ್ನ ಸರದಿ ಬರುವ ಹೊತ್ತಿಗೆ ಮುಂದಿರುವವರೆಲ್ಲ, "ರೆಹಮಾನ್ ಭಾಯ್,- .......ಅದು ಬೇಡ, ಇದು ತೆಗಿರಿ, ಇದನ್ನ ಹಾಕಿ, ಬಿಡಿ ತೂಕ ಏನಾಗುತ್ತೆ, ಓದ್ವಾರ ಕೊಟ್ಟಿದ್ದು ಸ್ವಲ್ಪ ಬಲ್ತೋಗಿತ್ತು, ಮತ್ತೆ ಅದನ್ನೇ ಹಾಕ್ತೀಯಲ್ಲಪ್ಪಾ ತೆಗಿ ತೆಗಿ, ಇಲ್ನೋಡು ಇದನ್ನ ಸ್ವಲ್ಪ ಹಾಕು, ಯಾವ್ದಂದ್ರೆ ಅದನ್ನ ಹಾಕ್ಬೇಡ.... " ಹೀಗೆ ಏನಾದರೊಂದು ಹೇಳ್ತಿರೊದನ್ನ ಗಮನಿಸಿದೆ. ಹೀಗೆಲ್ಲ ಉಂಟೆ? ಅಂಗಡಿಯವನನ್ನ ಏನು ಕೇಳಬೇಕೋ ತಿಳಿಯುತ್ತಿಲ್ಲವಲ್ಲ? ಯಾವುದು ಬೇಕು - ಯಾವುದು ಬೇಡ ಅಂತ ಹೆಂಗೆ ಹೇಳೋದು? ಅದರ ಬಗ್ಗೆ ಗೊತ್ತಿದ್ದರೆ ತಾನೆ ಹೇಳೋಕೆ / ಕೇಳೋಕೆ! ನನ್ನ ಸರದಿ ಬರುವ ಹೊತ್ತಿಗೆ, ಎಷ್ಟುದ್ದ ನೇತಾಡುತಿದ್ದ ಮಟನ್ ಇಷ್ಟೇ ಆಗಿ ಹೋಗಿದೆ, ಎಲ್ಲರಿಗೂ ಕೊಟ್ಟು-ಬಿಟ್ಟು ಉಳಿದಿರುವುದನ್ನ ಕೊಡ್ತಾನೆಯೆ? ಪೇಚಾಟ! ಸ್ವಲ್ಪ ಮುಜುಗರವಾದರೂ, ಅಕ್ಕ-ಪಕ್ಕ ನಿಂತು ನೋಡುತಿದ್ದ ಜನರ ನಡುವೆಯೇ, "ನೋಡಿ ಇದೆ ಮೊದಲು ಬರ್ತಿರೋದು, ಯಾವುದು ತಗೋಬೇಕೊ / ತಗೊಬಾರ್ದೊ ಗೊತ್ತಾಗ್ತಿಲ್ಲ, ದಯವಿಟ್ಟು ಒಳ್ಳೇದು ಕೊಡಿ, ಮನೆಗೆ ಹೋದ್ಮೇಲೆ ಯಾರು ನನ್ನ ಬಯ್ಯಬಾರದು ಅಂತ ಮಟನ್ ಕೊಡಿ ಪ್ಲೀಸ್" ಅಂತ ರೆಹಮಾನನನ್ನು ಕೇಳಿಕೊಂಡೆ. "ಯೋಚನೆನೆ ಮಾಡ್ಬೇಡಿ ಮೇಡಂ - ಇದ್ರಲ್ಲಿ ಮಿಟಾಯಿ - ಮಿಟಾಯಿ ಮಾಡ್ಬೋದು ಅಷ್ಟು ಚೆನ್ನಾಗಿದೆ, ಇಲ್ನೋಡಿ ಇದನ್ನ ಹಾಕ್ಲ?" ಅಂತ ಯಾವುದೋ ಒಂದು ಮಾಂಸದ ತುಂಡನ್ನು ತೋರಿಸಿದ. ಅದೇನೆಂದು ಗೊತ್ತಿಲ್ಲವಾದರು, ಯಾವುದಕ್ಕೂ ಬೇಡ ಅನ್ನುವುದೇ ಒಳ್ಳೆಯದು ಅಂತ, "ಬೇಡ ಬೇಡ ಹಾಕಬೇಡಿ" ಅಂದೆ. ಅಷ್ಟಕ್ಕೇ ಸುಮ್ಮನೆಲ್ಲಿದ್ದ ರೆಹೆಮಾನ, "ಇದು ಮೇಡಂ" ಅಂತ ಇನ್ನೇನನ್ನೋ ತೋರಿಸಿದ. "ಹಾ, ಲಿವರ್ ಅಲ್ವ ಹಾಕಿ ಹಾಕಿ" ಅಂದೇ, "ಹೆ ಹೆ ಅದು ಲಿವರ್ ಅಲ್ಲ ಹಾರ್ಟು" ಅಂತ ಹೇಳಿ ನಗುತ್ತ ಇನ್ನಷ್ಟು ಮುಜುಗರ ಮೂಡಿಸಿದ.

ಅಂತೂ ಇಂತೂ ಅದನ್ನ ಮನೆಗೆ ತಂದು ಅಮ್ಮನ ಕೈಗಿಟ್ಟು, "ಹೇಗಿದೆಯೋ ಗೊತ್ತಿಲ್ಲ - ಅವನು ಕೊಟ್ಟ - ನಾನು ತಂದೆ - ಇದ್ರಲ್ಲಿ ಮಿಟಾಯಿ ಮಾಡಬಹುದಂತೆ" ಅಂದೇ..... "ಹ ಹ ಹ ಮಟನ್ ಮಿಟಾಯಿ - ಬರ್ಫಿ ಮಾಡ್ತೀರ ಅಜ್ಜಿ? ಇದೊಂಥರ ಚೆನ್ನಾಗಿದೆ", ಅಂತ ಮಗಳು. ಸಧ್ಯ ರೆಹಮಾನ್ ಅಂಗಡಿಯ ಮಿಟಾಯಿ ಅಮ್ಮ ಓಕೆ ಮಾಡಿದರು.

ಮಳೆಯೂ ಬರದ ಬಿಸಿಲು ಇರದ ಸಣ್ಣ ಚಳಿಯಲ್ಲಿ ಸುಖಿಸುವ ಸೋಮಾರಿ ಭಾನುವಾರವಿದು. ಇಂಥ ಸ್ಪೆಶಲ್ ಅಡುಗೆ ಮಾಡಿದಾಗ, ತಮ್ಮ ತಟ್ಟೆಯಿಂದಾಯ್ದು ಮೆತ್ತಗಿರುವ ಸಣ್ಣ ಸಣ್ಣ ತುಂಡುಗಳನ್ನ ತಮ್ಮ ಮಕ್ಕಳ ಬಾಯಿಗೆ ತುತ್ತಿಡುವುದು ಅಪ್ಪಂದಿರಿಗೆ ಒಂದು ವಿಶೇಷ ಸಂತೃಪ್ತಿ ಕೊಡುವ ಸಂಗತಿ. ಮಗಳಿಗೂ ಈ ರೀತಿ ತಿನ್ನಿಸುವಾಗ ಅವಳ ಅಪ್ಪನ ಮುಖದಲ್ಲಿ ಚಿಮ್ಮುತಿದ್ದ ಒಂದು ಖುಷಿಯನ್ನ ನಾನು ಸಹ ನೋಡಿದ್ದೇನೆ.


ತಡವಾದಷ್ಟು ಹಸಿವೆ ಹೆಚ್ಚು! ಎಲ್ಲರೂ ಊಟಕ್ಕೆ ಕುಳಿತದ್ದಾಯ್ತು. ಮಗಳಿಗೆ ತಿನಿಸಲು ನನ್ನ ತಟ್ಟೆಯಲ್ಲಿ ಕೆದಕಿ - ಹುಡುಕಿ, ಎರಡು - ಮೂರು - ನಾಕು ಬಾರಿ ತಿನಿಸಿದ ಮೇಲೆ, ನಿಜವಾಗಿಯೂ ಎಂತದ್ದೋ ಖುಷಿ. ಇಂದಿಗೂ ಮಗಳಿಗೆ ತಿನ್ನಿಸುವುದು ತಪ್ಪಿಲ್ಲ, ಅನೇಕ ಬಾರಿ "ನೀನೆ ತಿನ್ಸಿದ್ರೆ ತಿಂತೀನಿ" ಅನ್ನೋ ಹಠ ಹಿಡೀತಾಳೆ.  ಅವಳಿಗೆ ತಿನ್ನಿಸುವುದೊಂದು ಪ್ರೀತಿಯಾದರೆ - ಈ ರೀತಿ  ಮಟನ್ / ಚಿಕನ್ ಮಾತ್ರ ತಟ್ಟೆಯಿಂದ ಹುಡುಕಿ ಕೆದಕಿ ತಿನ್ನಿಸುವುದು ನನಗಿನ್ನೂ ಹೊಸತು. ಇದೊಂದು ವಿಚಿತ್ರ ಅನುಭವ, ಹೀಗಿರಬಹುದೆಂದು ಊಹಿಸಿರಲಿಲ್ಲ! 

ಅಂದ ಹಾಗೆ, ರೆಹಮಾನನ ಮಾತು ನಿಜ, ನನ್ನ ಕಸಿವಿಸಿಯ ಹೊರತು ಅವನ ಅಂಗಡಿಯ ಮಟನ್ ನಿಜಕ್ಕೂ ಚೆನ್ನಾಗಿತ್ತು, ಅಮ್ಮನ ಕೈ ರುಚಿ ಕೂಡಿದ ಅಡುಗೆಗೆ ಸಾಟಿ ಉಂಟೆ!  ಇವೆಲ್ಲದರ ನಡುವೆ, ಮತ್ತೊಮ್ಮೆ ಅಂಗಡಿಗೆ ಹೋದಾಗ ಏನು ಕೇಳಬೇಕು ಅನ್ನುವ ವಿಷಯವಂತು ಇನ್ನು ಗೋಜಲಾಗಿಯೇ ಉಳಿದಿದೆ!!!



Wednesday, May 15, 2013

ಶೋಕವಿಲ್ಲಿ ಸಂಭ್ರಮಿಸಬೇಕಿದೆ


ಈ ದಿನ ಎಂದಿನಂತಲ್ಲ, ವಿಶೇಷ! ಈ ದಿನಕ್ಕಾಗಿ ಎಷ್ಟು ತಿಂಗಳುಗಳಿಂದ ತಯ್ಯಾರಿ! ಕಳೆದ ಒಂದು ವಾರದಿಂದ ನಿದ್ದೆ ಮಾಡಿದ್ದು ಅಷ್ಟಕ್ಕಷ್ಟೇ. ನನಗೆ ಮಾತ್ರವಲ್ಲ - ಈ ದಿನಕ್ಕಾಗಿ ಕಾದು ಸಿದ್ದತೆ ನಡೆಸಿದ ಎಲ್ಲರಿಗೂ ಹೀಗೆ ಇರಬಹುದ? ನಿನ್ನೆ ಸಂಜೆ ಎಲ್ಲರಿಗೂ ಒಮ್ಮೆ ಫೋನಾಯಿಸಿ - ಎಲ್ಲವೂ ಸರಿಯಾಗಿದೆಯೆಂದು ತಿಳಿದಿದ್ದೆ. ಆದರೆ, ಕಾಡುತಿದ್ದ ವಿಷಯವೇ ಬೇರೆ.

ಜೀವನದ ದಿಕ್ಕುಗಳೆಲ್ಲ ಬದಲಾಗಿ ಇಂದಿಗೆ ಸರಿಯಾಗಿ ಐದು ತಿಂಗಳು. ರಾಯರ ಗುಡಿಯ ಪುರೋಹಿತರನ್ನ ನೋಡಿ, ಕೊಡಬೇಕಾದದ್ದು ಕೊಟ್ಟು ಮನೆಗೆ ಬಂದೆ. ವಡೆ ಪಾಯಸ ಇತ್ಯಾದಿ ಎಲ್ಲವು ದೀಪ ಹಚ್ಚಿದ ಫೋಟೋ ಮುಂದೆ - ನಂತರ ಮಹಡಿಯ ಮೇಲೆ. ಯಾರನ್ನು ಕಾಯಿಸದ ಜೀವಾತ್ಮವದು - ಇಷ್ಟವಾದ ತಿನಿಸು ಕಚ್ಚಿಕೊಂಡು ಹಾರಿದೆ. ಹಾ ಹೌದಲ್ವೆ ತಮಗೂ ತಿಳಿದಿರುವನ್ತದೆ ಈ ದಿನದ ವಿಶೇಷ. ನನಗಿನ್ನು ಸಮಯವೆಲ್ಲಿದೆ, ತಯ್ಯಾರಾಗಬೇಕಿದೆ! ಮನೆಯವರೆಲ್ಲ ಮತ್ತೆ - ಮತ್ತೆ ಹೇಳ್ತಿದ್ದು ಅದನ್ನೇ, "ಅತ್ಕೊಂಡು ಮುಖ ಊದಿಸ್ಕೊಂಡು ಫೋಟೋ - ಕ್ಯಾಮೆರ ಕಣ್ಣಿಗೆ ಬೂದುಗುಂಬಳ ಆಗ್ಬೆಕೇನು?". ಅದು ಕೂಡ ಸರಿಯೇ.

ಶೋಕವಿಲ್ಲಿ ಸಂಭ್ರಮಿಸಬೇಕಿದೆ! ... ಹತ್ತು ಜನರಿಗೆ ಸಮಜಾಯಿಸಬಹುದು, ಇಲ್ಲಿ ನೂರು ಮಂದಿ. ಇವರ ಹಣ ಖಾತೆಗೆ ಜಮೆಯಾಗಿ ತಿಂಗಳುಗಳೇ ಕಳೆದಿವೆ, ಇನ್ನು ತಡ ಮಾಡುವ ಹಾಗಿಲ್ಲ. ಈಗಾಗಲೇ ನನ್ನಿಂದಾಗಿ ಬಹಳಷ್ಟು ತಡವಾಗಿದೆ, ಇದು ನನ್ನ ತಂಡದ ಪ್ರತಿಷ್ಠೆ - ನನ್ನ ಬಾದ್ಯತೆ ಕೂಡ, ಹಿಂದಿರುಗುವ ಮಾತಿಲ್ಲ.

ಕಳೆದೈದು ತಿಂಗಳುಗಳಿಂದ ಸೀರೆಗಳ ಕಡೆ ಕಣ್ಣಾಯಿಸಿಯೇ ಇರಲಿಲ್ಲ. ತಂಗಿ ಮತ್ತೆ ಮತ್ತೆ ಯಾವ ಸೀರೆ ಉಡ್ತೀಯ ಅಂತ ಕೇಳಿದಾಗಲು - ಯಾವುದೋ ಒಂದು ನಿರ್ಲಕ್ಷೆ. ಮತ್ತೆ ಈ ದಿನಕ್ಕೆ ತೆಗೆದದ್ದು ಮಾತ್ರ ಪೆಟ್ಟಿಗೆ ತೆರೆದಾಗ ಕಂಡ ಮೊದಲ ಸೀರೆ. ಅದರಲ್ಲೂ ನೂರಾರು ನೆನಪುಗಳು! ಸಧ್ಯಕ್ಕೆ, ಅಲಂಕಾರ ಅನಿವಾರ್ಯ! ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ. ಹೂ ಇಲ್ಲದ ರೇಶಿಮೆ ಸೀರೆಗೆ ಸೊಬಗೆಲ್ಲಿ? ಮುದ್ದಾಗಿ ಕಾಣ್ತಿದಾಳೆ ಮಗಳು - ಅವಳ ತಲೆಗೆ ಹೂ ದಿಂಡು ಮೂಡಿಸಿದ್ದಾಯ್ತು. ಅತಿಯಾಗಿ ಅವಳನ್ನೇ ನೋಡುವಾಸೆ, ತಡೆದೆ - ಹನಿ ಜಾರಿ ಮುಖದ ಮೇಲಿನ ಅಲಂಕಾರ ಹಾಳಾದೀತು, ಆಗಬೇಕಾಗಿರುವ ಕೆಲಸಗಳು ಬಹಳಷ್ಟಿವೆ!

ರೂಮಿನಿಂದ ಹೊರ ಬಂದ ಒಂದೆರಡು ನಿಮಿಷದಲೇ ಅಮ್ಮನ ಕಣ್ಣಲ್ಲಿ ಬಾಷ್ಪ! "ಹಾಗ್ನೋದ್ಬೇಡಮ್ಮ ದೃಷ್ಟಿ ಆಗುತ್ತೆ" ಅಂತ ತಮಾಷೆ ಮಾಡಿಕೊಂಡೆ ಅಮ್ಮನ ಕಾಲು ಮುಟ್ಟಿ ನಮಸ್ಕರಿಸಿದ್ದಾಯ್ತು. ಚಪ್ಪಲಿ ಹಾಕಿಕೊಂಡು ಮನೆಯಿಂದ ಹೊರಟಾಗ ಕಾಡಲು ಶುರುವಾಗಿದ್ದು ಮತ್ತದೇ - ಮತ್ತದೇ ವಿಷಯ. ಇದ್ದಕ್ಕಿದ್ದ ಹಾಗೆ ಈ ಪಾಟಿ ತಯ್ಯಾರಾಗಿ ಹೋಗ್ತಿದ್ದ್ರೆ ಜನರೇನು ಅಂದುಕೊಂಡಾರು? ಆತಂಕ, ಭಯ - ಮೂರು ಅಂತಸ್ತಿನ ಒಂದೊಂದು ಮೆಟ್ಟಿಲು ಇಳಿದಾಗಲು ಒಂದೊಂದು ಭಾವ! ಅರೆರೆ, ಛೆ ...... ಕಾರಿನ ಕೀ ಮನೆಯಲ್ಲೇ ಬಿಟ್ಟು ಇಳಿದು ಬಂದ್ನೆ! ಪಾರ್ಕಿಂಗ್ನಿಂದ ಮನೆಯ ಕಡೆಗೆ ಮತ್ತದೇ ದಾರಿ ಹಿಡಿಯಬೇಕಿದೆ, ಅವರಿವರ ಕಣ್ಣುಗಳ ಹೆದರಿಸುವ ಭಯ. ಅಮ್ಮನನ್ನೋ, ತಂಗಿಯನ್ನೋ ಕೆಳಗಿಂದಲೇ ಜೋರಾಗಿ ಕೂಗಿ ಕೀ ತೆಗೆಸಿಕೊಳ್ಳಬಹುದು. ಮುಜುಗರದಿಂದ ಹೆಣವಾಗಿ ಹೋಗಿದ್ದೇನೆ, ಮತ್ತದೇ ಮೂರಂತಸ್ತು ಹತ್ತಿ ಕೀ ತೆಗೆದುಕೊಂಡು ಬಂದದ್ದಾಯ್ತು. ಪಾರ್ಕಿಂಗ್ ಸೆಕ್ಯುರಿಟಿ ಸಿದ್ದಪ್ಪ, ಅವರಿಗೇನನಿಸ್ತೊ, "ಈ ತರಹ ನಿಮ್ಮನ್ನ ನೋಡೇ ಇರ್ಲಿಲ್ಲಮ್ಮ" ಅಂದ್ರು, "ಹೌದ ತಾತ - ನಾನು ಸಹ", ಅಂತಂದುಕೊಂಡೆ ಕಾರ್ ಹತ್ತಿಸಿ ಮನೆಯ ಮುಂದೆ ತರುವಷ್ಟರಲ್ಲಿ, ಮೆಟ್ಟಿಲಿಳಿದು ಬರುತಿದ್ದದ್ದು ಮಗಳು. ಅವಳಿಗೂ ಮುಜುಗರವೇನೋ - ವರ್ಷ ಕಳೆಯುವ ತನಕ ಯಾರ ಮನೆಗೂ - ಯಾವ ಶುಭ ಕಾರ್ಯಕ್ಕೂ ಹೋಗುವಹಾಗಿಲ್ಲವಂತೆ?!

ಸಭಾಂಗಣ ಹತ್ತಿರವಾಗುತಿದ್ದಂತೆ ಮತ್ತದೇ ಭಯ, ಯಾರನ್ನ ಹೇಗೆ ಮಾತನಾಡಿಸಬೇಕೋ? ಯಾರ ಬಳಿ ಹೇಗಿರಬೇಕೋ? ಇದೆಂಥ ವಿಧಿಯಾಟ. ನನ್ನೊಡನೆ ನನ್ನ ಸಮರ! ಯಾರನ್ನ ಮೆಚ್ಚಿಸಬೇಕಿದೆ? ನನ್ನ ಅಶ್ರು, ನನ್ನ ಯಾತನೆ, ನನ್ನ ಶೋಕ - ಎಲ್ಲವೂ ನನ್ನವೇ. ಉತ್ತರಿಸಬೇಕಾಗಿರುವುದು ದೇವರಿಗೆ, ನನ್ನೊಳಗಿನ ಧರ್ಮಪ್ರಜ್ಞೆಗೆ, ನಾ ಸೋತು ಗೆಲ್ಲುವ ನನ್ನಾತ್ಮಸಾಕ್ಷಿಗೆ. ಸಭಾಂಗಣದೊಳಗೆ ಕಾಲಿಡುತಿದ್ದಂತೆ ನನ್ನ ಪ್ರೀತಿಯ ತಂಡ! ಹಾಗೆ ನಿಂತಿದ್ದ ಉಸಿರೊಂದು ಹಿಂದಿರುಗಿ ಬಂದಂತೆ! ಎಂದಿನ ಹಾಗೆ ಅದಂತೆ - ಇದಂತೆ ಎನ್ನುವಷ್ಟರಲ್ಲಿ ಬಂದದ್ದು ನನ್ನ ಮನೆಯವರು - ನನ್ನ ಮಿತ್ರರು - ಗುರು ಹಿರಿಯರು. ಹಿಂಗಿದ್ದ ದೈರ್ಯ, ಕುಸಿದಿದ್ದ ವಿಶ್ವಾಸಕ್ಕೆ ಇವರಲ್ಲವೇ ಚೈತನ್ಯ? ಕಣ್ಣಂಚಿನಲ್ಲಿ ಜಾರುತಿದ್ದ ಹನಿಯನ್ನೇ ಗಮನಸಿ ಬಾಯಿಗೆ ಉಪ್ಪಿಟ್ಟು ತುರುಕಿದ್ದು ತಂಗಿ.

ಬಂದವರೆಲ್ಲ ಭಗವಂತನೇ ಕಳಿಸಿದ ದೇವತೆಗಳಿರಬೇಕು? ಅಬ್ಬಬ್ಬ! ತಾನು ಇದ್ದೀನಿ ಅಂತ ಸಾಬೀತು ಪಡಿಸೋಕೆ ಇವರುಗಳ ಮುಗ್ಧ ನಗುವಿನಲ್ಲಿ, ಅಭಿಮಾನ ತುಂಬಿದ ಮಾತುಗಳಲ್ಲಿ ನಿರೂಪಿಸಲು ತಯ್ಯಾರಾಗಿದ್ದಾನೆ. ಶತಮಾನಂ ಭವತಿ ಎಂದು ಹರಸಿದ್ದಾನೆ!

ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಕಡೆಗೂ ತಡೆಯಲಾಗದೆ ಉಕ್ಕಿಬಂದ ಕಣ್ಣ ಹನಿಗಳೊಡನೆ ಸಿಕ್ಕಿಬಿದ್ದೆ ಇವರುಗಳ ಕೈಗೆ. "ರೂಪಕ್ಕ ನೀವು ಮಾತ್ರ ಅಳಬಾರದು" - ಇದು ಸಾಂತ್ವನ, ಇದು ಆಜ್ಞೆ! ಮಗಳನ್ನ ಜೋರಾಗಿ ತಬ್ಬಿಕೊಳ್ಳಬೇಕಿದೆ, ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಬೇಕಿದೆ, ಹೆಪ್ಪುಗಟ್ಟಿರುವ ಅಳಲು ಕರಗಬೇಕಿದೆ.
ಮರುದಿನವೇ ಕಾರ್ಯಕ್ರಮದ ಭಾವಚಿತ್ರಗಳು ಎಲ್ಲೆಡೆ ಹರಿದಾಡಿದೆ. ನಿನ್ನೆ ಮಗಳನ್ನ ಕಣ್ಣಿಟ್ಟು ನೋಡದೆ ನನ್ನಿಂದ ನನ್ನನ್ನೇ ಕಟ್ಟಿ ಹಾಕಿದ್ದು ನಿಜ. ಈ ದಿನ ಅವಳ ಫೋಟೋ ನೋಡಿ ಬಿಕ್ಕಳಿಸಿ ಬಂದ ಅಳುವು, "ಅವರ ಅಪ್ಪನ ಹಾಗೆ" ಅಂತ ಪ್ರತಿಕ್ರಿಯಿಸಿ ಹೊರ ನಡೆದಿದೆ!................

Wednesday, February 20, 2013

ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ......

"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾಗ ವಿಚಾರಿಸುತಿದ್ದಾರೆ. ಆಗಲಿ, ನೋಡೋಣ ಅಂತ ಹೇಳಿ ಸುಮ್ಮನಾಗ್ತಿದೀನಿ.

ಯಾಕೋ ಈ ನಡುವೆ ಯಾರನ್ನೂ ಅಲ್ಲಿಗೆ ಕರೆದೊಯ್ಯುವ ಮುನ್ನ ಯೋಚಿಸುವನ್ತಾಗಿದೆ! NGO ಗೆ ಹೋದವರಲ್ಲಿ ಕೆಲವರಿಗೆ ಆ ಮಕ್ಕಳನ್ನ ಹೇಗೆ ಮಾತಾಡಿಸಬೇಕು, ಏನೇನು ಕೇಳಬೇಕು, ಏನೇನು ಕೇಳಬಾರದು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇರೋದಿಲ್ಲ. ಎಲ್ಲರೂ ಹೀಗಿರ್ತಾರೆ ಅಂತಲ್ಲ. ಆದ್ರೆ - ಹೀಗೂ ಇರ್ತಾರೆ ಅನ್ನೋದೇ ವಿಪರ್ಯಾಸ. ಅಲ್ಲಿಗೆ ಹೋಗುವ ಮುನ್ನ ನನ್ನದೊಂದು ನಿವೇದನೆ ಸದಾ ಇರುತ್ತದೆ. ಮಕ್ಕಳೊಡನೆ ಆಡಿ, ಅವರನ್ನ ನಗಿಸಿ, ಮುದ್ದಿಸಿ, ಮಾತನಾಡಿಸಿ ತಮ್ಮ ದಿನವನ್ನ ಅರ್ಥಪೂರ್ಣವಾಗಿಸಿ ಅಂತ. ಆದರು ಮಕ್ಕಳನ್ನು ಬೇಟಿಯಾದವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ!

"ಒಹ್, ನಿಂಗೆ ಅಮ್ಮ ಇಲ್ವಾ ಹಾಗಿದ್ರೆ?, ನಿಂಗೇ, ಒಹ್ ಇಬ್ರೂ ಇಲ್ವಾ? ಛೆ ಛೆ! ಪಾಪ, ಯಾವಾಗ್ ಬಂದ್ರಿ ಇಲ್ಗೆ? ಯಾರ್ ಕರ್ಕೊಂಡ್ ಬಂದಿದ್ದು? ನಿಂದು ಯಾವೂರನ್ತಾನೆ ಗೊತ್ತಿಲ್ವ? ನಿಮ್ಮಪ್ಪ ಅಮ್ಮ ನೆನಪಾಗ್ತಾರ? ನೆನಪಾದಾಗ ಏನ್ ಮಾಡ್ತೀರ? ಛೆ, ಅಯ್ಯೋ ಪಾಪ! ನಿಮಗೂ ಒಂದು ಮನೆ ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನಿಸಿರುತ್ತೆ ಅಲ್ವ?"



ಇಂಥ ಪ್ರಶ್ನೆಗಳಿಂದ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀಳಬಹುದೆಂದು ಯೋಚಿಸುವ ಗೋಜಿಗೂ ಹೋಗುವುದಿಲ್ಲ ಇವರು. ಆಶ್ರಮಕ್ಕೆ ಬಂದ ಅತಿಥಿಗಳೆಲ್ಲ ಹೋದ ಮೇಲೆ, ಕೆಲವು ಮಕ್ಕಳ ಮನಸ್ಥಿತಿಯಲ್ಲಿ ಏರು ಪೇರು ಕಾಣಬಹುದು. ಯಾರ ಬಳಿಯೂ ಮಾತನಾಡದೆ ಇದ್ದಕಿದ್ದ ಹಾಗೆ ಮಂಕಾಗಿಬಿಡ್ತಾರೆ. ಮತ್ತೊಮ್ಮೆ ಈ ಮಕ್ಕಳನ್ನ ಒಂದು ಮನಸ್ಥಿತಿಗೆ ತರುವಲ್ಲಿ ನಮ್ಮೆಲ್ಲರ ಪ್ರಯತ್ನ ಒಮ್ಮೊಮ್ಮೆ ವಿಫಲವಾಗುತ್ತೆ.

ಇತ್ತೀಚಿಗೊಬ್ಬರು, "ನೀವು ಹೇಳಿದ್ರಿ ಇದು ಅನಾಥಾಶ್ರಮ - Orphanage ಅಂತ, ನಾವೆಲ್ಲೋ ಅಪ್ಪ-ಅಮ್ಮ ಯಾರು ಇರದ ಅನಾಥರು ಅಂದುಕೊಂಡ್ವಿ" ಅಂತ ನನ್ನ ಕೇಳಿಯೇ ಬಿಟ್ಟರು. "ಯಾಕೆ ಸರ್, ತುಂಬ disappoint ಆಗೋಯ್ತ? ಏನೋ ಒಂದು image ಇಟ್ಟುಕೊಂಡು ಬಂದಿದ್ರಿ ಅನ್ಸುತ್ತೆ! ಸಧ್ಯ, ಈ ಮಕ್ಕಳಿಗೆ ಯಾರೂ ಇಲ್ಲದೆ ಯಾರಾದರೊಬ್ಬರು ಇದ್ದಾರಲ್ಲ ಅಂತ ಖುಷಿಪಡಬೇಕು ಅಲ್ವ? ನಿಜ, ಈ ಆಶ್ರಮದಲ್ಲಿ ಕೆಲವರಿಗೆ ಅಪ್ಪ, ಕೆಲವರಿಗೆ ಅಮ್ಮ, ಇನ್ನೂ ಕೆಲವರಿಗೆ ಯಾರೋ ಸಂಬಂಧಿಕರು ಅಂತ ಇದ್ದಾರೆ, ಇಬ್ಬರೂ ಇರದ ಮಕ್ಕಳಿಗೆ ಯಾರೂ ಇಲ್ಲ ಅಂತಲ್ಲ - ನಾವಿದೀವಿ" ಅಂತ ಹೇಳಬೇಕಾಯ್ತು. "ಅಲ್ಲಿದ್ದಾನೆ ನೋಡಿ, ಅವರಪ್ಪ ಆ ಹುಡುಗನ ಮುಂದೆಯೇ ಕೊಲೆಯಾಗಿ ಹೋದ, ಮತ್ತೊಬ್ಬ ಇದ್ದಾನಲ್ಲ ಅವನಮ್ಮ ಜೈಲಿನಲ್ಲಿ, ಇವನಪ್ಪ ದೊಡ್ಡ ಕುಡುಕ, ಇವರಮ್ಮ ಬಿಟ್ಟು ಎಲ್ಲಿಗೊದರೋ ಗೊತ್ತಿಲ್ಲ, ಅವನ ಚಿಕ್ಕಪ್ಪ ಅವನಿಗೆ ಕೊಟ್ಟ ಕಾಟದ ಗುರುತುಗಳು ಅವನ ಮುಖದಲ್ಲಿವೆ ನೋಡಿ, ಇವನು ಯಾವೂರಿಂದ ಓಡಿ ಬಂದನೋ ಗೊತ್ತಿಲ್ಲ, ಹೀಗೆ..... ಪಿಳಿ ಪಿಳಿ ಎಂದು ನೋಡುತಿರುವ ಪುಟ್ಟ ಕಣ್ಣುಗಳ ಹಿಂದೆ ಅನೇಕಾನೇಕ ಕಥೆಗಳಿವೆ, ಅವರನ್ನೆಲ್ಲ ಯಾಕೆ ಕೆಣಕಿ ಕಾಡ್ತೀರಿ?" ಅಂತ ಕೇಳಬೇಕನಿಸಿತ್ತು.

ಸೇವೆಯ ಹೆಸರಿನಲ್ಲಿ ಪುಣ್ಯಗಳಿಸಲು ಹೊರಟ ಮಂದಿಯ ನಡುವೆ ಅರಿವಿಲ್ಲದೆ ಪೆಟ್ಟು ತಿನ್ನುವ ಕಂದಮ್ಮಗಳು ಇವರು. ಸಮಾಜವನ್ನ ಹೆದರಿಸುವ ಶಕ್ತಿ / ಕಲೆ ಒಲಿಯುವು ಮುಂಚೆಯೇ ಇವರಲ್ಲಿ ಕೀಳರಿಮೆ ಮೂಡಿಸುವುದು ಎಷ್ಟು ಸರಿ? ಹಿಂದೊಮ್ಮೆ IT ಕಂಪನಿಯ ಗುಂಪೊಂದು ಆಶ್ರಮಕ್ಕೆ ಬಂದು ಹೋದ ಮೇಲೆ, "ರೂಪಕ್ಕ, ಅಳು ಬರೋತರ ಆಗ್ತಿದೆ" ಅಂತ ಕೃಷ್ಣ ಹೇಳಿದ್ದು ಈಗಲೂ ನೆನಪಿದೆ. ಅವನಿಗೆ ಸಮಜಾಯಷಿ ಹೇಳಿ ಮನೆಗೆ ಬಂದಾಗ ಮನಸು ಭಾರವಾಗಿತ್ತು, ಯಾರನ್ನ ಪ್ರಶ್ನಿಸೋದು? ಯಾರಿಗೆ ಉತ್ತರಿಸೋದು?

ಕೃಷ್ಣನ - ದೀಪಾವಳಿ

ದೀಪಾವಳಿ, ಎಲ್ಲರ ಮನೆಯಲ್ಲು ಸ೦ತಸ,
ರುಚಿ-ಅಡುಗೆ, ಹೊಸ-ಬಟ್ಟೆ, ಪಟಾಕಿಗಳ ಹಾವಳಿ!
ಕೃಷ್ಣನಿಗೆ ಮಾತ್ರ ಎ೦ದಿನ೦ತೆ ದಿನಚರಿ,
ಎದ್ದವನೇ ಆಶ್ರಮದ ಸುತ್ತ ಒಡೆದೆಸೆದು ಕಸ ಕಡ್ಡಿ,
ಗೋಡೆಗೊರಗಿ ಕುಳಿತ ಸುತ್ತಿಟ್ಟ ಚಾಪೆಯ ಹರಡಿ!

ಮನೆ ಮ೦ದಿಯೊಡನೆ ಬೆಳೆದ ಅನುಭವ ಅವನಿಗೆಲ್ಲಿ,
ಹಿ೦ದಿಲ್ಲ-ಮು೦ದಿಲ್ಲ,
ತೊಳೆದ ಎಂಜಲು ತಟ್ಟೆ ಹೊರತೊಂದು ನೆನಪಿಲ್ಲ!
ಒಡ್ಡುತನ - ಬಡತನಗಳ ನಡುವೆ ಹೇಗೆ ಬೆಳೆದು ಬ೦ದನೋ,
ಅ೦ತು ಸೇರಿದ್ದ ಆಶ್ರಮ - ಪುಣ್ಯಾತ್ಮರ ನೆರವೇನೋ!

ಅಲ್ಲಿರುವ ಅಣ್ಣ ತಮ್ಮ೦ದಿರೆ ಅವನಪಾಲಿಗೆಲ್ಲ,
ಪ್ರೀತಿ ಪ್ರೇಮ ತು೦ಬಿದ೦ತೆ ಬಾ೦ಧವ್ಯದ ಒಡಲ!
ಹ೦ಚಿಕೊಳ್ಳಲು ಅವನಲ್ಲಿ ಮಾತುಕತೆಗಳು ಅನೇಕ,
ಭಾವಗಳ ಬಚ್ಚಿಟ್ಟ - ಅವನಿಗೇಕೊ ಬಿ೦ಕ!

ಅ೦ದೊಮ್ಮೆ, ಇ೦ದೊಮ್ಮೆ ಬ೦ದು ಹೋಗುವ ಮ೦ದಿ,
ಹಣ್ಣು, ಹಾಲು, ಸಿಹಿತಿನಿಸು ಕೊಡುವುದು೦ಟು
ತಮ್ಮ ಗೆಲುವು ಸಂಭ್ರಮಗಳ ನೆಪವೊಡ್ಡಿ!
ಯಾರೊ ತೊಟ್ಟು ಎಸೆದ ಬಟ್ಟೆ, ಆಡಿಬಿಟ್ಟ ಆಟಿಕೆಗಳು,
ಓದಿಬಿಟ್ಟ ಹಾಳೆಗಳ ಅ೦ಟಿಸಿ ಓದುವ ಪುಸ್ತಕಗಳು!

ಅವರಿವರ ಕರುಣೆಗೆ ತುತ್ತಾಗಿ ಬೆಳೆಯುತ,
ಮು೦ದೇನು ಎ೦ದು ಅರಿಯದ ಬದುಕು!
ಪ್ರತಿ ಹೆಜ್ಜೆಗೂ ಭಿಕ್ಷೆ - ಮಾಡದ ತಪ್ಪಿಗೆ ಶಿಕ್ಷೆ,
ಕನಸ ಕಾಣಲು ಸಹ ಮನದೊಳಗೆ ಅಳುಕು!
ಕೃಷ್ಣನ ಪರಪುಟ್ಟ ಕಣ್ಣುಗಳು ಬೆದರಿದ೦ತೆ,
ಮೌನರೋದನೆ ಪ್ರಶ್ನಾರ್ತಕ ಒಳಗೊಳಗೆ!
"ನನಗೇಕೆ ಈ ಬಾಳು..?, ನಾನಿಲ್ಲಿ ಹೀಗೇಕೆ "..?
ಅ೦ಜಿಕೆ ನಡುವೆ ಅನಿವಾರ್ಯ -
 ಬಯಸುವುದು ಹೇಗೆ
ಹೊ೦ಬಣ್ಣದಾಕಾಶ, ಬೆಳಕಿನದೀವಳಿ?

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...