Wednesday, November 21, 2012

ಕೊನೆಗೂ ಮನೆಯಲ್ಲಿದ್ದ ಕಸ(ಬ) ಗುಡಿಸಿ ಎಸೆದೆವು!!


ಇಲ್ಲೊಬ್ಬ ಸಂತಸದಿಂದ ಕುಣಿದಿದ್ದಾನೆ!

ಮತ್ತೊಬ್ಬ "ಹಾಲು-ಕುಡಿದಂಗಾಯ್ತು" ಎಂದ

"ಸಿಹಿ ಉಂಡೇ ಬಿಡುವೆ" ಅಂದನವನು

"ಈ ದಿನ ನನ್ನದೇ ಔತಣ" ಎಂದನಿವನು

"ಅಬ್ಭಾ...ಅಂತೂ ಏನೋ ಒಂದು ಗತಿ ಆಯ್ತು"

"ಎಂಥ ಖುಷಿ ಕೊಡುವ ಸುದ್ದಿ" ಎಂದರೆ ಇನ್ನೊಬ್ಬ.....

" ***** " ಉಸುರಿದ ಅವನೊಬ್ಬ

"ಪಟಾಕಿ ಹೊಡಿಬೇಕನಿಸ್ತಿದೆ" ಮಗದೊಬ್ಬ ....

ಹೀಗೆ ಇನ್ನು ಅನೇಕಾನೇಕ ಪ್ರತಿಕ್ರಿಯೆಗಳು!!


ಸಾವನ್ನು ಸಂಭ್ರಮದಿಂದ ಆಚರಿಸುವ ಈ ಪರಿ ನಾನಂತೂ ನನ್ನ ಜೀವನದಲ್ಲೇ ಕಂಡಿದ್ದಿಲ್ಲ!

ಈ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮದಿಂದ ಸಾವನ್ನು ಆಚರಿಸಿದ್ದಾನೆ....!

ಕಸಬ ಸತ್ತ.......!

ಎಲ್ಲರ ಮುಖದಲ್ಲೂ ನಗು!

ಕಸಬನನ್ನು ತಾನೇ ಕೊಂದವನಂತೆ ತೋರುವ ಕಿಚ್ಚೆದೆಯ ವೀರನ ಗಮ್ಮತ್ತು!

ನನ್ನ ದೇಶದ ಯಾವ ವೇದ-ಪುರಾಣ-ಧರ್ಮಗಳಲ್ಲಿಯೂ ಸಾವನ್ನು ಸಂಭ್ರಮದಿಂದ ಆಚರಿಸಿ ಎಂದು ಬರೆದಿಲ್ಲ. ಆದರೆ ಇದು ಅಂತಿಂಥ ಸಾವಲ್ಲ. ದೇಶಪ್ರೇಮ ಎನ್ನುವುದು ಈ ಎಲ್ಲಾ ವಿಧಿ, ವೇದ, ಪುರಾಣ, ಧರ್ಮಗಳಿಗಿಂತ ಮಿಗಿಲಾದದ್ದು ಎನ್ನುವುದಕ್ಕೆ ಈ ಸಾವಿನಿಂದ ಹೊಮ್ಮುತಿರುವ ಭಾವನೆಗಳೇ ಸಾಕ್ಷಿ.......



ಈ ಭಾವನೆಯಲ್ಲಿ ಮಿಶ್ರ ಅನಿಸಿಕೆಗಳಿಗೆ, ಅನ್ಯ ಅಭಿಪ್ರಾಯಗಳಿಗೆ ಎಡೆಯಿಲ್ಲ, ಜಾತಿ - ನೀತಿ - ಪಜೀತಿಗಳಿಲ್ಲ! ಎಲ್ಲರಲ್ಲೂ ಹಾಗು ಎಲ್ಲೆಲ್ಲರಲ್ಲೂ ಅಡಗಿರುವ 26/11ನ ಕಪ್ಪು ಛಾಯೆ. ನನ್ನ ದೇಶಕ್ಕೆ ಲಗ್ಗೆಯಿಟ್ಟು ನನ್ನ ಜನರನ್ನೇ ಕೊಂದವನ ಮೇಲಿರುವ ಉದ್ರಿಕ್ತ ಆವೇಶ. ನಾನು, ನನ್ನದು, ನನ್ನಿಂದ ಎನ್ನುವ ಅಹಂಗಳಿಗಿಂತಲೂ ಅತೀ ಅತೀ ದೊಡ್ಡದಾದ ಭಾವನೆಯಿದು.

ಈ ಸಾವು ಮರೆಯುವನ್ತದ್ದಲ್ಲ! ನಮ್ಮ ಕಾನೂನು, ನಮ್ಮ ಸರ್ಕಾರದ ನಡುವೆ ಕುದಿಯುತ್ತಿದ್ದ ನೋವುಂಡ ಜೀವಗಳ ಸೇಡಿಗೆ ಇದು ಉತ್ತರ. ಇವನ ಹಿಂದೆ ಅಡಗಿದೆ ಸರ್ಕಾರಗಳ ಮುಖವಾಡ, ರಾಜಕೀಯ ಇರಾದೆ, ತಮ್ಮ- ತಮ್ಮ ಪಕ್ಷಗಳಿಗೆ ಜನರ ಅಭಿಮತಗಳಿಸಲು ಯತ್ನಿಸುತಿದ್ದ ಎಣಿಕೆಗಳು! ಇವನಿಗಾಗಿ ನಮ್ಮೆಲ್ಲರ ಹಣ ವ್ಯರ್ಥವಾದದ್ದು ಎಷ್ಟೋ. ಡೋಲಾಯಮಾನದಂತೆ ನ್ಯಾಯ ಸಮ್ಮತಿಗಳ ನಡುವೆ ತೂಗುತಿದ್ದ ನಮ್ಮ ಕಾನೂನು.

ಇವೆಲ್ಲದರ ನಡುವೆ ಜನಸಾಮಾನ್ಯನ ಸಿಟ್ಟು ಹೆಪ್ಪುಗಟ್ಟಿ ಗೂಡಾಗಿ ಹೇಳಲು ಆಗದೆ ಅನುಭವಿಸಲು ಆಗದೆ ಪಟ್ಟ ರೋದನೆ. ಬದಲಿಗೆ ಜನಸಾಮಾನ್ಯನ ಆಕ್ರೋಶವೆಲ್ಲ - ಲೇಖನಗಳಾಗಿ, ಕವನಗಳಾಗಿ, ನಗೆಹನಿಗಳಾಗಿ, ವಿಡಂಬನೆಗಳಾಗಿ, ವ್ಯಂಗ್ಯಚಿತ್ರಗಳಾಗಿ, ಚರ್ಚೆಗಳಾಗಿ ಹರಿದಾಡಿದ್ದು ತಿಳಿದೇ ಇದೆ.

ಇವನ ಸಹಪಾಟಿಯೊಂದಿಗೆ ಕಿಂಚಿತ್ತು ಮರುಕವಿಲ್ಲದೆ ೧೬೫ ಜನರನ್ನು ಮಾತ್ರ ಕೊಂದವನಲ್ಲ, ಅವರ ಸಂಸಾರಗಳನ್ನು ಕೊಂದವ, ಅವರ ಕನಸುಗಳನ್ನು ಕೊಂದವ, ಅವರ ಜೀವನದ ದಿಕ್ಕುಗಳನ್ನೇ ಬದಲಾಯಿಸಿದವ. ದೇಶ ದೇಶವೇ ನಡುಗಿತ್ತು, ಮರುಗಿತ್ತು. ಇವನ ಬಂದೂಕಿಗೂ, ತಮ್ಮ ಜೀವಕ್ಕೂ ಹೆದರದೆ ದಾಳಿಗಿಳಿದ ನಮ್ಮ ಪೋಲೀಸರ ಪಡೆ ಕಡೆಗೂ ಇವನೊಬ್ಬನನ್ನು ಹಿಡಿದಾಗ ನನ್ನ ದೇಶದ ಕೋಟಿ ಕೋಟಿ ಜನರ ರೋಮ ರೋಮವೂ ಆವೇಶದಿಂದ ಕುದಿಯುತಿತ್ತು.

ತಡವಾದರೂ ಸದ್ದಿಲ್ಲದೇ ಅವನ ಸಾವು ಸಂಭವಿಸಿದೆ, ಉರಿವ ಬೆಂಕಿಯ ಮೇಲೆ ನೀರು ಸುರಿದಂತೆ....ಹಬೆ ಇನ್ನೂ ಆರಿಲ್ಲ. ಇವನ ತಂದೆ-ತಾಯಿ, ಬಂಧು-ಬಳಗ, ಊರು-ಕೇರಿ, ದೇಶಕ್ಕೆ ಇವನು ಬೇಕಿಲ್ಲ.

ಒಬ್ಬ ಕಸಬ ಸತ್ತರೆ ನೂರಾರು ಕಸಬರು ಹುಟ್ಟಿ ಬರುತ್ತಾರಂತೆ, ಆದರೇನಂತೆ ...ಯಾವ ಹುಳುವನ್ನೂ ಬಿಡುವ ಮಾತೇ ಇಲ್ಲ, ತಡವಾದರೂ ಬಂದೆ ಬಂತು ಸಾವು .....ಇದು ಭಾರತ!



ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...