Wednesday, May 15, 2013

ಶೋಕವಿಲ್ಲಿ ಸಂಭ್ರಮಿಸಬೇಕಿದೆ


ಈ ದಿನ ಎಂದಿನಂತಲ್ಲ, ವಿಶೇಷ! ಈ ದಿನಕ್ಕಾಗಿ ಎಷ್ಟು ತಿಂಗಳುಗಳಿಂದ ತಯ್ಯಾರಿ! ಕಳೆದ ಒಂದು ವಾರದಿಂದ ನಿದ್ದೆ ಮಾಡಿದ್ದು ಅಷ್ಟಕ್ಕಷ್ಟೇ. ನನಗೆ ಮಾತ್ರವಲ್ಲ - ಈ ದಿನಕ್ಕಾಗಿ ಕಾದು ಸಿದ್ದತೆ ನಡೆಸಿದ ಎಲ್ಲರಿಗೂ ಹೀಗೆ ಇರಬಹುದ? ನಿನ್ನೆ ಸಂಜೆ ಎಲ್ಲರಿಗೂ ಒಮ್ಮೆ ಫೋನಾಯಿಸಿ - ಎಲ್ಲವೂ ಸರಿಯಾಗಿದೆಯೆಂದು ತಿಳಿದಿದ್ದೆ. ಆದರೆ, ಕಾಡುತಿದ್ದ ವಿಷಯವೇ ಬೇರೆ.

ಜೀವನದ ದಿಕ್ಕುಗಳೆಲ್ಲ ಬದಲಾಗಿ ಇಂದಿಗೆ ಸರಿಯಾಗಿ ಐದು ತಿಂಗಳು. ರಾಯರ ಗುಡಿಯ ಪುರೋಹಿತರನ್ನ ನೋಡಿ, ಕೊಡಬೇಕಾದದ್ದು ಕೊಟ್ಟು ಮನೆಗೆ ಬಂದೆ. ವಡೆ ಪಾಯಸ ಇತ್ಯಾದಿ ಎಲ್ಲವು ದೀಪ ಹಚ್ಚಿದ ಫೋಟೋ ಮುಂದೆ - ನಂತರ ಮಹಡಿಯ ಮೇಲೆ. ಯಾರನ್ನು ಕಾಯಿಸದ ಜೀವಾತ್ಮವದು - ಇಷ್ಟವಾದ ತಿನಿಸು ಕಚ್ಚಿಕೊಂಡು ಹಾರಿದೆ. ಹಾ ಹೌದಲ್ವೆ ತಮಗೂ ತಿಳಿದಿರುವನ್ತದೆ ಈ ದಿನದ ವಿಶೇಷ. ನನಗಿನ್ನು ಸಮಯವೆಲ್ಲಿದೆ, ತಯ್ಯಾರಾಗಬೇಕಿದೆ! ಮನೆಯವರೆಲ್ಲ ಮತ್ತೆ - ಮತ್ತೆ ಹೇಳ್ತಿದ್ದು ಅದನ್ನೇ, "ಅತ್ಕೊಂಡು ಮುಖ ಊದಿಸ್ಕೊಂಡು ಫೋಟೋ - ಕ್ಯಾಮೆರ ಕಣ್ಣಿಗೆ ಬೂದುಗುಂಬಳ ಆಗ್ಬೆಕೇನು?". ಅದು ಕೂಡ ಸರಿಯೇ.

ಶೋಕವಿಲ್ಲಿ ಸಂಭ್ರಮಿಸಬೇಕಿದೆ! ... ಹತ್ತು ಜನರಿಗೆ ಸಮಜಾಯಿಸಬಹುದು, ಇಲ್ಲಿ ನೂರು ಮಂದಿ. ಇವರ ಹಣ ಖಾತೆಗೆ ಜಮೆಯಾಗಿ ತಿಂಗಳುಗಳೇ ಕಳೆದಿವೆ, ಇನ್ನು ತಡ ಮಾಡುವ ಹಾಗಿಲ್ಲ. ಈಗಾಗಲೇ ನನ್ನಿಂದಾಗಿ ಬಹಳಷ್ಟು ತಡವಾಗಿದೆ, ಇದು ನನ್ನ ತಂಡದ ಪ್ರತಿಷ್ಠೆ - ನನ್ನ ಬಾದ್ಯತೆ ಕೂಡ, ಹಿಂದಿರುಗುವ ಮಾತಿಲ್ಲ.

ಕಳೆದೈದು ತಿಂಗಳುಗಳಿಂದ ಸೀರೆಗಳ ಕಡೆ ಕಣ್ಣಾಯಿಸಿಯೇ ಇರಲಿಲ್ಲ. ತಂಗಿ ಮತ್ತೆ ಮತ್ತೆ ಯಾವ ಸೀರೆ ಉಡ್ತೀಯ ಅಂತ ಕೇಳಿದಾಗಲು - ಯಾವುದೋ ಒಂದು ನಿರ್ಲಕ್ಷೆ. ಮತ್ತೆ ಈ ದಿನಕ್ಕೆ ತೆಗೆದದ್ದು ಮಾತ್ರ ಪೆಟ್ಟಿಗೆ ತೆರೆದಾಗ ಕಂಡ ಮೊದಲ ಸೀರೆ. ಅದರಲ್ಲೂ ನೂರಾರು ನೆನಪುಗಳು! ಸಧ್ಯಕ್ಕೆ, ಅಲಂಕಾರ ಅನಿವಾರ್ಯ! ಮೇಜಿನ ಮೇಲಿದ್ದ ಮಲ್ಲಿಗೆ ದಿಂಡು ಅತಿಯಾಗಿ ಕಾಡಿದೆ. ಹೂ ಇಲ್ಲದ ರೇಶಿಮೆ ಸೀರೆಗೆ ಸೊಬಗೆಲ್ಲಿ? ಮುದ್ದಾಗಿ ಕಾಣ್ತಿದಾಳೆ ಮಗಳು - ಅವಳ ತಲೆಗೆ ಹೂ ದಿಂಡು ಮೂಡಿಸಿದ್ದಾಯ್ತು. ಅತಿಯಾಗಿ ಅವಳನ್ನೇ ನೋಡುವಾಸೆ, ತಡೆದೆ - ಹನಿ ಜಾರಿ ಮುಖದ ಮೇಲಿನ ಅಲಂಕಾರ ಹಾಳಾದೀತು, ಆಗಬೇಕಾಗಿರುವ ಕೆಲಸಗಳು ಬಹಳಷ್ಟಿವೆ!

ರೂಮಿನಿಂದ ಹೊರ ಬಂದ ಒಂದೆರಡು ನಿಮಿಷದಲೇ ಅಮ್ಮನ ಕಣ್ಣಲ್ಲಿ ಬಾಷ್ಪ! "ಹಾಗ್ನೋದ್ಬೇಡಮ್ಮ ದೃಷ್ಟಿ ಆಗುತ್ತೆ" ಅಂತ ತಮಾಷೆ ಮಾಡಿಕೊಂಡೆ ಅಮ್ಮನ ಕಾಲು ಮುಟ್ಟಿ ನಮಸ್ಕರಿಸಿದ್ದಾಯ್ತು. ಚಪ್ಪಲಿ ಹಾಕಿಕೊಂಡು ಮನೆಯಿಂದ ಹೊರಟಾಗ ಕಾಡಲು ಶುರುವಾಗಿದ್ದು ಮತ್ತದೇ - ಮತ್ತದೇ ವಿಷಯ. ಇದ್ದಕ್ಕಿದ್ದ ಹಾಗೆ ಈ ಪಾಟಿ ತಯ್ಯಾರಾಗಿ ಹೋಗ್ತಿದ್ದ್ರೆ ಜನರೇನು ಅಂದುಕೊಂಡಾರು? ಆತಂಕ, ಭಯ - ಮೂರು ಅಂತಸ್ತಿನ ಒಂದೊಂದು ಮೆಟ್ಟಿಲು ಇಳಿದಾಗಲು ಒಂದೊಂದು ಭಾವ! ಅರೆರೆ, ಛೆ ...... ಕಾರಿನ ಕೀ ಮನೆಯಲ್ಲೇ ಬಿಟ್ಟು ಇಳಿದು ಬಂದ್ನೆ! ಪಾರ್ಕಿಂಗ್ನಿಂದ ಮನೆಯ ಕಡೆಗೆ ಮತ್ತದೇ ದಾರಿ ಹಿಡಿಯಬೇಕಿದೆ, ಅವರಿವರ ಕಣ್ಣುಗಳ ಹೆದರಿಸುವ ಭಯ. ಅಮ್ಮನನ್ನೋ, ತಂಗಿಯನ್ನೋ ಕೆಳಗಿಂದಲೇ ಜೋರಾಗಿ ಕೂಗಿ ಕೀ ತೆಗೆಸಿಕೊಳ್ಳಬಹುದು. ಮುಜುಗರದಿಂದ ಹೆಣವಾಗಿ ಹೋಗಿದ್ದೇನೆ, ಮತ್ತದೇ ಮೂರಂತಸ್ತು ಹತ್ತಿ ಕೀ ತೆಗೆದುಕೊಂಡು ಬಂದದ್ದಾಯ್ತು. ಪಾರ್ಕಿಂಗ್ ಸೆಕ್ಯುರಿಟಿ ಸಿದ್ದಪ್ಪ, ಅವರಿಗೇನನಿಸ್ತೊ, "ಈ ತರಹ ನಿಮ್ಮನ್ನ ನೋಡೇ ಇರ್ಲಿಲ್ಲಮ್ಮ" ಅಂದ್ರು, "ಹೌದ ತಾತ - ನಾನು ಸಹ", ಅಂತಂದುಕೊಂಡೆ ಕಾರ್ ಹತ್ತಿಸಿ ಮನೆಯ ಮುಂದೆ ತರುವಷ್ಟರಲ್ಲಿ, ಮೆಟ್ಟಿಲಿಳಿದು ಬರುತಿದ್ದದ್ದು ಮಗಳು. ಅವಳಿಗೂ ಮುಜುಗರವೇನೋ - ವರ್ಷ ಕಳೆಯುವ ತನಕ ಯಾರ ಮನೆಗೂ - ಯಾವ ಶುಭ ಕಾರ್ಯಕ್ಕೂ ಹೋಗುವಹಾಗಿಲ್ಲವಂತೆ?!

ಸಭಾಂಗಣ ಹತ್ತಿರವಾಗುತಿದ್ದಂತೆ ಮತ್ತದೇ ಭಯ, ಯಾರನ್ನ ಹೇಗೆ ಮಾತನಾಡಿಸಬೇಕೋ? ಯಾರ ಬಳಿ ಹೇಗಿರಬೇಕೋ? ಇದೆಂಥ ವಿಧಿಯಾಟ. ನನ್ನೊಡನೆ ನನ್ನ ಸಮರ! ಯಾರನ್ನ ಮೆಚ್ಚಿಸಬೇಕಿದೆ? ನನ್ನ ಅಶ್ರು, ನನ್ನ ಯಾತನೆ, ನನ್ನ ಶೋಕ - ಎಲ್ಲವೂ ನನ್ನವೇ. ಉತ್ತರಿಸಬೇಕಾಗಿರುವುದು ದೇವರಿಗೆ, ನನ್ನೊಳಗಿನ ಧರ್ಮಪ್ರಜ್ಞೆಗೆ, ನಾ ಸೋತು ಗೆಲ್ಲುವ ನನ್ನಾತ್ಮಸಾಕ್ಷಿಗೆ. ಸಭಾಂಗಣದೊಳಗೆ ಕಾಲಿಡುತಿದ್ದಂತೆ ನನ್ನ ಪ್ರೀತಿಯ ತಂಡ! ಹಾಗೆ ನಿಂತಿದ್ದ ಉಸಿರೊಂದು ಹಿಂದಿರುಗಿ ಬಂದಂತೆ! ಎಂದಿನ ಹಾಗೆ ಅದಂತೆ - ಇದಂತೆ ಎನ್ನುವಷ್ಟರಲ್ಲಿ ಬಂದದ್ದು ನನ್ನ ಮನೆಯವರು - ನನ್ನ ಮಿತ್ರರು - ಗುರು ಹಿರಿಯರು. ಹಿಂಗಿದ್ದ ದೈರ್ಯ, ಕುಸಿದಿದ್ದ ವಿಶ್ವಾಸಕ್ಕೆ ಇವರಲ್ಲವೇ ಚೈತನ್ಯ? ಕಣ್ಣಂಚಿನಲ್ಲಿ ಜಾರುತಿದ್ದ ಹನಿಯನ್ನೇ ಗಮನಸಿ ಬಾಯಿಗೆ ಉಪ್ಪಿಟ್ಟು ತುರುಕಿದ್ದು ತಂಗಿ.

ಬಂದವರೆಲ್ಲ ಭಗವಂತನೇ ಕಳಿಸಿದ ದೇವತೆಗಳಿರಬೇಕು? ಅಬ್ಬಬ್ಬ! ತಾನು ಇದ್ದೀನಿ ಅಂತ ಸಾಬೀತು ಪಡಿಸೋಕೆ ಇವರುಗಳ ಮುಗ್ಧ ನಗುವಿನಲ್ಲಿ, ಅಭಿಮಾನ ತುಂಬಿದ ಮಾತುಗಳಲ್ಲಿ ನಿರೂಪಿಸಲು ತಯ್ಯಾರಾಗಿದ್ದಾನೆ. ಶತಮಾನಂ ಭವತಿ ಎಂದು ಹರಸಿದ್ದಾನೆ!

ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಕಡೆಗೂ ತಡೆಯಲಾಗದೆ ಉಕ್ಕಿಬಂದ ಕಣ್ಣ ಹನಿಗಳೊಡನೆ ಸಿಕ್ಕಿಬಿದ್ದೆ ಇವರುಗಳ ಕೈಗೆ. "ರೂಪಕ್ಕ ನೀವು ಮಾತ್ರ ಅಳಬಾರದು" - ಇದು ಸಾಂತ್ವನ, ಇದು ಆಜ್ಞೆ! ಮಗಳನ್ನ ಜೋರಾಗಿ ತಬ್ಬಿಕೊಳ್ಳಬೇಕಿದೆ, ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮಲಗಬೇಕಿದೆ, ಹೆಪ್ಪುಗಟ್ಟಿರುವ ಅಳಲು ಕರಗಬೇಕಿದೆ.
ಮರುದಿನವೇ ಕಾರ್ಯಕ್ರಮದ ಭಾವಚಿತ್ರಗಳು ಎಲ್ಲೆಡೆ ಹರಿದಾಡಿದೆ. ನಿನ್ನೆ ಮಗಳನ್ನ ಕಣ್ಣಿಟ್ಟು ನೋಡದೆ ನನ್ನಿಂದ ನನ್ನನ್ನೇ ಕಟ್ಟಿ ಹಾಕಿದ್ದು ನಿಜ. ಈ ದಿನ ಅವಳ ಫೋಟೋ ನೋಡಿ ಬಿಕ್ಕಳಿಸಿ ಬಂದ ಅಳುವು, "ಅವರ ಅಪ್ಪನ ಹಾಗೆ" ಅಂತ ಪ್ರತಿಕ್ರಿಯಿಸಿ ಹೊರ ನಡೆದಿದೆ!................

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...