Thursday, December 6, 2012

ನಿನಗಾಗಿ

ನಿನಗಾಗಿ 
 ಸಂತಸದ
ದಿಸೆಯಲಿ
ಬೇಸತ್ತ
ಘಳಿಗೆಯಲಿ
ನಿನ್ನ
ಬೇಟಿ!
ಹೊಸ ಬಗೆಯ
ಖುಷಿಯಾಗಿ,
ಹೊಸ ಬಗೆಯ 
ರುಚಿಯಾಗಿ
ನಿನಗೆ ನೀನೆ 
ಸಾಟಿ !

ನಿನಗಾಗಿ
ನನ್ನಲ್ಲಿರುವ
ಪ್ರೀತಿ,
ಮೋಹ
ದಿನದಿಂದ
ದಿನಕ್ಕೆ
ಹೆಚ್ಚುತಲೇ
ಇದೆ! 

ಓ ನನ್ನ ಮುದ್ದು.... ಕೋಳಿಯೆ.....
ಇದೋ ನಿನಗೊಂದು ಉಮ್ಮ್ಹ .....!!

Wednesday, November 21, 2012

ಕೊನೆಗೂ ಮನೆಯಲ್ಲಿದ್ದ ಕಸ(ಬ) ಗುಡಿಸಿ ಎಸೆದೆವು!!


ಇಲ್ಲೊಬ್ಬ ಸಂತಸದಿಂದ ಕುಣಿದಿದ್ದಾನೆ!

ಮತ್ತೊಬ್ಬ "ಹಾಲು-ಕುಡಿದಂಗಾಯ್ತು" ಎಂದ

"ಸಿಹಿ ಉಂಡೇ ಬಿಡುವೆ" ಅಂದನವನು

"ಈ ದಿನ ನನ್ನದೇ ಔತಣ" ಎಂದನಿವನು

"ಅಬ್ಭಾ...ಅಂತೂ ಏನೋ ಒಂದು ಗತಿ ಆಯ್ತು"

"ಎಂಥ ಖುಷಿ ಕೊಡುವ ಸುದ್ದಿ" ಎಂದರೆ ಇನ್ನೊಬ್ಬ.....

" ***** " ಉಸುರಿದ ಅವನೊಬ್ಬ

"ಪಟಾಕಿ ಹೊಡಿಬೇಕನಿಸ್ತಿದೆ" ಮಗದೊಬ್ಬ ....

ಹೀಗೆ ಇನ್ನು ಅನೇಕಾನೇಕ ಪ್ರತಿಕ್ರಿಯೆಗಳು!!


ಸಾವನ್ನು ಸಂಭ್ರಮದಿಂದ ಆಚರಿಸುವ ಈ ಪರಿ ನಾನಂತೂ ನನ್ನ ಜೀವನದಲ್ಲೇ ಕಂಡಿದ್ದಿಲ್ಲ!

ಈ ದಿನ ಪ್ರತಿಯೊಬ್ಬ ಭಾರತೀಯನೂ ಸಂಭ್ರಮದಿಂದ ಸಾವನ್ನು ಆಚರಿಸಿದ್ದಾನೆ....!

ಕಸಬ ಸತ್ತ.......!

ಎಲ್ಲರ ಮುಖದಲ್ಲೂ ನಗು!

ಕಸಬನನ್ನು ತಾನೇ ಕೊಂದವನಂತೆ ತೋರುವ ಕಿಚ್ಚೆದೆಯ ವೀರನ ಗಮ್ಮತ್ತು!

ನನ್ನ ದೇಶದ ಯಾವ ವೇದ-ಪುರಾಣ-ಧರ್ಮಗಳಲ್ಲಿಯೂ ಸಾವನ್ನು ಸಂಭ್ರಮದಿಂದ ಆಚರಿಸಿ ಎಂದು ಬರೆದಿಲ್ಲ. ಆದರೆ ಇದು ಅಂತಿಂಥ ಸಾವಲ್ಲ. ದೇಶಪ್ರೇಮ ಎನ್ನುವುದು ಈ ಎಲ್ಲಾ ವಿಧಿ, ವೇದ, ಪುರಾಣ, ಧರ್ಮಗಳಿಗಿಂತ ಮಿಗಿಲಾದದ್ದು ಎನ್ನುವುದಕ್ಕೆ ಈ ಸಾವಿನಿಂದ ಹೊಮ್ಮುತಿರುವ ಭಾವನೆಗಳೇ ಸಾಕ್ಷಿ.......



ಈ ಭಾವನೆಯಲ್ಲಿ ಮಿಶ್ರ ಅನಿಸಿಕೆಗಳಿಗೆ, ಅನ್ಯ ಅಭಿಪ್ರಾಯಗಳಿಗೆ ಎಡೆಯಿಲ್ಲ, ಜಾತಿ - ನೀತಿ - ಪಜೀತಿಗಳಿಲ್ಲ! ಎಲ್ಲರಲ್ಲೂ ಹಾಗು ಎಲ್ಲೆಲ್ಲರಲ್ಲೂ ಅಡಗಿರುವ 26/11ನ ಕಪ್ಪು ಛಾಯೆ. ನನ್ನ ದೇಶಕ್ಕೆ ಲಗ್ಗೆಯಿಟ್ಟು ನನ್ನ ಜನರನ್ನೇ ಕೊಂದವನ ಮೇಲಿರುವ ಉದ್ರಿಕ್ತ ಆವೇಶ. ನಾನು, ನನ್ನದು, ನನ್ನಿಂದ ಎನ್ನುವ ಅಹಂಗಳಿಗಿಂತಲೂ ಅತೀ ಅತೀ ದೊಡ್ಡದಾದ ಭಾವನೆಯಿದು.

ಈ ಸಾವು ಮರೆಯುವನ್ತದ್ದಲ್ಲ! ನಮ್ಮ ಕಾನೂನು, ನಮ್ಮ ಸರ್ಕಾರದ ನಡುವೆ ಕುದಿಯುತ್ತಿದ್ದ ನೋವುಂಡ ಜೀವಗಳ ಸೇಡಿಗೆ ಇದು ಉತ್ತರ. ಇವನ ಹಿಂದೆ ಅಡಗಿದೆ ಸರ್ಕಾರಗಳ ಮುಖವಾಡ, ರಾಜಕೀಯ ಇರಾದೆ, ತಮ್ಮ- ತಮ್ಮ ಪಕ್ಷಗಳಿಗೆ ಜನರ ಅಭಿಮತಗಳಿಸಲು ಯತ್ನಿಸುತಿದ್ದ ಎಣಿಕೆಗಳು! ಇವನಿಗಾಗಿ ನಮ್ಮೆಲ್ಲರ ಹಣ ವ್ಯರ್ಥವಾದದ್ದು ಎಷ್ಟೋ. ಡೋಲಾಯಮಾನದಂತೆ ನ್ಯಾಯ ಸಮ್ಮತಿಗಳ ನಡುವೆ ತೂಗುತಿದ್ದ ನಮ್ಮ ಕಾನೂನು.

ಇವೆಲ್ಲದರ ನಡುವೆ ಜನಸಾಮಾನ್ಯನ ಸಿಟ್ಟು ಹೆಪ್ಪುಗಟ್ಟಿ ಗೂಡಾಗಿ ಹೇಳಲು ಆಗದೆ ಅನುಭವಿಸಲು ಆಗದೆ ಪಟ್ಟ ರೋದನೆ. ಬದಲಿಗೆ ಜನಸಾಮಾನ್ಯನ ಆಕ್ರೋಶವೆಲ್ಲ - ಲೇಖನಗಳಾಗಿ, ಕವನಗಳಾಗಿ, ನಗೆಹನಿಗಳಾಗಿ, ವಿಡಂಬನೆಗಳಾಗಿ, ವ್ಯಂಗ್ಯಚಿತ್ರಗಳಾಗಿ, ಚರ್ಚೆಗಳಾಗಿ ಹರಿದಾಡಿದ್ದು ತಿಳಿದೇ ಇದೆ.

ಇವನ ಸಹಪಾಟಿಯೊಂದಿಗೆ ಕಿಂಚಿತ್ತು ಮರುಕವಿಲ್ಲದೆ ೧೬೫ ಜನರನ್ನು ಮಾತ್ರ ಕೊಂದವನಲ್ಲ, ಅವರ ಸಂಸಾರಗಳನ್ನು ಕೊಂದವ, ಅವರ ಕನಸುಗಳನ್ನು ಕೊಂದವ, ಅವರ ಜೀವನದ ದಿಕ್ಕುಗಳನ್ನೇ ಬದಲಾಯಿಸಿದವ. ದೇಶ ದೇಶವೇ ನಡುಗಿತ್ತು, ಮರುಗಿತ್ತು. ಇವನ ಬಂದೂಕಿಗೂ, ತಮ್ಮ ಜೀವಕ್ಕೂ ಹೆದರದೆ ದಾಳಿಗಿಳಿದ ನಮ್ಮ ಪೋಲೀಸರ ಪಡೆ ಕಡೆಗೂ ಇವನೊಬ್ಬನನ್ನು ಹಿಡಿದಾಗ ನನ್ನ ದೇಶದ ಕೋಟಿ ಕೋಟಿ ಜನರ ರೋಮ ರೋಮವೂ ಆವೇಶದಿಂದ ಕುದಿಯುತಿತ್ತು.

ತಡವಾದರೂ ಸದ್ದಿಲ್ಲದೇ ಅವನ ಸಾವು ಸಂಭವಿಸಿದೆ, ಉರಿವ ಬೆಂಕಿಯ ಮೇಲೆ ನೀರು ಸುರಿದಂತೆ....ಹಬೆ ಇನ್ನೂ ಆರಿಲ್ಲ. ಇವನ ತಂದೆ-ತಾಯಿ, ಬಂಧು-ಬಳಗ, ಊರು-ಕೇರಿ, ದೇಶಕ್ಕೆ ಇವನು ಬೇಕಿಲ್ಲ.

ಒಬ್ಬ ಕಸಬ ಸತ್ತರೆ ನೂರಾರು ಕಸಬರು ಹುಟ್ಟಿ ಬರುತ್ತಾರಂತೆ, ಆದರೇನಂತೆ ...ಯಾವ ಹುಳುವನ್ನೂ ಬಿಡುವ ಮಾತೇ ಇಲ್ಲ, ತಡವಾದರೂ ಬಂದೆ ಬಂತು ಸಾವು .....ಇದು ಭಾರತ!



Friday, October 12, 2012

ಹಳೆಯ ಡೈರಿ - ಹಳೆಯ ನೆನಪು


ಎಲ್ಲರೂ ಡೈರಿ ಬರೆಯುತ್ತಾರೆ ಹಾಗೆಯೇ ನಾನು ಸಹ ಬರೆಯಬೇಕು ಎಂದು ಚಿಕ್ಕಂದಿನಲ್ಲಿ ಡೈರಿ ಬರೆಯುವ ಅಭ್ಯಾಸ ಶುರುವಿಟ್ಟೆ! ಅದು-ಇದು ಇಷ್ಟವಾಗಿದ್ದು ಇಲ್ಲವಾಗಿದ್ದು ಬರೆದುಕೊಂಡ ಡೈರಿ ಅದು. ಶಾಲೆಯ ದಿನಗಳಲ್ಲಿ ಬರೆಯುತ್ತ - ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ಆ ಅಭ್ಯಾಸ ಬಿಟ್ಟು ಹೋಗಿತ್ತು. ನನ್ನ ಸ್ನೇಹಿತರು, ತಂಗಿಯರು, ಅವರಿವರ ಚೇಷ್ಟೆ, ಪತ್ರಿಕೆಗಳಿಂದ ಕತ್ತರಿಸಿ ಅಂಟಿಸಿದ್ದ ವಿಭಿನ್ನ ವಿಷಯಗಳು, ಹುಟ್ಟುಹಬ್ಬದ೦ದು ಸಿಕ್ಕ ಉಡುಗೊರೆಯ ಪಟ್ಟಿ, ಸಿಟ್ಟು, ಕಲಾಪ, ಹೀಗೆ ಅನೇಕ ವಿಷಯಗಳು ಅದರಲ್ಲಿದೆ. ವ್ಯಾಕರಣಾತ್ಮಕ ಹೊರತು-ಮರೆತು ಓದಬೇಕಷ್ಟೇ!!

ಡೈರಿ ಬರೆಯುವುದರಿಂದ ಮನಸಿಗೆ ನೆಮ್ಮದಿ ಸಿಗೋದು, ಮನದ ಮಾತುಗಳೆಲ್ಲ ಹೊರಗೆ ಬರೋಕೆ ಸಹಾಯವಾಗುತ್ತೆ ಅನ್ನೋದು ಎಷ್ಟು ನಿಜ? ಅಷ್ಟಕ್ಕೂ ಈ ಡೈರಿ ಬರೆಯುವ ನನ್ನ ಸ್ನೇಹಿತರು ಹೇಳಿಕೊಂಡಂತೆ ಅದರಿಂದ ಆದ ಅನಾಹುತ, ಅಪಾರ್ಥ, ಅಪವಾದಗಳೆ ಹೆಚ್ಚು. ನನ್ನ ಮಟ್ಟಿಗೆ - ನಾನಂತೂ ಕಿಲಾಡಿ ಎಂದುಕೊಂಡೆ! ನನಗೆ ಬೇಕಾಗಿರುವ ವಸ್ತುಗಳನ್ನ ಅಪ್ಪನಿಗೆ ಸೂಚನೆ ಕೊಡುವ ಸಲುವಾಗಿ ಬರೆದು - ಬರೆದು ಅವರ ಕೈಗೆ ಸಿಗುವ ಜಾಗದಲ್ಲೇ ಇಡುತಿದ್ದೆ. ಸಾಲದಕ್ಕೆ ನನ್ನ ಡೈರಿಯನ್ನ ಓದಲಿ ಎನ್ನುವ ಸಲುವಾಗಿ "Do Not Open - My Personal Diary" ಅಂತ ದಪ್ಪಕ್ಷರಗಳಲ್ಲಿ ಡೈರಿಯ ಮೇಲೆ ಬರೆದಿದ್ದೆ. ಅಪ್ಪನಿಗೆ ನನ್ನ ಪೆದ್ದುತನ ತಿಳಿದಿದ್ದರೂ - ಏನೂ ತಿಳಿಯದವರಂತೆ ಮುದ್ದು ಮಾಡುತಿದ್ದರು ಎನ್ನುವ ವಿಷಯ ನಾನು ತಾಯಿ ಆದಮೇಲೆಯೇ ನನಗೆ ಅರಿವಿಗೆ ಬಂದದ್ದು.

ಆಗೊಮ್ಮೆ ಈಗೊಮ್ಮೆ ಕಣ್ಣಿಗೆ ಬಿದ್ದು ಮಾಯವಾಗುತಿದ್ದ ಈ ಹಳೆಯ ಡೈರಿ ಕೆಲವು ತಿಂಗಳುಗಳ ಹಿಂದೆ ಮತ್ತೆ ಕಾಣಿಸಿತ್ತು. ಕೈಗೆತ್ತಿಕೊಂಡು ಒಂದೊಂದೇ ಪುಟಗಳನ್ನ ಕುತೂಹಲದಿಂದ ಓದುತಿದ್ದೆ! ಪ್ರತೀ ಬಾರಿ ಈ ಡೈರಿ ಓದುವಾಗಲು ಒಂದೊಂದು ಅನುಭವ. ನೆನಪುಗಳ ಬುತ್ತಿ ಬಿಚ್ಚಿಟ್ಟಹಾಗಿತ್ತು. ಒಂದು ಪುಟದ ಮೂಲೆಯಲ್ಲೆಲ್ಲೋ "I will not like Nanju Ajji" ಎಂದು ಬರೆದಿದ್ದು ಕಾಣಿಸಿತು. ಇದೆಂತ: ಇಂಗ್ಲಿಷೋ! ಹೀಗೂ ಸಹ ಬರೆದಿದ್ನ ಅಂತ. ಸರಿ, ಹೀಗ್ಯಾಕೆ ಬರೆದಿದ್ದೆ? ನಂಜು ಅಜ್ಜಿ, - ಅವರ್ಯಾಕೆ ಇಷ್ಟವಿರಲಿಲ್ಲ? ನೆನಪಿಸಿಕೊಳ್ಳುವುದು, ಕೆದಕುವುದು ಈಗ ಅನಿವಾರ್ಯ.

ಮೊದಲ ಮೊಗ್ಗಿನ ಜಡೆ

ನಂಜು ಅಜ್ಜಿಗೆ ಇಬ್ಬರು ಗಂಡುಮಕ್ಕಳು - ಆರು ಜನ ಹೆಣ್ಣುಮಕ್ಕಳು. ಇವರ ಕೊನೆಯ ಮಗಳು ನಿರ್ಮಲ ನನ್ನ ಸ್ನೇಹಿತೆ. ಶಾಲೆಗೆ ಜೊತೆಯಲ್ಲೇ ಹೊಗಿಬರುತಿದ್ದೆವು. ಕೆಲವೊಮ್ಮೆ ಜೊತೆಯಲ್ಲಿ ಆಡುತಿದ್ದೆವು. ಅವಳಿಗಿಷ್ಟ ಬಂದಾಗಷ್ಟೇ ನನ್ನ ಜೊತೆ ಇರುತಿದ್ದಳು - ಇಲ್ಲವಾದಾಗ ಮುಲಾಜಿಲ್ಲದೆ "ನೀನೀಗ ಹೋಗ್ತೀಯ ನಾನು ಊಟ ಮಾಡ್ಬೇಕು, ಹೊಸ ಗೊಂಬೆ ಜೊತೆ ಆಟ ಆಡ್ಬೇಕು" ಅಂತ ಹೇಳಿ ಓಡಿಸುತಿದ್ದಳು. ನಮ್ಮ ಮನೆಯ ಬೀದಿಯ ಕೊನೆಯಲ್ಲೇ ಇವರ ಮನೆ. ಓಡಿಸಿದಾಗೆಲ್ಲ ನಮ್ಮ ಮನೆಗೆ ಓಡಿ ಬಂದು ಏನು ಆಗದಂತೆ ಇದ್ದು ಬಿಡುವುದು ವಾಡಿಕೆಯಾಗಿಬಿಟ್ಟಿತ್ತು. ನಂಜು ಅಜ್ಜಿ ಅಂತ ಎಲ್ಲರು ಕರೆಯುತಿದ್ದು, ನಾನು ಸಹ ಅವಳ ತಾಯಿಯನ್ನ ಹಾಗೆ ಕರೆಯುತಿದ್ದೆ.


ಬೇಸಿಗೆ ರಜೆ. ಸರಿಯಾಗಿ ನೆನಪಿಲ್ಲವಾದರೂ ಎರಡನೇ ಅಥವಾ ಮೂರನೇ ತರಗತಿಯಲ್ಲಿರಬಹುದು.  ಮೊದಲ ಬಾರಿ ಅಮ್ಮ ನನಗೆ ಮೊಗ್ಗಿನ ಜಡೆ ಹಾಕಿಸಿದ್ದು. ಅವರ ಮೊದಲ ಮುದ್ದು ಮಗಳು ನಾನು, ಅವರ ಪ್ರಯೋಗಗಳೆಲ್ಲವು ನನ್ನ ಮೇಲೆ ಆಗಾಗ ನಡೆಯುತಲೆ ಇತ್ತು. ಅಂದು ಮೊಗ್ಗಿನ ಜಡೆ ಹಾಕಿಸಿದ್ದ ದಿನ, ಹೊಸ ರೇಶಿಮೆ ಲಂಗ, ಎರಡೂ ಕೈಗಳ ತುಂಬ ಗಾಜಿನ ಬಳೆಗಳು, ಅಮ್ಮನ ಬಂಗಾರ, ಅಜ್ಜಿಯ ಅವಲಕ್ಕಿ ಸರ ಎಲ್ಲವೂ ನನ್ನ ಮೇಲೇ ಇತ್ತು. ಅಪ್ಪ-ಅಮ್ಮನ ಜೊತೆ ಅವೇನ್ಯೂ ರೋಡಿನಲ್ಲಿದ್ದ ಎಂಪೈರ್ ಸ್ಟುಡಿಯೋಗೆ ಹೋದದ್ದು, ಬಣ್ಣ ಬಣ್ಣದ ಪ್ಲಾಸ್ಟಿಕ್ ಹೂವಿನ ಕುಂಡದ ಮುಂದೆ ನಿಲ್ಲಿಸಿ ಫೋಟೋ ತೆಗೆಸಿದ್ದು, ಅಪ್ಪ ನನ್ನನ್ನು ತಬ್ಬಿ ಮುದ್ದಾಡಿದ್ದು, ಮನೆಗೆ ಬಂದು ಆ ದಿನ ರಾತ್ರಿ ತಿಂದ ಊಟವನ್ನೆಲ್ಲ ಕಕ್ಕಿದ್ದು, ನ೦ತರ ಉಪ್ಪು - ಮೆಣಸು ನಿವಾಳಿಸಿ, ಪೊರಕೆ ಕಡ್ಡಿಗಳನ್ನ ಸುಟ್ಟು ಅಮ್ಮ ದೃಷ್ಟಿ ತೆಗೆದದ್ದು.... ಎಲ್ಲವೂ ನೆನಪಿದೆ!

ಎರಡು ದಿನಗಳ ನಂತರ ಸ್ಟುಡಿಯೋದಿಂದ ಅಪ್ಪ ಫೋಟೋ ತಂದಿದ್ದರು, ಅದನ್ನ ನೋಡಿದ್ದೆ ನನ್ನ ಮುಖ ಊರಗಲ ಅರಳಿತ್ತು. ಸುಮ್ಮನಿರದೆ ಆ ಫೋಟೋವನ್ನು ನಿರ್ಮಲಳಿಗೆ ತೋರಿಸಲು ಅವಳ ಮನೆಯ ಕಡೆ ಓಡಿದ್ದೆ. ಅವಳಂತೂ ಮನೆಯಲ್ಲಿರಲಿಲ್ಲ, ಬದಲಿಗೆ ನಂಜು ಅಜ್ಜಿ ನನ್ನ ಫೋಟೋ ನೋಡಿದರು. ನೋಡುತ್ತಲೇ, "ನಮ್ಮ ನಿರ್ಮಲಳ ಫೋಟೋ ಇನ್ನು ಚೆನ್ನಾಗಿರುತ್ತೆ, ಅವಳ ಕಲರ್ ನೋಡಿದ್ಯ ಏನ್ ಕಲರ್ ಇದಾಳೆ, ನಿನಗಿಂತ ಬೆಳ್ಳಗೆ ಬರ್ತಾಳೆ ಫೋಟೋದಲ್ಲಿ, ಅವಳ ಮೊಗ್ಗಿನ ಜಡೆ ಇನ್ನೂ ಉದ್ದ ಇರುತ್ತೆ" ಅಂತ ವ್ಯಂಗ್ಯವಾಗಿ ಹೇಳಿಬಿಟ್ಟರು. ಫೋಟೋ ತೆಗೆದುಕೊಂಡು ಅಳುತ್ತಲೇ ಮನೆಗೆ ಬಂದೆ. ಕಣ್ಣೀರ ಕೆಲವು ಹನಿಗಳು ಜಾರಿ ನನ್ನ ಮೊದಲ ಮೊಗ್ಗಿನ ಜಡೆಯ ಫೋಟೋದ ಮೇಲೆ ಬಿದ್ದಿತ್ತು. ಆ ಫೋಟೋ ಕದಡಿ ಅಲ್ಲಲ್ಲಿ ಹಾಳಾಗಿ ಹೋಯ್ತು. ಇಂದಿಗೂ ಆ ಫೋಟೋ ಹಾಗೆಯೇ ಇದೆ. ಒಂದೇ ಚಿತ್ರದ ಮೂರು ಪ್ರತಿಗಳಿದ್ದರಿಂದ ಅಪ್ಪ ಮತ್ತೊಂದು ಫೋಟೋಗೆ ಫ್ರೇಮ್ ಹಾಕಿಸಿಟ್ಟರು.


ಆ ಘಟಣೆಯ ನೆನಪಿನಲ್ಲಿ ನಂಜು ಅಜ್ಜಿಯ ಬಗ್ಗೆ ಆ ಸಾಲು ಬರೆದಿರುತ್ತೇನೆ ಎಂದುಕೊಂಡೆ. ಅಷ್ಟಕ್ಕೂ ಇದ್ಯಾವುದು ನೆನಪಿರಲಿಲ್ಲ. ಆ ಹಳೆಯ ಡೈರಿ ನೋಡಿದಾಗಲೆಲ್ಲ ಈ ವಿಷಯ ಕಣ್ಣಿಗೂ ಬೀಳುತಿರಲಿಲ್ಲ. ಮೂಲೆಯಲ್ಲೆಲ್ಲೋ ಬರೆದದ್ದು ಈ ಬಾರಿ ಕಂಡುಬಂದದ್ದು ಯಾಕಂತಲೂ ತಿಳಿಯುತ್ತಿಲ್ಲ!

ನಂಜು ಅಜ್ಜಿ ಮತ್ತೆ ನೆನಪಾದದ್ದು

ನಂಜು ಅಜ್ಜಿ ಬಗ್ಗೆ ಇತ್ತೀಚೆಗಷ್ಟೇ ಮತ್ತೆ ಕೇಳಿಪಟ್ಟೆ. ಅಮ್ಮನಿಗೆ ಯಾರೋ ಹೇಳಿದ ಇತ್ತೀಚಿನ ಸುದ್ದಿ ಇದು. ಎಂಟು ಮಕ್ಕಳ ಮಹಾತಾಯಿ ಆಕೆ. ಅವರ ಇಬ್ಬರು ಗಂಡು ಮಕ್ಕಳಾಗಲಿ, ಆರು ಮಂದಿ ಹೆಣ್ಣು ಮಕ್ಕಳಾಗಲಿ, ಸೊಸೆ - ಅಳಿಯನ್ದಿರಾಗಲಿ ಇವರನ್ನು ನೋಡಿಕೊಳ್ಳಲು ನಿರಾಕರಿಸಿದ್ದಾರೆ. ಎಲ್ಲರು ಸೇರಿ ಮಾತು-ಕತೆ ನಡೆಸಿ ಇವರನ್ನು ವೃದ್ದಾಶ್ರಮದಲ್ಲಿ ಬಿಟ್ಟಿದ್ದಾರೆ. ಇವರ ಆಶ್ರಮದಲ್ಲಿನ ಖರ್ಚಿಗೂ ಹಣ ಕೊಡುವುದಕ್ಕೆ ಇವರ ಮಕ್ಕಳು ಜಗಳಕ್ಕೆ ಬಿದ್ದಿದ್ದಾರೆ. ಒಬ್ಬೊಬ್ಬರೂ ಉನ್ನತ ಸ್ಥಾನಗಳಲ್ಲಿರುವವರೇ, ಆಸ್ತಿ ಅಂತಸ್ತು ಅಂತ ಹೆಚ್ಚೆಚ್ಚಿಗೆ ಮಾಡಿಕೊಂಡವರೆ. ಇನ್ನುಳಿದಂತೆ ನಂಜು ಅಜ್ಜಿಯ ಹೆಸರಿಗಿದ್ದ ಆಸ್ತಿಯನ್ನ ಅಕ್ಷರ ಸಹ ಇವರ ಮಕ್ಕಳು ತಮ್ಮ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ನಂಜು ಅಜ್ಜಿ ಇನ್ನೂ ಆರೋಗ್ಯವಾಗೇ ಇದ್ದಾರೆ, ಮೊಮ್ಮಕ್ಕಳೆಂದರೆ ಇವರಿಗೆ ಪ್ರಪಂಚ, ಕೊನೆಯ ಮಗಳೆಂದರೆ ಅಪಾರ ಪ್ರೀತಿ. ಆ ಆಶ್ರಮದಲ್ಲಿ ಇವರು ಹೇಗೆ ಕಾಲ ಕಳೆಯುತ್ತಿರಬಹುದು? ಇವರ ಮನಸ್ತಿತಿಗೆ ಸ್ಪಂದಿಸುವ ಒಂದು ಜೀವವು ಇವರ ಮನೆಯಲ್ಲಿ ಇಲ್ಲವಾಗಿದೆ. ಇದು ವಿಪರ್ಯಾಸ.

ಯಾಕೋ ಈ ವಿಷಯ ಅಮ್ಮನಿಂದ ತಿಳಿದು ನಂಜು ಅಜ್ಜಿಯ ಬಗ್ಗೆ ದುಖವಾಗ್ತಿದೆ. ಇವರನ್ನ ಬೇಟಿ ಆಗಿ ಬರುವ ಮನಸ್ಸಾಗಿದೆ. ವಯಸ್ಸಾಗುತಿದ್ದಂತೆ ಮತ್ತೊಮ್ಮೆ ಮಕ್ಕಳೇ ಆಗಿಬಿಡ್ತಾರೆ ಅಂತ ಕೇಳಿದ್ದೆ. ಇದು ಅಕ್ಷರ ಸಹ ನಿಜ, ಅನುಭವವಾಗಿದೆ. ಮಕ್ಕಳಂತೆ ಇವರಿಗೂ ಹೆಚ್ಚಿನ ಖಾಳಜಿ ನೀಡಬೇಕಿದೆ. ವ್ರುದ್ದಾಶ್ರಮದೆಡೆಗೆ ದೂಡಿದ ನಂಜು ಅಜ್ಜಿಯ ಎಂಟೂ ಜನ ಮಕ್ಕಳು ಹಾಗು ಇವರು ಬೆಳೆಸಿಕೊಂಡು ಬಂದ ಮೌಲ್ಯಗಳ ಮೇಲೆ ದಿಕ್ಕಾರವಿದೆ. ಪ್ರೀತಿ ಗೌರವಗಳಿಂದ ವಂಚಿತರಾದ ನಂಜು ಅಜ್ಜಿಯ ಮೇಲೆ ಅನುಕಂಪವಿದೆ. ಅಲ್ಲಲ್ಲಿ / ಕಾರ್ಯಕ್ರಮಗಳಲ್ಲಿ ಸಿಗುವ ಇವರ ಮಕ್ಕಳನ್ನ ನೋಡಿದಾಗ ಮಾತನಾಡಿಸುವ ಮನಸೂ ಆಗುವುದಿಲ್ಲ. ನನ್ನ ಸಿಟ್ಟು, ನನ್ನ ವರ್ತನೆಯನ್ನ ನಿಯಂತ್ರಿಸುವ ಮಾರ್ಗ ಹುಡುಕಿಕೊಳ್ಳುತಿರುತ್ತೇನೆ.

--------------------------------------------------------

ಹಳೆ ಡೈರಿಯ...ಮಾತು ಕತೆ...ನೆನಪುಗಳು ...ಇನ್ನೂ ಇವೆ!

Friday, September 7, 2012

ಸಮಯಕ್ಕೂ ಸಮಯವಿದೆ!



"ಸಮಯ" - ಎಲ್ಲರನ್ನು ಕಾಡುವ, ಎಲ್ಲರ ಜೀವನದ ಜೊತೆ ಆಟವಾಡುವ ತನ್ನ ಇರುವಿಕೆಯನ್ನು ಉಸಿರಿನ ನಿಮಿಷಗಳಲ್ಲಿ, ದಿನಗಳಲ್ಲಿ, ಕ್ಷಣಗಳಲ್ಲಿ ತುಂಬಿರುವ ಭಗವ೦ತನ ರೂವಾರಿ. ಯಾರ ಕೈಗೂ ಎಟುಕದ - ಯಾರ ಕಣ್ಣಿಗೂ ಕಾಣಿಸದ ಅಗೋಚರ! ಆದರು ತನ್ನ ಸಾಮರ್ಥ್ಯದ ಬಲದಿಂದ ನಮ್ಮ ಜೀವನವನ್ನು ಹೆಣೆಯುತ್ತಿರುವ ಅಂತರ್ಮುಖಿ. ಒಳ್ಳೆಯದಾದರೂ ಕೆಟ್ಟದಾದರು, ಎಲ್ಲದಕ್ಕೂ ಸಮಯವನ್ನೇ ದೂಷಿಸುವ ನಮ್ಮ ಗುಣವನ್ನು ಅರಿತು "ಕಾಲಾಯ ತಸ್ಮೈ ನಮಃ" ಎಂದು ಸಾರುವ ಜೀವನ್ಮುಖಿ.
ನಾನ್ಯಾಕೆ ಇದನ್ನೆಲ್ಲಾ ಹೇಳ್ತಿದೀನಿ? ಆ ದಿನ ಆಫೀಸಿನಲ್ಲಿ ನಡೆದ ತರಬೇತಿ ಶಿಬಿರ ನೆನಪಾಗಿದೆ! ವಿಷಯ "Time Management Tools" ...ಹೌದು, ಸಮಯವನ್ನ ನಿಯಂತ್ರಿಸುವ / ನಿರ್ವಹಿಸುವ / ನಿಭಾಯಿಸುವ ಬಗ್ಗೆ ನಮಗೆಲ್ಲ ತರಬೇತಿ ನೀಡಲು ಬಂದಿರುವ ನಿಪುಣರ ಒಂದು ತಂಡ(?!). ಬೆಳಗ್ಗಿನಿಂದ ಸಂಜೆಯವರೆಗೂ ಗೊತ್ತಿರುವ ವಿಷಯಗಳನ್ನೇ ತಿರುವು - ಮುರುವು ಮಾಡಿ ಹೇಳುತ್ತಿರುವುದೇ ಒಂದು ವಿಪರ್ಯಾಸ. ಸಮಯವನ್ನು ಹೇಗೆ ಉಪಯುಕ್ತವಾಗಿ ಬಳಸಿಕೊಳ್ಳಬೇಕೆಂದು ಹೇಳಲು ಬಂದ ನಿಪುಣರು ಸಮಯವನ್ನಷ್ಟೇ ಅಲ್ಲ ಹಣವನ್ನೂ ಸಹ ವ್ಯರ್ಥ ಮಾಡುತಿದ್ದಾರೆ ಅನಿಸಿತ್ತು. ಇವರ ಮಧ್ಯೆ ಮಿಂಚಿನಂತೆ ಪ್ರವೇಶಿಸಿದ ನಮ್ಮ ಕಂಪನಿಯ CEO ! ಹದಿನೈದು ನಿಮಿಷ ಇವರ ತರಬೇತಿಯನ್ನು ಆಲಿಸಿ, ನಂತರ ಮಾತನಾಡಲು ಶುರುವಿಟ್ಟರು.

"ಸಮಯ! ಇದನ್ನು ಹೇಗೆ ನಿಯಂತ್ರಿಸಲು ಸಾಧ್ಯ? ಮನುಷ್ಯನ ಸುತ್ತ-ಮುತ್ತಲು ನಡೆಯುವ ಕಾರ್ಯಕಲಾಪಗಳು, ಅವನು ಮಾಡಲೇ ಬೇಕೆಂಬ ಅನಿವಾರ್ಯತೆಗಳು, ಇದರಿಂದ ಸಮಯವನ್ನು ಒಂದು ಸಣ್ಣ ಹಂತದಲ್ಲಿ ಸಂಬಾಳಿಸಬಹುದು ಅಷ್ಟೇ. ಆದರು ಇಷ್ಟು ಸಮಯದಲ್ಲಿ ಇದನ್ನೇ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅನ್ನುವುದು ಮೂರ್ಖತನ. ನೀವೆಂದಾದರೂ ನಿಮ್ಮ ಜೀವನದ ಕೊನೆ ಘಳಿಗೆಗಳ ಬಗ್ಗೆ ಯೋಚಿಸಿದ್ದೀರಾ? Just Think, ಇನ್ನು ಬದುಕಲು ನಿಮಗುಳಿದಿರುವುದು ಬರೇ ಆರು ತಿಂಗಳು ಮಾತ್ರ, ಈ-ಆರು ತಿಂಗಳುಗಳಲ್ಲಿ ನೀವು ಮಾಡಬೇಕಾದ ಕಾರ್ಯ ಕೆಲಸಗಳು ಮಾಡಿ ಮುಗಿಸಿಬಿಡ ಬೇಕು, ನಂತರ ನಿಮಗೆ ಉಳಿವಿಲ್ಲ. ಹೀಗೆ ನೀವು ನೆನೆದು ಕೆಲಸ ಮಾಡಿದ್ದಲ್ಲಿ ನಿಮ್ಮೆಲ್ಲ ಕೆಲಸಗಳು ನೀವಂದುಕೊಂಡ ಸಮಯದೊಳಗೆ ಆಗುವುದಂತೂ ಖಚಿತ. ಆಲೋಚಿಸಿ ನೋಡಿ, ಇದು ಚಿಂತನೆಗೆ ಹಚ್ಚುವ ವಿಷಯ! ಇನ್ನು ನಾನೇನೆ ಹೇಳಿದರು ಅದನ್ನು ಸ್ವೀಕರಿಸಲೇ ಬೇಕೆಂಬ ಆಜ್ಞೆ ಏನೂ ಇಲ್ಲ - ಯೋಚಿಸಿ ನೋಡಿ". ಹೀಗೆ ಹೇಳಿ ಹೊರಟು ಹೋದರು.

ಇನ್ನುಳಿದ ನಾಲ್ಕು + ಎರಡು ತಿಂಗಳು


ನಿಜಕ್ಕೂ ಆಲೋಚನೆಗೆ ದೂಕಿದ್ದು ಆ ಅರೆಘಳಿಗೆಯ ಮಾತು. ಇನ್ನು ನಾನುಳಿಯುವುದು ಆರು ತಿಂಗಳೆಂದು ನಿರ್ಧರಿಸಿ ನನ್ನ ಜೀವನವನ್ನು ಒಮ್ಮೆ ಕಲ್ಪಿಸಿಕೊಂಡೆ. ಥಟ್ ಅಂತ ಹೊಳೆದುದು, "ನಾನು ಸತ್ತರೆ ಯಾರ್ಯಾರು ಅಳಬಹುದು, ಯಾರ್ಯಾರು ನಿಂದಿಸಬಹುದು, ಯಾರಿಗೆಲ್ಲ ಸಂತಸವಾಗಬಹುದು" ಎಂಬ ವಿಚಿತ್ರ ವಿಕಾರ ಸಂಗತಿಯ ದು(ದೂ)ರಾಲೋಚನೆ. ಇನ್ನು ಸ್ವಲ್ಪ ಹೊತ್ತಿನ ನಂತರ, ಉಳಿದ ಜೀವನವನ್ನು ಸುಮ್ಮನೆ ಹಾಗೆ ಮೆಲುಕು ಹಾಕಿದೆ.. ನೆನಪಿಗೆ ಬಂದದ್ದು ಹಲವು - ನಾನು ಮಾಡಲೇ ಬೇಕಾದ ಕೆಲಸಗಳು, ಬೇಟಿಯಾಗಲೇ ಬೇಕಾದ ವ್ಯಕ್ತಿಗಳು, ಹೇಳಲೇ ಬೇಕಾದ ಮನಸಿನ ಮಾತುಗಳು! ಕೆಲವರಿಗೆ ನಾನು ಅಭಾರಿ - ಅವರಿಗೆ ನನ್ನಿಂದ ಸಲ್ಲಲೇಬೇಕಾದ ಧನ್ಯವಾದಗಳು. ಓದಲೇ ಬೇಕೆಂದು ಪಟ್ಟಿ ಮಾಡಿರುವ ಪುಸ್ತಕಗಳು, ನೋಡಲೇ ಬೇಕಾದ ನೆಚ್ಚಿನ ಚಿತ್ರಗಳು, ಕಲಿಯಲೇಬೇಕಾದ ಹಾಡುಗಳು. ಅರೆ, ಇನ್ನು ಕ್ಷಮೆ ಯಾಚಿಸುವುದು ಸಹ ಬಾಕಿ ಇದೆ. ನನ್ನ ಕೋಳಿ, ನನ್ನ ಮೀನು, ಇನ್ನು ಅನೇಕಾನೇಕ ಗೊಂದಲಗಳು ಆಗಲೇ ತಲೆಯಲ್ಲಿ ಗೋಚರಿಸುತ್ತಿತ್ತು. ಮುಂದೇನು? ನನ್ನ ಇರುವಿಕೆಯ ಛಾಪು ಕಳೆದು ಹೋಗುವುದೇನೋ!

ಇವೆಲ್ಲವನ್ನೂ ಆರು ತಿಂಗಳಲ್ಲ - ನಾಲ್ಕು ತಿಂಗಳುಗಳಲ್ಲಿ ಮಾಡಿಬಿಡಬೇಕು, ಇನ್ನುಳಿದ ಎರಡು ತಿಂಗಳು ಈ ನೆನಪುಗಳಿಗಾಗಿ ಮೀಸಲು ಎಂದು ಲೆಕ್ಕ ಹಾಕಲು ಶುರುವಿಟ್ಟೆ. ಹೇಗಾದರೂ ಮಾಡಿ ಈ ನಾಲ್ಕು ತಿಂಗಳುಗಳಲ್ಲಿ ಇದನ್ನು ಸಾದಿಸಿಬಿಡಬೇಕು, ಆದರೆ ಇದು ಸಾಧನೆಯಲ್ಲ. ನಾನಿಲ್ಲದಿರೆ ಎಷ್ಟು ಜೀವಗಳು ನನಗಾಗಿ ಮಿಡಿಯಬಲ್ಲದ್ದು? ಸ್ನೇಹದ ಸೇತುವೆಗಳು ಬಿಗಿಯಾಗಬೇಕಿದೆ. ನನಗೆ ಸಾವಿನ ನಂತರವೂ ಬದುಕಬೇಕಿದೆ. 

ಅಂದಿನಿಂದ ಪ್ರತಿ ದಿನವು ನನ್ನ ಆರು ತಿಂಗಳ ಬದುಕನ್ನು ಒಮ್ಮೆ ನೆನೆಸಿಕೊಂಡು, ನನ್ನ ಜೀವನವನ್ನ "Renew" ಮಾಡಿಕೊಳ್ಳ ಬೇಕೆಂದು ನಿರ್ಧರಿಸಿ ಆಯಿತು. ಈ ಸಮಯ ನಿಯಂತ್ರಣ ತಂತ್ರವೊಂದನ್ನು ಹಲವು ಮಾತುಗಳಲ್ಲಿ ಹೇಳಿಕೊಟ್ಟ ಮಹಾನುಭಾವನಿಗೆ ಮನಸಾರೆ ವಂದಿಸುವೆ. ಸಮಯವೆಂಬ ಭಗವಂತನು ಈ ಆರು ತಿಂಗಳ ಜೀವನ ಭಿಕ್ಷೆ ನೀಡಿದ್ದಲ್ಲಿ, ಅದರೊಳಗಿದೆ ಹುರುಪು, ಜೀವಿಸಿಬಿಡಬೇಕೆಂಬ ದೃಢತೆ, ಮಾಡಿ ಮುಗಿಸಿಬಿಡುವ ಹಪ-ಹಪಿ, ಸತ್ತ ಮೇಲು ಬದುಕುಳಿಯುವ ಹಂಬಲ, ಕ್ಷಣ ಕ್ಷಣವೂ ನನ್ನದಾಗಿಸಿಕೊಳ್ಳುವ ಕಾತುರ.

ಈಗಷ್ಟೇ ನನ್ನ ಕೈ ಗಡಿಯಾರ ನೋಡಿಕೊಂಡೆ... ಸಮಯ ಬೆಳಗ್ಗೆ ೬.೦೬! 

 

3K - ಹರಟೆ ಕಟ್ಟೆಯಿಂದ ಕಾಪಿ-ದಿನ ದವರೆಗೆ .....


ಈ ಜೀವನದ ಅಂತರಾವಧಿಯಲ್ಲಿ 3K ಸಹ ಸೇರಿಹೋಗಿದೆ. ನಾನು ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ 3K ಕೂಡ ಸ್ಥಾನ ಪಡೆದಾಗಿದೆ.

ಒಂದು ಹೊಸ ಪ್ರಸ್ತಾವನೆ - ಕ್ವಿಕಿ ಅರುಣನಿಂದ .... ನಾವೆಲ್ಲರೂ ಒಮ್ಮೆ ಬೇಟಿಯಾಗಬೇಕೆಂದು. ಅದೊಂದು ರೀತಿಯ ಸಂಭ್ರಮ - ಅದಕ್ಕೆ ಕ್ವಿಕಿ ಇಟ್ಟ ಹೆಸರು "3K - ಸಂಭ್ರಮ". ಹರಟೆಕಟ್ಟೆಯಲ್ಲಿ ಮಾತನಾಡಿಕೊಂಡಿರುವುದು ಹೊರತು - ಯಾರೊಬ್ಬರ ಮುಖ ಪರಿಚಯ ಯಾರಿಗೂ ಇಲ್ಲ. ಇದೊಂದು ವಿಚಿತ್ರ ಅನುಭವ! ನಿಗದಿ ಪಡಿಸಿದ ದಿನಾಂಕ 26.11.2010 ...ಸಮಯ ಬೆಳಗ್ಗೆ 10.30....ಸ್ಥಳ ಅದೇ ಕಾಫಿ ಡೇ, ಮಲ್ಲೇಶ್ವರಂ....

ಈ ಸಂಭ್ರಮ ಹೇಗೆಲ್ಲ ಇರಬಹುದು? ಇಲ್ಲಿಗೆ ಯಾರ್ಯಾರು ಬರಬಹುದು? ಹೇಗೇಗೆ ಮಾತಾಡಬಹುದು..... ನಾನೇನು ಮಾತಾಡಬೇಕು? ಈ ಹಿಂದೆ ಯಾರನ್ನು ಈ ರೀತಿ ಬೇಟಿಯಾಗುವ ಧೈರ್ಯ ಮಾಡಿರಲಿಲ್ಲ! ತಿಳಿಯದ ಅರಿಯದ ಸ್ನೇಹ ಸೇತುವೆ ಹರಟೆಕಟ್ಟೆಯಲ್ಲಿ ಬೆಸೆದಿದೆ. ಆದರು ಹ್ಯಾಕಿಂಗ್ / ಇಂಟರ್ನೆಟ್ ಕ್ರೈಂ / ಫ್ರಾಡ್ ಹೀಗೆ ಏನೇನೋ ಆಲೋಚನೆ... ಒಂದೇ ಧೈರ್ಯವೆಂದರೆ ನನ್ನ ಜೊತೆ "ಅನುಪಮ ಹೆಗಡೆ"ಯವರು ಸಹ ಇರ್ತಾರೆ ಅನ್ನುವುದು! ಇವರ ಜೊತೆ ಮಾತನಾಡಿದ ಬಳಿಕ ಒಂದು ಧೈರ್ಯ. ಇವರ ಮಾತಿನ ರೀತಿಯೇ ಹೀಗೆ... ಮಿಕ್ಕಂತೆ ನೋಡೋಣ - ಈ ಅನುಭವಕ್ಕಾಗಿ ಕಾತುರತೆ ಇದೆ ಎಂದುಕೊಳ್ಳುತಿದ್ದಂತೆ, ಬಂದೆ ಬಿಟ್ಟಿತು ಆ ದಿನ!

ಆ ಭಾನುವಾರ ನಿಜಕ್ಕೂ ಸಂಭ್ರಮಿಸಿದ್ದು ಹೇಗೆ?

Sunday, September 2, 2012

ಅ(ವನ) - ಕ(ವನ)

ಅ(ವನ) - ಕ(ವನ)

ಬಿರಿದೆ ಹೂ ನಗೆ

ಅವರಿವರ ಕಡೆಗೆ

ಬರೆದೆ ಮೌನಗಳ

...ನಿನ್ಹೆಸರ ಪಡೆಗೆ

********

ನೀನಿರುವ ಮೋಹದಲಿ

ನಡೆಯುತಿದೆ ಸುಲಿಗೆ

ನಾನೇ ಇರದ ಕವಿತೆಗಳು

ಅವರಿವರ ಪಾಲಿಗೆ....

********
ಕನಸೆಲ್ಲ ಹಗಲಲ್ಲೇ

ನಿಶೆ ಈಗ ಕನಸೇ

ಪುಸಲಾವಣೆ ಬೇಕೇ

ಅರೆನಗೆಯ ಶಶಿಗೆ

********
ಅಳಿದುಳಿದ ನಾಳೆಗಳ

-ಕಡೆಗೆ ಕನವರಿಕೆ

ಅರಿಯದಿರೆ ಬೇಡಬಿಡು

ಕಡೆಗೆ ಮನವರಿಕೆ

********

Sunday, July 15, 2012

ಹಾಡೊಂದು ಇಷ್ಟವಾಗಿಹೋಗಿದೆ



ಒಂದು ಹಾಡು ನಮ್ಮ ನೆಚ್ಚಿನ ಹಾಡುಗಳ ಸಾಲಿಗೆ ಸೇರೋದು ಯಾವಾಗ? ನಮ್ಮ ಫೇವರಿಟ್ ಆಗೋದು ಯಾವಾಗ? ಬಹುಶ ಆ ಹಾಡಿನ ಯಾವುದೋ ಒಂದು ಸಾಲು ನಮ್ಮನ್ನು ಆವರಿಸಿಕೊಂಡಂತೆ, ಹಾಡಿದವರ ಕಂಠದಲ್ಲಿ ಭಾವನೆಗಳು ಸರಾಗವಾಗಿ ಹರಿದಂತೆ, ಹಾಡಿನ ರಾಗ ಜೀವನದ ಯಾವುದೋ ಘಳಿಗೆಯನ್ನು ಸಂಯೋಜಿಸಿದಂತೆ, ಅದರ ಲಯ ಹೃದಯದ ಮೂಲೆಯಲ್ಲೆಲ್ಲೋ ಸಿಂಚನವಾದಂತೆ ಇರಬಹುದು. ಹೀಗೆ ಆವರಿಸಿಕೊಂಡು ಇಷ್ಟವಾದ ಹಾಡೊಂದನ್ನು ಆಗಷ್ಟೇ FM ನಲ್ಲಿ ಕೇಳಿಕೊಂಡು ಆಟೋ ಹತ್ತಿ ಆಫೀಸಿಗೆ ಹೊರಟೆ. ಆಗಷ್ಟೇ ಹೊಸದಾಗಿ ಬಿಡುಗಡೆ ಆದ ಕನ್ನಡ ಚಿತ್ರದ ಈ ಇ೦ಪಾದ ಹಾಡು ತುಂಬಾ ಇಷ್ಟವಾಗಿ ಹೋಗಿದೆ. ಅರೆ, ಇದೇನಿದು! ಈ ಹಾಡಿನ ನಡುವೆ ನನ್ನ ಕಂಪನಿಯ CEO ಕರೆ! ಇವರ ಮುಂದೆ ನಿಂತು ಎದುರ ಮಾತನಾಡುವ ವ್ಯಕ್ತಿಯನ್ನು ಇದುವರೆಗೂ ನಾನಂತೂ ಕಂಡಿಲ್ಲ. ಈಗ ಅವರ ಈ ಕರೆ! ಮಾತನಾಡಲು ಹೊರಟರೆ ಹಾಡಿನ ಪದಗಳು - ಸಾಹಿತ್ಯ - ಹಾಡನ್ನು ಕೇಳುವ ಸಂಭ್ರಮ ಎಲ್ಲವೂ ಸಧ್ಯಕ್ಕೆ ಮುಗಿದೇ ಹೋಗುವುದ೦ತು ನಿಶ್ಚಿತ. ಮಾಲೀಕರ ಈ ಕರೆಯನ್ನು ನಿರಾಕರಿಸಿದರೆ ಹೇಗೆ? ಆ ಅರೆ ಘಳಿಗೆ ಮನಸು ನಿರಾಕರಿಸುವಂತೆ ಸೂಚಿಸಿದೆ, ಆದರೆ ಈ ಸೂಚನೆಗೆ ಮುಂಚೆಯೇ ಕರೆ ನಿರಾಕರಿಸಿ ಆಗಿದೆ. ಹಾಡು ಸಂಪೂರ್ಣವಾಗಿ ಕೇಳಿದ ನಂತರ ತಕ್ಷಣವೇ ಕರೆ ಮಾಡಿ ಮಾತನಾಡಿದೆ.

ಇವರ ಕರೆ ನಿರಾಕರಿಸುವಷ್ಟು ಪ್ರಭಾವ ಈ ಹಾಡಿಗೆದೆಯೇ? ಪ್ರಾಮಾಣಿಕತೆಯಿಂದ ಮಾಡುವ ಕೆಲಸವೇನೋ ಸರಿ! ನಡುವೆ ಹಾಡು ಕೇಳುವುದೂ ಸಹ ಒ೦ದು ಸಣ್ಣ ಸಂಭ್ರಮ. ಕರೆ ನಿರಾಕರಿಸಿದ ಘಳಿಗೆ - 'ಪರಪಂಚ' ಮುಳುಗಿ ಹೋಗಲಿಲ್ಲ - ಕೆಲಸ, ಕಂಪನಿ, ಎಲ್ಲವೂ ಅದರದರ ಸ್ಥಾನಗಳಲ್ಲಿ ಹಾಗೆಯೇ ಇವೆ. ನನ್ನ ಈ ಸ್ವಾರ್ಥ, ಈ ಧೈರ್ಯ, ಈ ವರ್ತನೆ ಎಷ್ಟು ಸಮ೦ಜಸವೋ ತಿಳಿಯುತ್ತಿಲ್ಲ! ಸಾಂತ್ವನ ಹೇಳುವಂತೆಯೋ - ಗೇಲಿಮಾಡಿದ೦ತೆಯೋ ಸೂರ್ಯ ಅಲ್ಲಿಂದಲೇ ನನ್ನೆಡೆ ನೋಡಿ ಸಣ್ಣದೊಂದು ಎಳೆ ಬಿಸಿಲಿನ ನಗೆ ರವಾನಿಸಿದ್ದ. ಇವುಗಳ ನಡುವೆ ಅದೇ ಹಾಡಿನ ಸಾಲೊಂದು ಮತ್ತೆ ನೆನಪಾಯಿತು. ಇಷ್ಟಕ್ಕೂ ಸಣ್ಣ ಸಣ್ಣ ವಿಚಾರಗಳಲ್ಲಿ ಅಡಗಿರುವ ಸಂಭ್ರಮದ ಒಡನಾಟ - ಹುಡುಕಾಟ ಇಂದಿಗೂ ಜಾರಿಯಲ್ಲಿದೆ.

3K - ಪ್ರೇಮ ಕವನಗಳ ಕಾಶಿ

ಸಣ್ಣ ಪುಟ್ಟ ನಾಕು ಸಾಲಿನ ಕವನಗಳೆಲ್ಲ ಈಗ ದೊಡ್ಡ ದೊಡ್ಡ ಕವನಗಳ ರೂಪ ತಾಳುತಿದೆ. ಎಲ್ಲರೂ ಪ್ರೇಮ ಕವಿಗಳೇ ಎನ್ನುವ೦ತೆ ಸಧ್ಯಕ್ಕೆ ಹೆಚ್ಚೆಚ್ಚು ಪ್ರಕಟವಾಗುತಿರುವುದು ಪ್ರೇಮ ಕವನಗಳೇ! 3K ಸಮುದಾಯದಲ್ಲಿ ಈಗ ಪ್ರೀತಿ - ಪ್ರೇಮ - ಪ್ರಣಯದ ಕವನಗಳ ಪದ ಪುಂಜ ರಾಶಿ! ಎಲ್ಲರ ಕವನಗಳಲ್ಲಿಯೂ ಪ್ರೀತಿಯದೇ ಕಾರುಬಾರು - ಇವೆಲ್ಲ ಓದುತಿದ್ದರೆ ಪ್ರೇಮಿಗಳ ನಗರಕ್ಕೆ ಬಂದಂತಿದೆ. ನೇರ ಹೃದಯಕ್ಕೆ ಲಗ್ಗೆ ಇಡುವ ಸಾಲುಗಳು! ಮತ್ತೊಮ್ಮೆ ಪ್ರೀತಿಯಲ್ಲಿ ಬೀಳುವ೦ತೆ ಮನಸಾದರು ಆದೀತು. ಹೀಗೆ ಈ ಪ್ರೇಮ ಕವನಗಳ ಓದುವಾಗ ಮನಸಲಿ ಮೂಡಿಬಂತು ಈ ಸಾಲು "Have Just Fallen In Love With Live.... All Over Again". ಜೀವನವನ್ನು ಅತಿಯಾಗಿ ಪ್ರೀತಿಸುವಂತೆ ಮಾಡುವುದೇ ಈ ಪ್ರೀತಿ! ಮತ್ತೊಮ್ಮೆ ಜೀವನವೆಂಬ ಪ್ರೀತಿಯಲ್ಲಿ ಬೀಳುವ ಆಸೆ ಈ ಕವನಗಳು ಮೂಡಿಸುತ್ತಿವೆ.

ಹೀಗೆ ಈ ಕವನಗಳನ್ನು ಓದುವಾಗ ಹೀಗೊಂದು ಸಂಗತಿ ಗಮನಿಸಿದೆ! ಪ್ರೇಮ ಕವನಗಳನ್ನು ಹುಡುಗ ಹುಡುಗಿಯರೂ (ಕವಿಗಳು) ಇಬ್ಬರೂ ಬರೆಯುತಿದ್ದಾರೆ. ಇಬ್ಬರ ಪ್ರೇಮ ಕವನಗಳಲ್ಲೂ ಮೂಡಿಬರುತಿರುವ ವಸ್ತು,
  • ಸಂಗಾತಿ ಹೀಗಿರಬೇಕು
  • ಭಗ್ನ ಪ್ರೇಮ / ವ೦ಚನೆ
  • ಮೋಸಹೋದ ಹೃದಯ
  • ಕಾಡುವ ಪ್ರೇಮಿ
  • ಜೊತೆಯಲ್ಲಿ ಕಳೆದ ದಿನಗಳು
  • ಆಣೆ : ಭಾಷೆ
  • ಅವಳ ಸೌಂದರ್ಯ / ಅವನ ಗುಣಗಾನ
  • ಗಾಯಗೊಂಡ ಪ್ರೀತಿ
  • ಕಳೆದುಹೋದ ಹುಡುಗ / ಹುಡುಗಿ
ಈ ಕವನಗಳ ಜೀವಾಳ ಒಂದೇ ಆದರು ಅದನ್ನು ತಮ್ಮದೇ ಆದ ಭಾವಗಳಲ್ಲಿ ಹುಡುಗ - ಹುಡಗಿಯರಿಬ್ಬರೂ ಹೇಳಿಕೊಳ್ಳುತಿರುವ ವಿಭಿನ್ನ ರೀತಿ ಮನಸೆಳೆಯುವ೦ತದ್ದು . ಒಂದೆಡೆ ಮುಗ್ಧ ಹುಡುಗಿಯ ಹೃದಯ ಕದ್ದು ಪರಾರಿಯಾಗುವ ಹುಡುಗನಾದರೆ, ಮತ್ತೊಂದೆಡೆ ಅಮಾಯಕ ಹುಡುಗನ ಪ್ರೀತಿ ನಿರಾಕರಿಸಿ ಹೋದ ಹುಡುಗಿ. ಹಾಗಿದ್ದರೆ, ಇದು ನಿಜವೇ ಆಗಿದ್ದರೆ, ಒಂದಂತು ಖಾತರಿಯಾಗುತ್ತಿದೆ! ಒಳ್ಳೆಯ ಹುಡುಗನಿಗೆ ಗುಣವಂತೆ ಸಿಗಲಾರಳೋ ಅಥವಾ ಒಳ್ಳೆಯ ಹುಡುಗಿಗೆ ಹೃದಯವಂತ ಸಿಗಲಾರನೋ, ಅಂತೂ ಒಬ್ಬರಿಗೊಬ್ಬರು ಸಿಗದೇ 3K ಯಲ್ಲಿ ಕವನಗಳಾಗಿ ಹೋಗುತಿದ್ದಾರೆ. ಪ್ರೇಮ ಕವನಗಳಲ್ಲಿ ಪದಗಳಾಗಿಬಿಡುತಿದ್ದಾರೆ. ಕೆಲವು ಸ್ವಂತ ಅನುಭವಗಳಾಗಿದ್ದರೆ, ಹಲವು ಕಾಲ್ಪನಿಕವಿರಬಹುದು, ಇನ್ನು ಕೆಲವು ಅವರಿವರ ಕಂಡು ಬರೆದಿರಲೂ ಬಹುದು. ಅದೇನೇ ಇದ್ದರು ಇವರ ಮಟ್ಟಿಗೆ ಪ್ರೀತಿಯನ್ನು ಅನುಭವಿಸಿ ಬರೆದಿರಬಹುದೆ೦ಬುದಕ್ಕೆ ಈ ಕವನಗಳೇ ಸಾಕ್ಷಿ.

ಪ್ರೀತಿ ಪ್ರೇಮ ತುಂಬಿದ ಕವನಗಳ ನಡುವೆ ವಿಭಿನ್ನತೆ ಹೊಂದಿರುವ ಇತರ ವಿಚಾರಗಳ ಕವನಗಳನ್ನು ಓದುವಾಸೆ ಮನಸಿನ ಮೂಲೆಯಲ್ಲೆಲ್ಲೋ ಮೊಳಕೆ ಹೊಡೆಯುತ್ತಿದೆ.
"ಹರಟೆಕಟ್ಟೆ" ಎಂಬ ರೈಲುಬಂಡಿ

"ಹರಟೆಕಟ್ಟೆ" ಎಂದು ನವೀನ್ ಶುರುಮಾಡಿಯಾಗಿದೆ! ಈ ಕಟ್ಟೆ ಹೇಗಿದೆಯೆಂದರೆ : ಹೊಸದೊಂದು, ಬಹು ದೊಡ್ಡದೊಂದು - ದೂರದೂರಿನ ಪಯಣಕ್ಕೆ ರೈಲು ಗಾಡಿ ಹತ್ತಿದಂತಿದೆ. ಈ ಸಾಗುವ ಪಯಣದಲ್ಲಿ ಒಬೊಬ್ಬರೇ ರೈಲು ಹತ್ತಿ ಸುತ್ತಮುತ್ತಲಿನ ಪ್ರಯಾಣಿಕರನ್ನು ಕಣ್ಣರಳಿಸಿ ನೋಡುವಂತೆ! ಈಗಷ್ಟೇ ನಮ್ರತೆಯ ಮಾತುಕತೆ ಶುರುವಿಟ್ಟ೦ತಿದೆ! ತಮ್ಮಲ್ಲಿರುವ ಬುತ್ತಿಗಳನ್ನೆಲ್ಲ ಬಿಚ್ಚಿ ಎಲ್ಲರೊಡನೆ ಹಂಚಿಕೊಳ್ಳುವ ಮನಸಾದಂತಿದೆ. ಇಲ್ಲಿ ಎಲ್ಲಾ ವಯಸ್ಸಿನ ಪ್ರಯಾಣಿಕರೂ ಏರಿದಂತಿದೆ.

ನಿಧಾನವಾಗಿ ಒಬೊಬ್ಬರ ಪರಿಚಯಗಳು ನಡೆಯುತ್ತಿವೆ. ಅರೆ! ಈ ಹುಡುಗರು ಎಷ್ಟು ಬೇಗ ಪರಿಚಿತರಾಗಿಬಿಡ್ತಾರೆ. ಎಷ್ಟೋ ವರ್ಷಗಳ ನ೦ಟಸ್ತಿಕೆ ಇರುವ ಹಾಗೆ ಒಬ್ಬೊಬ್ಬರನ್ನು ಅವರು ಕರೆದುಕೊಳ್ಳುತಿರುವ ಹೆಸರುಗಳು : ಗುರುವೇ, ಶಿವ, ಮಚ್ಚಿ, ತಂದೆ, ಮಗ, ಮಾಮ etc., ಹೀಗೆ. (ಚೆರ್ರಿ ಚರಣ್ ಹಾಗು ಕ್ವಿಕಿ ಅರುಣ್ ಇನ್ನಷ್ಟು ಪದಗಳನ್ನು ಹೇಳಿಕೊಟ್ಟಿದ್ದಾರೆ, ಯಾವ ಶಬ್ದಕೋಶ - ಪದಕೋಶ - ಅರ್ಥಕೋಶ - ನಿಘಂಟುಗಳನ್ನೆಲ್ಲಾ ಹುಡುಕಿದರೂ ಆ ಪದಗಳಿಗರ್ಥ ಸಿಗಲಾರದು). ಈ ಹರಟೆಕಟ್ಟೆ ತಮಾಷೆಯಾಗಿದೆ, ಕವನಗಳ ಹೊರತು ಬೇರೆಲ್ಲ ವಿಷಯಗಳು ಈ ಕಟ್ಟೆಯಲ್ಲಿ ಮಾತನಾಡಬಹುದು.

ಏನೇ ಆಗಲಿ ಹರಟೆಕಟ್ಟೆಯಿಂದಾಗಿ 3K ಎಂದರೆ ಎಲ್ಲರಿಗೂ ಪ್ರೀತಿ ಮೂಡಿಸುವಂತಾಗುತಿದೆ. ನವೀನನಿಗೊಂದು ಪ್ರೀತಿಯ ಧನ್ಯವಾದ. ಈಗಷ್ಟೇ ಈ ರೈಲು ಬಂಡಿ ಹೊಸದೊಂದು ತಿರುವು ಪಡೆಯಲು ಮುಂದಾಗುತಿದೆ.......................

Wednesday, June 27, 2012

ಪುಸ್ತಕದ ಮಹಲು

ಈ ದಿನ ಹೊಸದೊಂದು ಅನುಭವದೆಡೆಗೆ ಹೆಜ್ಜೆ.  ಹೊಸದೊಂದು ಗುಂಪು, ಹೊಸ ಪರಿಚಯ, ನಾನಿಲ್ಲಿ ಹೊಸಬಳು - ಒಂದು ರೀತಿಯ ಕುತೂಹಲ ಈ ದಿನ ಹೇಗಿರಬಹುದೆಂಬ ಯೋಚನೆ ಹೊಸ ಹುರುಪಿನಲ್ಲಿ ಮಗಳ ಜೊತೆ, ಜ್ಯೋತಿ ಬಸು ಹಾಗು ಅವರ ಮಕ್ಕಳ ಜೊತೆ ನಾಯ೦ಡಳ್ಳಿ  ಸರ್ಕಲ್ನಲ್ಲಿ ಬಸ್ಸಿಗಾಗಿ ಕಾದು ನಿಂತ ಕೆಲವೇ ನಿಮಿಷಗಳಲ್ಲಿ ಬಸ್ಸು ಹಾಜರಿ.

ಹತ್ತಿದೊಡನೆ ಎಲ್ಲರನ್ನು ಒಮ್ಮೆ ಕಣ್ಣಾಯಿಸಿ ಕೈ ಬೀಸಿ ಸೀಟಿನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲೇ ಎಲ್ಲರ ಪರಿಚಯಗಳು ಶುರುವಾದವು. ಮಹೇಶ್, ಜ್ಯೋತಿ ಬಸು, ಶ್ರೀಕಾಂತ್, ಶಿವೂ, ಓಂ ಶಿವಪ್ರಕಾಶ್, ಪವಿತ್ರ, ಪ್ರಕಾಶ್ ಹೆಗ್ಡೆ, ಆಜಾದ್ ಸರ್, ಉಮೇಶ್, ಸುದೇಶ್, ಸುಲತ, ಸಂಧ್ಯಾ, ಗಿರೀಶ್, ನವೀನ, ನಂದಿನಿ, ಗುರು ಹೀಗೆ ಎಲ್ಲರ ಪರಿಚಯಗಳು ಮುಗಿದವು. ಇವರ ಮಧ್ಯೆ ನನ್ನ ನೆಚ್ಚಿನ ಆಶಾ ಪ್ರಕಾಶ್ ಹೆಗ್ಡೆ ಕೂಡ. ನೋಡಿದಾಗ, "ಅರೆ, ಇವರ!! ಇವರ ಬಗ್ಗೆ ನನಗೆ ಈಗಾಗಲೇ ತಿಳಿದಿದೆ,  ಪರಿಚಯವಿದೆ - ಇವರನ್ನ ಪ್ರಕಾಶ್ ರವರ ಪುಸ್ತಕಗಳಲ್ಲಿ, ಛಾಯಾಚಿತ್ರಗಳಲ್ಲಿ, ಅವರ ಕವನಗಳಲ್ಲಿ ಬೇಟಿ ಆಗಿರುವೆ" ಎಂದೆನಿಸಿದ್ದು ನಿಜ. ನಾನಿವರ A/c ಅಂದರೆ ತಪ್ಪಾಗಲಾರದು, ಕಾರಣ!..... ಯಾರೊಬ್ಬರ ಅಭಿಮಾನಿಯಾಗಲು ಕಾರಣಗಳಿರಲೇಬೇಕೆ? ಅವರನ್ನು ನೋಡಿದ್ದೇ ಒಂದು ಸಂತಸ.

ಅಲ್ಲಿಂದ ಶುರುವಾದ ಪಯಣ :

ಪ ಪ ಪ ಪರಿಚಯಗಳು - ಬಿಡದಿ ಖ್ಯಾತಿಯ ಇಡ್ಲಿಗಳು - ಅಂತ್ಯಾಕ್ಷರಿ ಹಾ ಹಾ ಹಾ ಹಾಡುಗಳ - ನಡುವೆ ಕೀ ಕೀ ಕೀ ಕೀಟಲೆಗಳು - ಆಡು ಆಡುತ್ತಲೇ ತಲುಪಿದ್ದು ಹಾಯಾಗಿ ಮಲಗಿರುವ ಶ್ರೀ ರಂಗನ ಪಟ್ಟಣಕ್ಕೆ. ಈ ಪುಟ್ಟ ನಗರದಲ್ಲಿ ಅಡಗಿರುವ ಇತಿಹಾಸಗಳೆಷ್ಟೋ - ಇದರ ನಡುವೆ ನಮ್ಮ ಮನೆಯ ಕುಲದೇವತೆ ನಿಮಿಷಾಂಬ ದೇವಿಯು ನದಿಯ ದಂಡೆಯಲ್ಲಿ ಹಸನ್ಮುಖಿಯಾಗಿ ವಾಸಿಸುತ್ತಿದಾಳೆ. ಇನ್ನು ನಮಗಂತಲೇ ಕಾದಿದ್ದ ಬಾಲು ಸರ್ ಬೇಟಿ. ಅವರ ಮುಗ್ಧ ನಗೆ ಹಾಗು ಮನ ಮುದ ನೀಡುವ ಪ್ರಾಮಾಣಿಕ ಮಾತುಗಳು. ಮಾತನಾಡುತ್ತಲೇ ತಲುಪಿದ್ದು ಒಂದು ಭವ್ಯ ಲೋಕಕ್ಕೆ, ಮೂಕ ವಿಸ್ಮಿತವಾಗಿಸುವ ಒಂದು ಪುಸ್ತಕದ ಮಹಲಿಗೆ. ಪಾಂಡವಪುರಕ್ಕೆ.




ಪಾಂಡವಪುರ ಹಾಗು ಅಂಕೆಗೌಡರು

"ಪಾಂಡವಪುರದ ಪುಸ್ತಕ ಮಹಲು" ಈ ಮಹಲಿನೊಳಗೆ ಕಾಲಿಡುತ್ತಿದ್ದಂತೆ ಎಲ್ಲಿ ನೋಡಿದರಲ್ಲಿ ಶಾರದಾಂಬೆಯ ಒಲವು - ಸರಸ್ವತಿಯದ್ದೆ ಗೆಲುವು. ಈ ಮಹಲನ್ನು ಹುಟ್ಟುಹಾಕಿದವರು ಅಂಕೆಗೌಡರು. ಅತಿ ಸರಳ ವ್ಯಕ್ತಿತ್ವ. ಅವರ ಮಹಲಿನಲ್ಲಿ ಪುಸ್ತಕಗಳದ್ದೆ ಕಾರುಬಾರು. ಎಲ್ಲೆಲ್ಲೂ ರಾಶಿ ರಾಶಿ ಪುಸ್ತಕಗಳು, ಕಾಲಿಟ್ಟೆಡೆ ಪುಸ್ತಕಗಳು, ಕಣ್ಣು ಹಾಯಿಸಿದಲ್ಲೆಲ್ಲ ಪುಸ್ತಕಗಳು!


ಈ ಸಂಗ್ರಹ ನೆನ್ನೆ ಮೊನ್ನೆಯದಲ್ಲ - ಅಂಕೆಗೌಡರ ಜೀವಮಾನದ ಸಂಗ್ರಹ! ಆರುನೂರು ವರ್ಷಗಳ ಹಿಂದಿನ ಪುಸ್ತಕಗಳಿಂದ ಹಿಡಿದು ಇತ್ತೀಚಿನ ವರೆಗೂ ಎಲ್ಲವೂ ಲಭ್ಯ!! ಒಂದು ಲಕ್ಷಕ್ಕಿಂತ ಹೆಚ್ಚು ಪುಸ್ತಕಗಳಿರಬಹುದು. ಅವರು ವೃತ್ತಿಯಲ್ಲಿ ಗಳಿಸಿದ ಪ್ರತಿಯೊಂದು ರೂಪಾಯಿ ಈ ಪುಸ್ತಕಗಳ ಖರೀದಿಗೆ ಬಳಸಿದ್ದಾರೆ. ತಮ್ಮಲ್ಲಿರುವ ಆಸ್ತಿಗಳನೆಲ್ಲ ಮಾರಿ ಪುಸ್ತಕ ಸಂಗ್ರಹಕ್ಕೆ ಉಪಯೋಗಿಸಿದ್ದಾರೆ. ಸುತ್ತ ಮುತ್ತಲಿನ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಇವರ ಪುಸ್ತಕ ನಿಧಿ ಉಪಯುಕ್ತವಾಗುತ್ತಿದೆ. ಇವರ ಈ ನಿಲುವಿಗೆ ಇವರ ಪತ್ನಿಯ ಸಹಕಾರವೂ ಮೆಚ್ಚುವಂತದ್ದೆ.



ಇವರ ಬಗ್ಗೆ ಬಾಲುರವರ ಬ್ಲಾಗಿನಲ್ಲಿ ಓದಿದ್ದೆ [http://nimmolagobba.blogspot.in/2010/08/blog-post_16.html]. ಕಣ್ಣಾರೆ ನೋಡಿದಮೇಲಂತೂ ನನ್ನ ಪ್ರತಿಯೊಬ್ಬ ಸ್ನೇಹಿತರಿಗೂ, ಪುಸ್ತಕ ಪ್ರೇಮಿಗಳಿಗೂ ಇಲ್ಲೊಮ್ಮೆ ಬೇಟಿಯಾಗುವಂತೆ ಹೇಳಲೇಬೇಕಿದೆ.


ಇವರ ಪುಸ್ತಕ ಬಂಡಾರ ಸಾರ್ವಜನಿಕರಿಗೆ ಅರ್ಪಿಸಿ ಗ್ರಂಥಾಲಯವಾಗಿಸಿದ್ದಾರೆ. ಹಾಗು ಹೀಗೂ ನಾವೆಲ್ಲರೂ ಸ್ವಾರ್ಥ ಲೋಕದಲ್ಲಿ ತೇಲುವ ನಾವಿಕರೆ ಹೌದು, ನಮ್ಮೆಲ್ಲರ ನಡುವೆ ವಿಭಿನ್ನವಾಗಿ ಸಮಾಜ ಸೇವೆ ಮಾಡುತಿರುವ ಅಂಕೆಗೌಡರಿಗೆ ನನ್ನ ಹೃದಯಪೂರ್ವಕ ನಮನ. ಇವರ ನಿಸ್ವಾರ್ಥ ಬದುಕು ಜ್ಞಾನದ ದೀವಿಗೆಯನ್ನು ಪ್ರಜ್ವಲಿಸಿ ಬೆಳಗಿಸಿದೆ! ಈ ಪುಸ್ತಕ ಪ್ರೇಮಿಗೆ - ಜ್ಞಾನ ದೇಗುಲವನ್ನು ನಿರ್ಮಿಸಿದ ಮಹಾನುಭಾವನಿಗೆ ಅನಂತಾನಂತ ವಂದನೆಗಳು.

ಎಲ್ಲರು ಮೂಕರಾಗಿ ಯಾವ ಪುಸ್ತಕವನ್ನು ನೋಡುವುದು - ಬಿಡುವುದೆಂದು ಗೊಂದಲದಲ್ಲಿರುವಾಗಲೇ ಅಂಕೆಗೌಡರನ್ನು ಪರಿಚಯಿಸಿ ಸನ್ಮಾನ ಮಾಡಿದರು ಬಾಲು ಸರ್, ಅಜಾದ್ ಸರ್ ಹಾಗು ಪ್ರಕಾಶ್ರವರು. ಈ ಸನ್ಮಾನ ಇವರ ಸಾಧನೆಗೆ ಸಲ್ಲಿಸಿದ ಗೌರವ.


ಅವರನ್ನು ಬೇಟಿ ಮಾಡಿದಾಗ ನಮ್ಮಲ್ಲಿರುವ ಒಂದೊಂದು ಪುಸ್ತಕವನ್ನು ಅಂಕೆಗೌಡರಿಗೆ ನೀಡೋಣವೆಂದು ಪ್ರಕಾಶ್ರವರು ಸೂಚಿಸಿದ್ದರು. ಅಂತೆಯೇ ನಮ್ಮೆಲ್ಲರ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡೆವು. "ಭಾವಸಿಂಚನ" ವನ್ನು ಅಂಕೆಗೌಡರ ಕಯ್ಯಲ್ಲಿ ನೋಡಿದಾಗ ಹೆಮ್ಮೆ ಅನಿಸಿದ್ದು ನಿಜ.


"ಭಾವಸಿಂಚನ" 3K ಸಧಸ್ಯರುಗಳ ಚೊಚ್ಚಲ ಕವನ ಸಂಕಲನ - ಇಂಥದೊಂದು ಐತಿಹಾಸಿಕ ತಾಣವಾಗಲಿರುವ ಗ್ರಂಥಾಲಯದಲ್ಲಿ "ಭಾವಸಿಂಚನ" - ಈಗಲೂ ನೆನೆಸಿಕೊಂಡರೆ ಒಂದು ರೀತಿಯ ರೋಮಾಂಚನ. ಈ ಖುಷಿಯನ್ನು ನನ್ನ 3K ಕುಟುಂಬಕ್ಕೆ ಹಂಚಲೆಬೇಕಿದೆ. ಈ ತಾಣಕ್ಕೆ ಬೇಟಿಯಾದವರು ಮೂಕವಿಸ್ಮಿತರಾಗುವುದಂತು ಹೇಳನಿಶ್ಚಯ!  ಅಲ್ಲಿಂದ ಹೊರಡುವ ಮಾತಿರಲಿ ಎದ್ದೇಳುವ ಮನಸು ಯಾರಿಗೂ ಇರಲಿಲ್ಲ!


ಕರಿಘಟ್ಟ [ಬೆಟ್ಟ]

ಇಲ್ಲಿಂದ ಹೊರಟದ್ದು ಹತ್ತಿರದಲ್ಲೇ ಇದ್ದ ಕರಿಘಟ್ಟಕ್ಕೆ... ವೆಂಕಟರಮಣ ಸ್ವಾಮಿಯ ದೇಗುಲಕ್ಕೆ. ನಮಗೆಂದೇ ಕಾದಿದ್ದ ಸ್ವಾಮಿಯ ಕೊನೆಯ ದರುಶನ ಮುಗಿಸಿ - ಭರ್ಜರಿ ಊಟಕ್ಕೆ ಲಗ್ಗೆ! ಮೂರು ಬಾರಿ ಪುಳಿಯೋಗರೆ ತಿನ್ನುವಷ್ಟು ರುಚಿಯಾದ ಅಡುಗೆ...ನಂತರ ಬೆಟ್ಟದ ಮೇಲಿದ್ದ ಒಂದು ಪುಟ್ಟ ಓಪನ್ ಏರ್ ಥಿಯೇಟರ್.... ಗುರು ಹಾಗು ಶಿವೂರವರ ನೇತ್ರತ್ವದಲ್ಲಿ ಆಟ - ಒಡನಾಟ. ಆದರಲ್ಲಿ ನಾವು ಬೇಟಿಯಾದ ಚೆ೦ಡಾನಂದ ಸ್ವಾಮೀಜಿಗಳು, ಅವರ ವೇಷ ಭೂಷಣ ಹಾಗು ಭಕ್ತರಿಗೆ ನೀಡಿದ ಸಲಹೆಗಳು, ಅಳು ಬರುವಷ್ಟು ನಕ್ಕ ಕ್ಷಣಗಳು ಅವಿಸ್ಮರಣೀಯ!
ಸಂಜೆಯಷ್ಟರಲ್ಲಿ - ಈ ದಿಗ್ಗಜರುಗಳೇ ತುಂಬಿದ ಬ್ಲಾಗಿಗರ ಸಮೂಹದಲ್ಲಿ ನಾನಿನ್ನು ಹೊಸಬಳು ಎನ್ನುವ ಮಾತು ಹೇಳುವಂತಿರಲಿಲ್ಲ. ಇದೊಂದು ಸುಂದರ ಪ್ರವಾಸ, ಮರೆಯಲಾಗದ ಸ್ನೇಹಕೂಟ .... ಸಜ್ಜನರ ಸಹವಾಸದೋಳ್ ಹೆಜ್ಜೇನ ಸವಿದೆ.... ಮನೆಗೆ ಬಂದಾದರೂ ಇಲ್ಲಿಯವರೆಗೂ ಅಲ್ಲಿನ ನೆನಪುಗಳು ಕಾಡುತಿವೆ.

ಮತ್ತೆ, ಒಬ್ಬೊಬ್ಬರ ಕಯ್ಯಲ್ಲೂ ನೋಡಿದ ಕ್ಯಾಮೆರಾಗಳು ನನ್ನನ್ನು ಹಣುಕಿಸಿದ್ದುಂಟು, ಗಾಬರಿಗೊಳಿಸಿದ್ದುಂಟು! ಹೊಸ ಕ್ಯಾಮೆರ ಕೊಡಿಸದೇ ಹೋದರೆ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದರೆ ಕ್ಯಾಮೆರ ಮನೆಗೆ ಬಂದರೂ ಬಂದೀತು:-)

ಸಂತಸವೆಂದರೆ ಮತ್ತೊಮ್ಮೆ ಪಾಂಡವಪುರಕ್ಕೆ ನನ್ನ ಬೇಟಿ ಆಗುವ ಎಲ್ಲ ಸಂಭವಗಳು ಇವೆ. ಬೇಗ ತಿಳಿಸುತ್ತೇನೆ. ಇಂತದೊಂದು ಪ್ರವಾಸಕ್ಕೆ ನನ್ನನ್ನು ಆಮಂತ್ರಿಸಿದ ಪ್ರಕಾಶ್ರವರಿಗೆ ಹೃದಯಪೂರ್ವಕ ಧನ್ಯವಾದಗಳು.

 * * * *

 
ತಮ್ಮ ಫೋಟೋಗಳನ್ನು ನನಗೆ ನೀಡಿದ ಜ್ಯೋತಿ ಬಸು ಹಾಗು (ಅಲ್ಲಿಲ್ಲಿ ನಾನೇ ಕದ್ದು ತಂದ) ಫೋಟೋಗಳ ಮಾಲೀಕರಿಗೆ ಪ್ರೀತಿಯ ಧನ್ಯವಾದಗಳು.

PS : ಅಂಕೆಗೌಡರಿಗೆ ತಮ್ಮ ಪುಸ್ತಕಗಳನ್ನು ಕಳಿಸಲು ಇಚ್ಚಿಸುವವರು, ಸಹಾಯ ಹಸ್ತ ನೀಡಲಿಚ್ಚಿಸುವವರು, ಬೇಟಿ ಆಗ ಬಯಸುವವರು - ಈ ವಿಳಾಸವನ್ನು ಬರೆದುಕೊಳ್ಳಿ :
ಶ್ರೀ ಅಂಕೆ ಗೌಡ ಜ್ಞಾನ ಪ್ರತಿಷ್ಠಾನ [ರಿ]
ಹರಳ ಹಳ್ಳಿ
ಪಾಂಡವಪುರ ತಾಲೂಕ್
ಮಂಡ್ಯ ಜಿಲ್ಲೆ.571434
ಮೊಬೈಲ್ ನಂಬರ್ ;9242844934 ,9242844206

Tuesday, June 19, 2012

ರಾಗಿ ಮುದ್ದೆ ತಿನ್ನುವಂತದಲ್ಲ!


ಈ ದಿನ ಮನೆಗೆ ನಮ್ಮ ಮನೆಯವರ ಸೋದರ ಮಾವ ಬಂದಿದ್ದಾರೆ. ಮೈಸೂರು ಜಿಲ್ಲೆಯ, ಹುಣಸೂರಿನ ಬಳಿ ಒಂದು ಪುಟ್ಟ ಹಳ್ಳಿ ಅವರದು. ಪ್ರತಿ ವರ್ಷ ಅವರೇ ಬಿತ್ತಿ ಬೆಳೆಯುವ ಅಕ್ಕಿಯ ಮೂಟೆಯೊಂದನ್ನು ಮನೆಗೆ ತಂದು ಕೊಡುವ ಪದ್ಧತಿ ಅವರದು. ರೈತ ಬಂಧು - ನಮ್ಮ ಮನೆಯ ಅನ್ನದಾತ! ಇವರು ಬಂದಾಗಲೆಲ್ಲ ನನಗೊಂದು ಪುಟ್ಟ ಸಮಸ್ಯೆ! ಹಾಗೆ ನೋಡಿದರೆ ಅದು ದೊಡ್ಡ ಸಮಸ್ಯೆಯು ಹೌದು. ಇವರು ರಾಗಿ ಮುದ್ದೆ ಇಲ್ಲದೆ ಊಟ ಮಾಡುವ ಆಸಾಮಿ ಅಲ್ಲ. ಹಾಗೊಮ್ಮೆ-ಹೀಗೊಮ್ಮೆ ರಾಗಿ ಮುದ್ದೆಯನ್ನು ತಿನ್ನುತಿದ್ದ ನಾನು, ಅದು ತಿನ್ನುವಂತದಲ್ಲ, ನುಂಗುವಂತದ್ದು ಎನ್ನುವ ಸಂಗತಿ ಅರಿತು - ನುಂಗುವುದನ್ನು ಕಲೆಯಲು ಸುಮಾರು ವರ್ಷಗಳೇ ಹಿಡಿದವು. ಹೀಗಿರುವಾಗ, ಮನೆಯಲ್ಲಿ ರಾಗಿ ಮುದ್ದೆ ಅಷ್ಟು ಸುಲಭವಾಗಿ ಮಾಡುವುದೆಲ್ಲಿಂದ ಬರಬೇಕು? ಮನೆಯವರಿಗೆ ಇಷ್ಟವಾದರು ಮಾಡಲಿಕ್ಕೆ ಬರದೆ ಒದ್ದಾಡಿದ್ದುಂಟು. ಈ ಸಧ್ಯಕ್ಕೆ ನಮ್ಮ ಅನ್ನದಾತನಿಗೆ ರಾಗಿ ಮುದ್ದೆ ಊಟಕ್ಕೆ ಬಡಿಸಲು ಪಕ್ಕದ ಮನೆಯ ಸುನಿತರನ್ನು ಮಾಡಿಕೊಡುವಂತೆ ಕೇಳಿಕೊಳ್ಳಬೇಕು, ಅವರು ತಮ್ಮ ಕೆಲಸ ಕಾರ್ಯಗಳನೆಲ್ಲ ಬಿಟ್ಟು ನಮ್ಮ ಮನೆಗೆ ಬಂದು ಮುದ್ದೆ ಮಾಡಿಕೊಡಬೇಕು, ಅದನ್ನು ನೋಡಿ ನಮ್ಮ ಅನ್ನದಾತ, "ಇನ್ನು ಮುದ್ದೆ ಕಟ್ಲಿಕ್ಕೆ ಬರಕಿಲ್ವೇನವ್ವ" ಅಂತ ಡೈಲಾಗ್ ಹೊಡಿಬೇಕು, ಇದನ್ನ ಕೇಳಿಸಿಕೊಂಡ ನಮ್ಮ ರಾಯರು ನನ್ನ ಕಸಿವಿಸಿ ಗಮನಿಸಿ ಕಣ್ ಹೊಡೆದು ಹೋಗಬೇಕು, ಸಂಜೆ ಇದರ ಬಗ್ಗೆ ಮನೆಯಲ್ಲಿ ಒಂದು ಸಣ್ಣ ಚರ್ಚೆಯಾಗಬೇಕು....

ಮಾಡಲು ಬಾರದ ರಾಗಿಮುದ್ದೆ!
ನನ್ನವರಿಗಿಷ್ಟ ರಾಗಿಮುದ್ದೆ,
ಬಾರದು ನನಗೆ ಕಷ್ಟವೋ ಅಡುಗೆ!

ಅಮ್ಮನ ಕೇಳಿದೆ ಮಾಡುವ ರೀತಿ,
ಆದರು ಆಯಿತು ಎಲ್ಲ ಪಜೀತಿ!
ನಲ್ಲನ ಟೀಕೆ ಎಲ್ಲರ ಮುಂದೆ,
ನನಗೋ ಹಿಂಸೆ ನಾಚಿಕೆ ಒಳಗೆ!

ಆದರು ಬಿಡದೆ ಕಲಿಯಲು ಹೊರಟೆ
ಮಾಡುವುದ್ಹೆಂಗೆ? ಕಲೆಸುವುದೆಂಗೆ?
ವಿಧವಿಧವಾದ ಮುದ್ದೆಯ ಶೋಧನೆ,
ತಂದಿತು ನನ್ನಲಿ ಸಂಕಟ ರೋದನೆ!

ನೀರಿನ ಮುದ್ದೆ, ಗಟ್ಟಿಯ ಮುದ್ದೆ,
ಬೇಯದ ಮುದ್ದೆ, ಗಂಟಿನ ಮುದ್ದೆ!
ಹೇಗೆ ಮಾಡಿದರು ಕೆಟ್ಟಿತು ಮುದ್ದೆ,
ಕಾಡಿತು ನನ್ನ ಬಾರದೆ ನಿದ್ದೆ!

ತುಂಬಿದ ಕಂಗಳು ಹರಸಿತು ಗಂಗೆ,
ನಲ್ಲನ ತೋಳಲಿ ಅತ್ತಿದ್ದು ಹಿಂಗೆ!
ಹಣೆಗಿಟ್ಟ ಮುತ್ತಿನ ಸಾಂತ್ವನ
ಮನಸಿಗೆ ನೀಡಿತು ಪ್ರೀತಿಯ ಸಿಂಚನ

ಮುದ್ದಿನ ನಲ್ಲನ ಮುದ್ದೆಯ ಪ್ರೀತಿ
ಮಾಡಲು ಕಲಿಸಿತೆ ನನಗೊಂದು ದಿನ!

- ಬಾಳೊಂದು ಭಾವಗೀತೆ -

ಅದು ಹಾಗಿರಲಿ, ಹಾಗೇ ಇರಲಿ ಅಂದುಕೊಳ್ಳುವಾಗ ಬರೆದ ಈ ಕವನ 3Kಯಲ್ಲಿ ಪೋಸ್ಟ್ ಮಾಡಿದೆ: [ಇದನ್ನು ಕವನ ಎಂದು ಕರೆಯಲು ಈಗ ವಿಪರೀತ ಸಂಕಟ]. ಕವನಕ್ಕೆ ಬಂದ ಅಭಿಪ್ರಾಯ ಅನಿಸಿಕೆಗಳು ಪ್ರೇರಣಾತ್ಮಕ! ಪ್ರತಿ ಬಾರಿ ಕವನ ಬರೆದು ಸಮುದಾಯದಲ್ಲಿ ಪೋಸ್ಟ್ ಮಾಡುವಾಗ ಏನೋ ಒಂದು ತಳಮಳ. ಪರೀಕ್ಷೆಯಲ್ಲಿ ಬರೆದ ವಿಧ್ಯಾರ್ಥಿಯ ಮನಸು, ಪಲಿತಾಂಶಕ್ಕಾಗಿ ಕಾಯುವ ತವಕ. ಒಂದೆರಡು ಅನಿಸಿಕೆಗಳು ಬಂದರು ಸಹ, ಒಂದು ಸಾರ್ಥಕತೆಯ ಉಲ್ಲಾಸ. ಈ ಉಲ್ಲಾಸ ಎಷ್ಟೊಂದು ವಿಶಿಷ್ಟವಾಗಿದೆ, ಈ ಉಲ್ಲಾಸಕ್ಕೆ ಎಷ್ಟೊಂದು ಶಕ್ತಿ ಇದೆ.

ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

ನಾ ಕಂಡಂತೆ ಸಮುದಾಯದಲ್ಲಿ ಹೆಚ್ಚಿನ ಸಧಸ್ಯತ್ವಕ್ಕೆ ಅರ್ಜಿಗಳು ಬರತೊಡಗಿವೆ. ಇಲ್ಲಿ ಕವನಗಳಿಗೆ ಪ್ರೇರಣೆಯೇ ಪುಷ್ಟಿ ನೀಡುವ ಅಮೃತಬಿಂಧು ಆಗಿದೆ. ಪ್ರೇರಣೆ ಅಂದರೆ ಹೀಗೇನಾ? ಕಾಲಿ ಬಾಟಲಿನಲ್ಲಿ ಗಾಳಿಯು ಸಹ ಪೂರ್ತಿ ತುಂಬಿದೆ ಎಂದು ತೋರುವ ರೀತಿನ? ಜಾರಿ ಬಿದ್ದವನಿಗೆ ಕೈಕೊಟ್ಟು ಎಳೆದೆಬ್ಬಿಸುವ ಹಸ್ತಾನ? ಬತ್ತಿ ಹೋದ ಜೀವಕ್ಕೆ ಒಂದು ಮುಗುಳುನಗೆಯ ಕಾಣಿಕೆನಾ? ಒಂದು "ಭಲೇ" ಎನ್ನುವ ಪದ ನೂರು ಜೀವಕಣಗಳಿಗೆ ಉತ್ತೆಜನನಾ? ಈ ಕಣಗಳು ಕ್ರಿಯಾತ್ಮಕತೆಯ ಸಾಗರವಾಗುವುದು ಸರೀನಾ? ಮುಖ ಪರಿಚಯವೇ ಇಲ್ಲದ ಅಪರಿಚಿತರು

ಮೆಚ್ಚುಗೆಯಾಡಿದಾಗ ಅಣು-ಅಣುವು ಪುಟಿಯುವುದು ನ್ಯಾಯಾನ? ಒಂದೇ ಆಕಾಶದ ಕೆಳಗೆ - ಒಬ್ಬನೇ ಚಂದ್ರನನ್ನ ಹಂಚಿಕೊಂಡ ಬೇರೆ ಬೇರೆ ಊರು ಕೇರಿಯ ಧೀಮಂತರ ನಡುವೆ, ಅರಳುತ್ತಿರುವ ನವ-ಬಾಂಧವ್ಯದಲ್ಲಿ ದೇವರಿದ್ದಾನೆ ನಿಜಾನ?

3K ಸಮುದಾಯದ ಮೊದಲ ಹೆಜ್ಜೆ

ಸಮುದಾಯದಲ್ಲಿ ಮೂಡಿ ಬಂದ ಕವನಗಳನ್ನು ವಿಶ್ಲೇಷಿಸುತ್ತ - ಅನುವಾದಗಳ ನಡುವೆ ನನ್ನನ್ನು "ಅಕ್ಕ" ಎಂದು ಕರೆದು ನಾಮಕರಣ ಮಾಡಿದ್ದ ಕ್ವಿಕಿ ಅರುಣ್! ಇದರ ಜೊತೆಗೆ ನನಗೊಂದು ಮೇಲ್ ಸಹ! "ಅಕ್ಕ, ನಿಮ್ಮ ಅನುಮತಿಯಿದ್ದರೆ ನನ್ನನ್ನು ಈ ಸಮುದಾಯಕ್ಕೆ ಮಾಡರೇಟಾರ್ ಆಗಿ ಮಾಡಿ", ಎಂದು. ಇವನು ನನ್ನನ್ನು ಅಕ್ಕ ಎಂದು ಕರೆದ ರೀತಿಗೆ ಅರ್ಧ ಸೋತು (ಸತ್ತು) ಹೋಗಿದ್ದೆ! ಇವನ ಪತ್ರ ಓದಿ ಕುಣಿಯುವಂತಾದರು, ಸುಧಾರಿಸಿಕೊಂಡೆ, ಸಾವರಿಸಿಕೊ೦ಡೆ, ಆಸಕ್ತಿಗೆ ಕೃತಜ್ಞಳಾಗಿ, "ಆದಷ್ಟು ಬೇಗ ತಿಳಿಸುತ್ತೇನೆ" ಎಂದು ಉತ್ತರಿಸಿದೆ. ಇವನು ನನ್ನನ್ನು "ಅಕ್ಕ" ಎಂದು ಏಕೆ ಕರೆದ? ಹೇಗೆ ಕರೆದ? ನನ್ನ ವಯಸ್ಸು ತಿಳಿಯಲು ಸಮುದಾಯದಲ್ಲಿ ನನ್ನ ಭಾವಚಿತ್ರವಂತು ಇನ್ನು ಪ್ರಕಟಿಸಿಲ್ಲ. ಕವನಗಳ ನಡುವಿನ ಮಾತು ಕತೆಯ ಹೊರತು ಇನ್ನ್ಯಾವ ಪರಿಚಯವೂ ಇರಲಿಲ್ಲ, ಬಹುಶ ನನ್ನ ನಡುವಳಿಕೆ ತುಂಬಾ ದೊಡ್ದವಳಹಾಗೆ ಅನಿಸಿಹೊಗಿದೆಯೇ? ಅದೇನೇ ಇರಲಿ, ಅವನಿಟ್ಟ ಹೆಸರು / ಪದ ನನ್ನ ಜೀವಕ್ಕೆ ಅತ್ಯಂತ ಸನಿಹ. ಇದರ ಹಿಂದೆ ನನ್ನ ಅನ೦ತಾನಂತ ನೆನಪುಗಳೇ ಅಡಗಿವೆ.
ಸಮುದಾಯ ಹೀಗೆ ರೂಪುಗೊಳ್ಳುತಿರುವುದು ಸರಿ, ಅದರ ಪರಿಣಾಮಗಳನ್ನು ವಿಂಗಡಿಸುವಂತೆ ಮನಸು ಹೇಳುತಿದೆ. ಮುಂದೇನಾಗುವುದೋ ಎಂದು ಕಾದು ನೋಡುವ ಪ್ರೇಕ್ಷಕರ ವರ್ಗಕ್ಕೆ ನಾನು ಸಹ ಸೇರಿಹೋದೆ. 3K ಸಮುದಾಯದ ಬುನಾದಿಗೆ ಕ್ವಿಕಿಯ ಈ ಮೇಲ್ ಮೊದಲ ಹೆಜ್ಜೆಯೇನೋ?

ಹ...ಹ...ಹ...ಹರಟೆ

ಹರಟೆ ಹೊಡೆಯುವ ಕಾಯಕ ಯಾರಿಗೆ ತಾನೇ ಇಷ್ಟವಾಗದು. ಇದನ್ನು ಎಲ್ಲರಿಗಿಂತ ಚೆನ್ನಾಗಿ ಅರಿತ ನಮ್ಮ ಸಧಸ್ಯ ಹ..ಹ..ಹ..ಹರಟೆ ಎಂದನೇ? ಕ..ಕ..ಕ..ಕಟ್ಟೆ ಎಂದನೇ? ಕವನಗಳ ಸಮುದಾಯದಲ್ಲಿ ಈ ಕಟ್ಟೆಗೇನು ಕೆಲಸ? ಏನ್ ಕೆಲಸ? ನೀವೇ ಹೇಳಿ ಏನ್ ಕೆಲಸ ಅಂತ :-)

Thursday, March 15, 2012

ಇದೆಂಥ ಹೃದಯ


ಹಿಂದಿಂದೆ ಸುತ್ತುವ ಕಾಯಕ
ಮತ್ತದೇ ಬಡಾಯಿ ನಾಯಕ
ಹೊಸಕಿ ಹೋದ ಹೃದಯ
ಆಹಾ! ಮೊಣಚಾದ ಗಾಯ...

ಕಣ್ಣೊರೆಸಿ ಪುಸಲಾಯಿಸಿ
ಹೇಳಿತೀರಲು ಸಮಜಾಯಿಷಿ
ಗೆಲುವೊಂದು ಬಂದಂತೆ
ಹೃದಯವಿದು ನಟ-ನಟಿಸಿ

ಮತ್ತವನೆ ಬಂದನೇ
ಕಣ್ಣೆದುರು ಮನದೆದುರು
ಶುರುವಿಟ್ಟು ಸಂಭ್ರಮ
ಬದಿಗಿಟ್ಟು ಗಾಬರಿ

ಅದೇ ಅದು ಹೃದಯ
ನಡೆಸುತಿದೆ ತಯ್ಯಾರಿ
ಹಿ೦ದಿ೦ದೆ ಸುತ್ತಲು
ಮಗದೊಮ್ಮೆ ಸಾಯಲು

ಒಲ್ಲದವನು ಬಲ್ಲನವನು
ಸೋಲುವಾಸೆ ಯಾಕಿನ್ನು?
ಹಾಳು ಜಾಡಿನಲ್ಲಿ ಹೃದಯ
ಸಿಲುಕಿ ಕೊರಗಿ ಮತ್ತೆ ಗಾಯ!!

Friday, March 9, 2012



ಮಗಳಿಗೆ ಜಡೆ ಹೆಣೆಯಬೇಕಿದೆ

ಈ ಕಂಪನಿಯ ಇಂಟರ್ವ್ಯೂಗೆ ಬಂದಾಗ ಅದರ ಮ್ಯಾನೇಜಿಂಗ್ ಡೈರೆಕ್ಟರ್ ಕೇಳಿದ್ದ ಹಲವಾರು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಹೀಗಿತ್ತು- "ಐದು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿದ್ದು ಈಗ ಬದಲಾಯಿಸಬೇಕೆಂದು ನಿಮಗನಿಸಿದ್ದು ಏಕೆ?". ಆಲೋಚಿಸಿ ಸೂಕ್ತ ಕೆಲವು ಉತ್ತರ ಕೊಟ್ಟಿದ್ದೆ. ಜೊತೆಗೆ ನನಗರಿವಿಲ್ಲದಂತೆ, "ಸರ್, ಐದು ವರ್ಷಗಳಲ್ಲ, ನನ್ನ ಹಳೆಯ ಎರಡು ಕಂಪನಿಗಳೂ ಸೇರಿ ಸುಮಾರು ಹತ್ತು ವರ್ಷಗಳ ಕಾಲ ವಿಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುತ್ತಿದ್ದೇನೆ. ಬೆಳಗ್ಗೆ ಆರು ಗಂಟೆಗೆ ಮನೆಯಿಂದ ಹೊರಟರೆ ಮತ್ತೆ ಮನೆ ಸೇರುವುದು ಸಂಜೆ ಆರೂವರೆಗೆ. ನನ್ನ ಅವಸವಸರದ ಬದುಕಿನ ನಡುವೆ ನನ್ನ ಏಳು ವರ್ಷದ ಮಗಳಿಗೆ ಗಿಡ್ದವಾಗಿ ಕೂದಲನ್ನ ಕತ್ತರಿಸಿ ಬಾಬ್ ಕಟ್ ಮಾಡಿಸಿದ್ದೇನೆ. ಅವಳಿಗೆ ಎಲ್ಲರಂತೆ ಜಡೆ ಹಾಕಿಕೊಂಡು ಶಾಲೆಗೆ ಹೋಗುವ ಆಸೆ. ನಿಮ್ಮ ಕಂಪನಿ ಕೆಲಸದ ವೇಳೆ ೯.೩೦ಕ್ಕೆ. ಮಗಳಿಗೆ ಜಡೆ ಹಾಕಿ ಶಾಲೆಗೆ ಕಳಿಸಿ ನಂತರ ಆಫೀಸಿಗೆ ಬರಬಹುದೆಂಬ ಒಂದು ಸಣ್ಣ ಆಸೆ ನನಗೂ ಇದೆ" ಎಂದಿದ್ದೆ.

ನನ್ನೂರು - ನನ್ನಮ್ಮನ ಒಡಲಲ್ಲೇ ಇರುವಂತೆ!
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದರೂ, ಕೆಲಸಕ್ಕೆ ಹತ್ತಿರವಾಗುವಂತೆ ಮನೆಯನ್ನು ಬದಲಾಯಿಸಲು ಸ್ನೇಹಿತರೆಲ್ಲ ಸೂಚಿಸಿದ್ದರೂ ಅದರ ಬಗ್ಗೆ ಕಿಂಚಿತ್ತು ಯೋಚಿಸಲಿಲ್ಲ. ಯಾಕೆಂದರೆ - ವಿಜಯನಗರ ಅಚ್ಚು ಮೆಚ್ಚು. ಬೆಂಗಳೂರಿನ ನೇಟಿವಿಟಿ ಅಲ್ಪ ಸ್ವಲ್ಪ ಜೀವಂತವಾಗಿದೆಯೆಂದರೆ ಮಲ್ಲೇಶ್ವರಂ, ರಾಜಾಜಿನಗರ, ಬಸವನಗುಡಿ, ವಿಜಯನಗರದ ಆಸುಪಾಸಿನಲ್ಲೇ ಅಂತ ನನ್ನ ಭಾವನೆ. ಇಲ್ಲಿನ ನೆರೆಹೊರೆ, ಗುಡಿಗೋಪುರ, ಆಡುಭಾಷೆ, ಅಂಗಡಿಗಳು, ರಂಗೋಲಿ ಬಿಡಿಸಿದ ರಸ್ತೆಗಳು, ಮನೆಯಂಗಳದಿ ತುಳಸಿ, ಹರಿಶಿನ ಕುಂಕುಮದ ಒಸ್ತಿಲು, ಹಬ್ಬ-ಹರಿದಿನಗಳ ವಾತಾವರಣ, ಚೌಕಾಸಿ ವ್ಯಾಪಾರ, ರಸ್ತೆಬದಿಯ ತರಕಾರಿ, ಹೂವು, ಬಜ್ಜಿ ಬೋಂಡ, ಊರದೇವತೆ ಅಣ್ಣಮ್ಮನ ಮೆರವಣಿಗೆ, ಹರಿಶಿನ ಕೆನ್ನೆಯ ಹಿರಿ ಮುತ್ತೈದೆಯರು, ರಾಜ್ಯೋತ್ಸವದಂದು ನಡೆವ ಆರ್ಕೆಷ್ಟ್ರಾಗಳು, ರಾಮನವಮಿಯ ಮಜ್ಜಿಗೆ ಪಾನಕ ಕೋಸಂಬರಿ, ಬೀದಿಯಲ್ಲಿ ಆಡುವ ಮಕ್ಕಳ ಗೋಲಿ - ಲಗೋರಿ....ಹೀಗೆ ನನ್ನೂರು ನನಗಿಷ್ಟ! ಇವೆಲ್ಲವನ್ನೂ ಬಿಟ್ಟು ಹೋಗುವ ಮನಸ್ಸೆಂದು ಆಗಲಿಲ್ಲ.

ಈಗ ಕೆಲಸಕ್ಕೆ ಸೇರಿ ಒಂದೂವರೆ ತಿಂಗಳು. ಬ್ರಿಗೆಡ್ ರೋಡಿನ ಬಳಿ ಇರುವ ಈ ಆಫೀಸ್ - ಅಯೋಮಯ ಬದುಕು ಇಲ್ಲಿ. ನಮ್ಮೂರಲ್ಲೇ ಇದ್ದು ನಮ್ಮೂರಲ್ಲಿಲ್ಲದಂತ ವಾತಾವರಣ. ಯಾಕೋ ನಾನು ಸಹ ಇವರ ಹಾಗೆ ಆಗಿಬಿಟ್ಟರೆ ಎಂಬ ಸಣ್ಣ ಭಯ. ರಜನಿ-ವನಜ-ಸೋಮೇಶ್ವರರ ಮಧ್ಯೆ ಸಧ್ಯಕ್ಕೆ ಜೀವನ. ಈ ಕೆಲಸ ಹೊಸತಲ್ಲ - ಅದು ತ೦ತಾನೇ ವೇಗವಾಗಿ ನಡೆಯುತ್ತಿದೆ. ಆಫೀಸಿನವರಿಂದ ಮೆಚ್ಚುಗೆ ಗಳಿಸಲು ಹೆಚ್ಚು ಕಾಲ ಹಿಡಿಯಲಿಲ್ಲ. ಮನುಜ ಅಲ್ಪ, ಬದುಕ್ಕಿದ್ದವರೆಗೂ ಕಲಿಕೆಯಲ್ಲೇ ಜೀವನ, ಹೇಳಿದರೂ ಕೇಳದಿದ್ದರೂ ಮಣ್ಣಾಗುವವರೆಗೆ ಜೀವನವಂತೂ ಪಾಠ ಕಲಿಸುತ್ತಲೇ ಇರುತ್ತದೆ. ಸದಾ ಕಾಲ ಏನನ್ನಾದರೂ ಕಲಿಯುತ್ತಲೇ ಇರಬೇಕೆಂಬ ಸ್ವಭಾವದವಳು. ಸಂಬಳವೇ ಸರ್ವಸ್ವವಲ್ಲ. ಈ ಕೆಲಸ - ಈ ಕಂಪನಿ ಒಂದು ರೀತಿಯ ಶೂನ್ಯತೆಯ ಭಾವ ತಂದಿದೆ. ಕೆಲಸದಲ್ಲಿ ನನಗಿರುವ ಅನುಭವಗಳೆಲ್ಲ ಮೂಲೆ ಗು೦ಪಾದ೦ತಾಗಿದೆ! ಮಗಳಿಗೆ ಬಾಬ್ ಕಟ್ ಮಾಡಿಸದೆ - ಜಡೆ ಹಾಕಿ ಶಾಲೆಗೆ ಕಳಿಸುವ ತೃಪ್ತಿ ಮಾತ್ರ! ಕೆಲಸದ ಅನಿವಾರ್ಯತೆ, ಮಮತೆಯ ಒಡಲು - ನಡುವಣ ಸಂದಿಗ್ಧ! ನನ್ನಂತೆ ತನ್ನೊಳಗೆ ತಾನನುಭವಿಸುವ ಅಮ್ಮಂದಿರಿಗೆ ಕಾಣುವುದು ಕಾಣದ ನನ್ನಳಲು. ಇಂತಹ ಅನಿಸಿಕೆಗಳೆಷ್ಟೋ, ಅದು ಹಾಗಿರಲಿ ಬಿಡಿ. ಪರಲೋಕದಂತಿರುವ ಈ ಕಂಪನಿಯಲ್ಲಿ ನನ್ನದೇ ಆದ ಒಂದು ಪುಟ್ಟಲೋಕ ರೂಪುಗೊಳ್ಳುತಿದೆ.

ಜೀವವಿಲ್ಲದ ವನ - ಬರಡು ಭೂಮಿಯ ಮನ
ಇವೆರಡರ ನಡುವೆ - ಸಾಗಿಹುದು ಜೀವನ!

ಕತ್ತಲುಕವಿದ ನೋಟ - ಆಡಲು ಬಾರದ ಆಟ
ಇವೆರಡರ ನಡುವೆ - ಜೀವನದ ಪರದಾಟ!

ಕೈಗೆಟುಕದ ಆಕಾಶ - ಅರ್ಥವಾಗದ ಶಬ್ಧಕೋಶ
ಇವೆರಡರ ನಡುವೆ - ಮನಸಲೆಲ್ಲೋ ಆಶ!

ಆ ಘಳಿಗೆಯಲ್ಲಿ - ಈ ಸಾಲುಗಳು ನನ್ನ ಡೈರಿ ಸೇರಿತು. ಇದೂ ಸಹ ಕವನವೇನೋ ಎಂಬ ನನ್ನ ಬ್ರಾಂತಿ!

ಸಮುದಾಯವೊಂದು ಆರ್ಕುಟ್ನಲ್ಲಿ
ಕನ್ನಡದಲ್ಲಿ ಮಾತನಾಡುವ ಹಂಬಲ, ಬರೆಯುವ ಆಸೆ, ಭಾಷೆಯ ಮೇಲಿನ ಪ್ರೇಮ - ಇದರ ನಡುವೆ ಈ ಶೂನ್ಯತೆ ಭಾವ. ಇದರ ಪರಿಣಾಮವಾಗಿ ಈಗಾಗಲೇ ಆರ್ಕುಟ್ನಲ್ಲಿ ಸಮುದಾಯದ ಕುರಿತು ತಲೆಯಲ್ಲಿ ವಿಚಿತ್ರ ಪಾಸಿಟಿವ್ ಫೋರ್ಸ್ ಒಂದು ಕಾಡುತಿದೆ. ಅದೊಂದು (ಸು)ದಿನ - ಜುಲೈ ೧೧, ೨೦೦೮ ರಂದು "3k - ಕನ್ನಡ ಕವಿತೆ ಕವನ" ಎಂಬ ನಾಮಕರಣದೊಂದಿಗೆ ಸಮುದಾಯವನ್ನು ಆರ್ಕುಟ್ನಲ್ಲಿ ಹುಟ್ಟುಹಾಕಿದೆ. ಸದಾ ಕಾಲ ಆಂಗ್ಲ ಭಾಷೆಯಲ್ಲೇ ಕಾರ್ಯ ವ್ಯವಹಾರಗಳು ನಡೆಸುವವರ ನಡುವೆ ಕನ್ನಡ ಜೀವಂತವಾಗಿರಬೇಕು - ಕವಿತೆ/ಕವನ ಅಂತ ಹೇಳಿಕೊಂಡು ಏನೋ ಒಂದು ಬರೆಯೋಣ. ಬರೆದು ಓದಿ ಕಲಿಯೋಣ! ಕೆಲಸ ಕಲಾಪಗಳ ನಡುವೆ ನಮ್ಮಲ್ಲಿ ಅಡಗಿ ಕುಂತಿರುವ ಭಾಷಾಭಿಮಾನವನ್ನ ಕವಿತೆ ರೂಪದಲ್ಲಿ ಮತ್ತೊಮ್ಮೆ ಹೊರತರೋಣ. ಅಂದೆಂದೋ ಬರೆದು - ಮೂಲೆಗುಂಪಾದ ಕವನಗಳೆಲ್ಲ ಹೊರಬರಲಿ - ಈ ತಾಣಕ್ಕೆ ಬಂದವರಿಗೆ ಪ್ರಾಮಾಣಿಕ ಹಾಗು ಸುಮಧುರ ಭಾವನೆಯೊಂದು ಹೊಮ್ಮಲಿ.

ಹೀಗೆಲ್ಲ ಅಂದುಕೊಂಡು ಶುರುವಾದ 3k ಸಮುದಾಯದ ಮೊದಲ ಸದಸ್ಯೆ ನಾನಾದೆ, ನನ್ನ ನಂತರ ನನ್ನ ಸ್ನೇಹಿತೆಯರು ರಜನಿ ಹಾಗು ವನಜ ಸದಸ್ಯರಾದರು. ಕನ್ನಡ ಓದಲು ಬರೆಯಲು ಬರದವರು ಈ ಸಮುದಾಯದ ಸದಸ್ಯರುಗಳಲ್ಲಿ ಮೊದಲಿಗರು...!?? ನಾನೇನೆ ಬರೆದರೂ ಅದನ್ನ ಕವಿತೆ ಎಂದು ಪ್ರಶಂಸೆ ನೀಡಿದವರು. "ಗುಡ್, ಸೂಪೆರ್ಬ್, wow" ಅಂತ ಕಾಮೆಂಟ್ ಮಾಡಿ ನನ್ನನ್ನು ಹುರಿದುಂಬಿಸಿದವರು. ನನ್ನ ಆರ್ಕುಟ್ ಸ್ನೇಹಿತರಿಗೆಲ್ಲ ಈ ಸಮುದಾಯಕ್ಕೆ ಸೇರಲು ಔತಣ ಕಳಿಸಿದ್ದೆ. ಸುಮಾರು ಹತ್ತು ಮಂದಿ ಸದ್ಸ್ಯರಾಗುವಷ್ಟರಲ್ಲಿ 3k ಗೆ ಒಂದು ತಿಂಗಳಾಗಿತ್ತು. ನನ್ನ ಕವನ ನಾನೇ ಪೋಸ್ಟ್ ಮಾಡಿ ರಜನಿ ವನಜರಿಗೆ ಓದಿ, ಅರ್ಥ ಹೇಳಿ, ಅದಕ್ಕೆ ಕಾಮೆಂಟ್ ಮಾಡುವಂತೆ ಹೇಳುತಿದ್ದೆ. "ನೀನೇ ಬಂದು ನಮ್ಮ ಕಂಪ್ಯೂಟರ್‌ನಿಂದ ಏನು ಬೇಕೋ ಅದನ್ನ ಕಾಮೆಂಟ್ ಮಾಡಿಬಿಡು" ಅಂತ ತಮಾಷೆ ಮಾಡುತಿದ್ದರು.

ಹತ್ತು ಮಂದಿ ಇದ್ದ ಈ ಸಮುದಾಯ, ಸರಿ ಸುಮಾರು ಮೂರು ವರ್ಷಗಳಲ್ಲಿ ಈ ರೀತಿ ಬೆಳೆದದ್ದಾದರು ಹೇಗೆ?

Wednesday, February 29, 2012




ಸೋಮವಾರದ ನೀಲಿ ಶುಭೋದಯ..... ಮಂಡೇ ಮಾರ್ನಿಂಗ್ ಬ್ಲೂಸ್!

ವೀಕೆಂಡ್ ಮುಗಿಸಿಕೊಂಡು ಬರುವ ಕಾರ್ಪೋರೆಟ್ ಮಂದಿ ತಮ್ಮ ಸೋಮವಾರಗಳಿಗೆ ಚಾಲನೆ ನೀಡಲು ಬಳಸುವ ಪದಸಮುಚ್ಚಯ ಇದು. ನೀಲಿ ಬಣ್ಣದ ಪದಪ್ರಯೋಗ ಏಕಿರಬಹುದು? ಅಮೆರಿಕನ್ನರು ವಿಷಾದಕರ ಗೀತೆಗಳನ್ನ ಉಲ್ಲೇಖಿಸಲು ಬ್ಲೂ ಥೀಮ್ಸ್ ಎಂದು ಬಳಸುವಾಗ, ಸೋಮವಾರದ ಸೋಮಾರಿತನಕ್ಕೆ ಈ ಹೆಸರು ರೂಡಿಸಿಕೊಂಡಿದ್ದಾರೆ! ಬ್ಲೂ - ನೀಲಿ - ವಿಶಾಲವಾದ ಮುಗಿಲಿನ ಮೈಬಣ್ಣ - ವಿಷಾದವೇಕೆ? ಪ್ರತೀ ಸೋಮವಾರ ತಾಜಾತನದ ವಾರವೊಂದು ಆಗಷ್ಟೇಗರಿಗರಿಯ ಉಡುಗೊರೆಯಾಗಿ ನನ್ನ ಮುಂದಿಟ್ಟಂತೆ ನನ್ನ ಭಾವನೆ! ವಾರದ ಕೆಲಸಗಳನ್ನೆಲ್ಲ ಕಣ್ಮುಂದೆ ತಂದುಕೊಂಡು ಅವುಗಳ ಆದ್ಯತೆಗನುಗುಣವಾಗಿ ಪೇರಿಸಿಕೊಳ್ಳುವ ಪ್ರಮುಖವಾರ ಈ ಸೋಮವಾರ.

ಸೋಮೇಶ್ವರ, ದಿ ಚಾಲೆಂಜಿಂಗ್ ಸ್ಟಾರ್!

"ಮೇಡಂ ಕಾಫಿ ಆರ್ ಟೀ?" ಅಂತ ಕೇಳ್ಕೊಂಡು ಬಂದ ಸೋಮೇಶ. ಈ ಸೋಮೇಶನ ಬಗ್ಗೆ ಒಂದೆರಡು ಮಾತು. ನಾನು ಕೆಲಸ ಮಾಡುತಿದ್ದ ಕಂಪನಿಯ ಆಫೀಸ್ ಬಾಯ್, ಮಹಾನ್ ಮಾತಿನ ಮಲ್ಲ! ಆದರೆ ಅಷ್ಟೇ ಚುರುಕಾಗಿ ಕೆಲಸ ನಿರ್ವಹಿಸುವಾತ. ಹಾಗೋ ಹೀಗೋ ಅಷ್ಟಿಷ್ಟು ಇಂಗ್ಲಿಷ್ - ಹಿಂದಿ ಮಾತನಾಡಿಕೊಂಡು ಕೆಲಸ ನಿಭಾಯಿಸುವ ಚಾಣಾಕ್ಷ. ಇಡೀ ಆಫೀಸಿನಲ್ಲಿ ನನ್ನ ಬಿಟ್ಟರೆ ಕನ್ನಡದಲ್ಲಿ ಮಾತನಾಡ ಬಲ್ಲ ಏಕೈಕ ವ್ಯಕ್ತಿ ಈ ಸೋಮೇಶ. ಇವನೊಟ್ಟಿಗೆ ಕನ್ನಡದಲ್ಲಿ ಮಾತ್ನಾಡೋದೊಂದು ಖುಷಿ. ಸೋಮೇಶನಿಗೊಬ್ಬ ಹೀರೋ! ಅವನ ಬಾಸ್, ಅವನ ಆರಾಧ್ಯದೈವ, ಅವನ ಅಣ್ಣ, ಅವನ ಗುರು.... ಚಾಲೆಂಜಿಂಗ್ ಸ್ಟಾರ್ ದರ್ಶನ್! ಅವನಿಂದಲೇ ನಾನು ತಿಳಿದಿದ್ದು, ದರ್ಶನ್ಗೆ ಈ ಬಿರುದಿದೆ ಎಂದು. ಚಾಲೆಂಜಿಂಗ್ ಸ್ಟಾರ್ ಅಂತ ಯಾಕೆ ಕರೀತಾರೆ ಅಂತ ಕೇಳ್ದಾಗ, "ನಮ್ಮಣ್ಣ ಮೇಡಂ - ಏನ್ ಹೇಳಿದ್ರೂ ಚಾಲೆಂಜ್ ಥರಾನೆ ತಗೊಳ್ತಾರೆ ಅದಕ್ಕೆ" ಅಂತ ಹೇಳಿಕೊಂಡಿದ್ದ. ಚಾಲೆಂಜಿಂಗ್ ಸ್ಟಾರ್ ಅಂದ್ರೆ ಹೀಗ??? ದರ್ಶನ್ ಕುರಿತು ಹೇಳಿಕೊಂಡಾಗೆಲ್ಲ ಅವನ ಮುಖದಲ್ಲೊಂದು ಹೊಳೆಯುವ ಕಾಂತಿ! ದರ್ಶನ್ ಕುರಿತಂತೆ ಎಲ್ಲಾ ವಿಷಯಗಳನ್ನು ಸಂಗ್ರಹಿಸಿದ್ದ, ಯಾವ ದಿನ ಯಾವ ಶೂಟಿಂಗ್ನಲ್ಲಿದ್ದಾರೆ ಅನ್ನುವ ಮಾಹಿತಿ ಸಹ ಅವನಿಗೆ ತಿಳಿಯುತ್ತಿತ್ತು. "ಮೇಡಂ, ನಿಮ್ಹತ್ರನೆ ನಾನು ಕನ್ನಡ ಮಾತಾಡೋದು, ಅದಕ್ಕೆ ನಿಮಗೆ ಸ್ಪೆಷಲ್ ಕಾಫಿ" ಅಂತ ಹೇಳೋದಲ್ಲ್ದೆ, ಆಫೀಸಿನಲ್ಲಿ ಇರುವವರ ಬಳಿಯೆಲ್ಲ "ಕನ್ನಡ ಮೇಡಂ" ಅಂತಲೇ ನನ್ನ ಹೆಸರನ್ನು ಬದಲಾಯಿಸಿಬಿಟ್ಟಿದ್ದ.

ಅದೊಂದು ಸೋಮವಾರ

ಸೋಮವಾರದ ಸಂಜೆ, ಕನ್ನಡದ ಸ್ಪೆಷಲ್ ಕಾಫಿ ನನ್ನ ಟೇಬಲ್ಲಿಗೆ ಬಂತು. ಎಂದಿನಂತೆ ಸೋಮೇಶ ಅವನಣ್ಣನ ಕುರಿತಂತೆ ಹೇಳತೊಡಗಿದ, "ಮೇಡಂ, ನಮ್ಮಣ್ಣ ದರ್ಶನ್ ಇವತ್ತು ಮಧ್ಯಾನ್ಹ ಎಡವಿದ್ರಂತೆ! ಬಲಗಾಲಿನ ಕಿರುಬೆರಳಿಗೆ ತಗುಲಿ ರಕ್ತ ಬಂತಂತೆ! ನಾಳೆ ಇದೆ ವಿಷಯ ಪೇಪರ್ನಲ್ಲಿ ಬರೋದು, ಅವ್ರ ಮನೆ ಹತ್ರ ಹೋಗಿ ಹೇಗಿದ್ದಾರಂತ ವಿಚಾರಿಸಿಕೊಂಡು ಬರಬೇಕು, ಅವರ ಮನೆ ಸೆಕ್ಯೂರಿಟಿ ನನಗೆ ಚೆನ್ನಾಗಿ ಪರಿಚಯ ಇದ್ದಾರೆ, ಹೋದ್ರೆ ಸಾಕು ಎಲ್ಲ ವಿಷಯ ಅವ್ರೆ ಹೇಳ್ಬಿಡ್ತಾರೆ, ನಮ್ಮಣ್ಣನಿಗೆ ಏನಾಗದಿದ್ರೆ ಸಾಕು", ವಿಪರೀತ ವಿಷಾದದಿಂದ ಹೇಳಿದ. "ಸೋಮ, ನಿಮ್ಮ ದರ್ಶನ್ ಅವರ ಗಾಯ ವಾಸಿಮಾಡ್ಕೊಳ್ತಾರೆ ಬಿಡು. ಎರಡು ತಿಂಗಳಾಯ್ತು ಮನೆಗೆ ಹೋಗಿ ಅಂತಿದ್ಯಲ್ಲ, ನಿಮ್ಮ ತಂದೆಗೆ ಹುಷಾರಿಲ್ಲ ಅಂತಿದ್ಯಲ್ಲ, ಫೋನ್ ಮಾಡಿ ವಿಚಾರ್ಸಿದ್ಯ? ಹೇಗಿದ್ದಾರೆ ಈಗ? " ಅಂತ ಕೇಳಿದ್ದೆ. "ಬಂದೆ ಮೇಡಂ" ಅಂತ ಹೇಳಿ, ಅಲ್ಲಿಂದ ಹೊರಟೆ ಬಿಟ್ಟ. ನನ್ನ ಮಾತು ಕಟುವಾಯ್ತೇನೋ? ನಯವಾಗೆ ಹೇಳಿದ್ನಲ್ಲ. ಅಷ್ಟಕ್ಕೂ ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಅನಾರೋಗ್ಯದಿಂದ ಹಾಸಿಗೆ ಹಿಡಿದ ಅವನ ತಂದೆ, ಮನೆಯೊಳಗೇ - ಹೊರಗೆ ದುಡಿಯುವ ತಾಯಿ! ಜವಾಬ್ದಾರಿ ಕಳೆದುಕೊಳ್ಳಬಾರದು ಹುಡುಗ ಅನ್ನುವ ದೃಷ್ಟಿಯಲ್ಲಿ ಹೀಗಂದೆ, ನನಗೆ ನಾನೇ ಸಮರ್ತಿಸಿಕೊಂಡೆ. ಮಂಗಳವಾರ ಆಫೀಸಿಗೆ ಬರಲಿಲ್ಲ ಸೋಮೇಶ, ಕನ್ನಡದ ಸ್ಪೆಷಲ್ ಕಾಫಿ ಸಹ ಟೇಬಲ್ಲಿಗೆ ಬರಲಿಲ್ಲ! ಕಾಫಿ-ಮೇಕರ್ ಬಳಿ ಹೋಗಿ ನನ್ನ ಕಾಫಿ ನಾನೇ ಮಾಡಿಕೊಂಡು ಬಂದೆ. ಜೊತೆಗೆ, ದರ್ಶನ್ ಕಾಲ್ಬೆರಳು ನೆನೆಸಿಕೊಂಡು ಸಣ್ಣ ನಗೆಯೊಂದು ಬಂತು.

ಬುಧವಾರ ಬೆಳ್ಳಂ ಬೆಳಗ್ಗೆ

ಆಫೀಸಿಗೆ ಕಾಲಿಟ್ಟು ಸೀಟಿನ ಬಳಿ ಹೋಗಿದ್ದೆ ತಡ, ಸೋಮೇಶ ಪ್ರತ್ಯಕ್ಷ. "ಮೇಡಂ, ನಮ್ಮೂರಿಗೊಗಿದ್ದೆ, ನಮ್ಮಪ್ಪ ಅಮ್ಮನ್ನ ನೋಡ್ಕೊಂಡು ಬಂದೆ, ನಮ್ಮಪ್ಪನಿಗೆ ಪರವಾಗಿಲ್ಲ ಈಗ, ಹಣ್ಣು ಔಷದಿ ಕೊಡ್ಸಿ ಸ್ವಲ್ಪ ದುಡ್ಡು ಕೊಟ್ಟು ಬಂದೆ. ನೋಡಿ ಈ ದೇವರ ದಾರ ನಮ್ಮಮ್ಮ ಕಟ್ಟಿದ್ದು ಕೈಗೆ" ಅವನ ಕಯ್ಯಲ್ಲಿದ್ದ ಕಪ್ಪು ದಾರ ತೋರಿಸಿದ. "ಡಾಕ್ಟ್ರು ಹೇಳೋವ್ರೆ - ಒಂದು ಸಣ್ಣ ಆಪರೇಶನ್ ಮಾಡಿದ್ರೆ ಎಲ್ಲಾ ಸರಿ ಹೋಗ್ತದೆ ಅಂತ, ಎಲ್ಲಾ ವಾಸಿ ಆದ್ರೆ ನಮೂರ ಜಾತ್ರೆ ಟೈಮ್ನಲ್ಲಿ ಒಂದು ಕುರಿ ಕೊಡ್ತೀವಿ ಅಂತ ಹರಸಿಕೊಂಡು ಬಂದೆ" ಅಂದ. ಓ - ಇವನಿಗೆ ಪ್ರತಿಕ್ರಿಯೆ ನೀಡೋಕೆ ನನಗೆ ಅರೆಕ್ಷಣ ಬೇಕಾಯ್ತು! "ಸರಿ, ಸರಿ.... ಊರಿಗೋಗಿದ್ಯ, ಒಳ್ಳೆ ಕೆಲಸ ಮಾಡಿ ಬಂದೆ, ನಿಮ್ಮಪ್ಪ ಅಮ್ಮನ ಜೊತೆ ಸಂಪರ್ಕದಲ್ಲಿರು ಸೋಮ, ಮರೆತಂಗಿರಬೇಡ, ಹೆತ್ತವರು, ವಯಸ್ಸಾಗಿದೆ ನಿರ್ಲಕ್ಷೆ ಮಾಡಬಾರದು ಅಲ್ವಾ! ಗುಡ್ ಬಾಯ್ ನೀನು. ಈಗ್ಹೇಳು ನಿಮ್ಮ ದರ್ಶನ್ ಕಾಲುಗಳು ಸುರಕ್ಷಿತವಾಗಿದಾವ?" ಅಂತ ಕೇಳಿದ್ದೆ ತಡ....... ಮತ್ತೆ ಶುರುವಿಟ್ಟ ಸೋಮೇಶ. ಅದೇನೇ ಇರಲಿ, ನಮ್ಮವರು, ನನ್ನೂರು, ನನ್ನ ಜನ, ನನ್ನ ತವರು, ನಾನಿಷ್ಟ ಪಡುವ ನೆಲ ಜಲ ಜೀವ ಜಂತುಗಳು ಸುರಕ್ಷಿತವಾಗಿದ್ದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವ ಗಾಢವಾದ ತೃಪ್ತಿ ತಂತಾನೇ ಮೂಡುತ್ತದೆ. ಈ ತೃಪ್ತಿಗಾಗಿ ಹಂಬಲಿಸುವ ಸ್ವಾರ್ಥಜೀವಿ ಈ ಮನಸು.

ಬಾನಿನ ವಿಹಂಗಮ ....ಹಾರಲು ಸಂಭ್ರಮ

ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ಬಿಳಿ ಬೋರ್ಡ್ ನನ್ನೊಮ್ಮೆ ನೋಡಿ, ಏನೋ ಹೇಳಲು ಹೊರಟು ಹಾಗೆ ಸುಮ್ಮನಾದಂತೆ ಭಾಸವಾಯ್ತು! ಹೋಯ್ ಗುರಾಯಿಸಬೇಡ! ಅಂತ ಅದರಮೇಲೆ ಗೀಚಿದೆ. ಕಯ್ಯಲ್ಲಿ ಕಾಫಿ ಹಿಡಿದು ಕಿಟಕಿಯಿಂದಾಚೆ ಒಮ್ಮೆ ನೋಡಿದೆ, - ನೀಲಿ ಬಾನು : ಪಾರಿವಾಳಗಳ ಗುಂಪು : ಬಿಳಿ ಗುಡ್ದೆಗಳ ಹಾಗೆ ಮೋಡಗಳು : ಹಾಯೆನಿಸಿತು! ನನ್ನ ಡೈರಿ ತೆಗೆದು ಕವನವೊಂದನ್ನ ಬರೆದಿಟ್ಟೆ! ಆ ಸಮಯದಲ್ಲಿ ನನ್ನ ಮಟ್ಟಿಗೆ ನಾನೊಂದು ಕವನ ಬರೆದೆನೆಂಬ ಬ್ರಮೆಯಲ್ಲಿದ್ದೆ. ಈಗದನ್ನು ಪ್ರಸ್ತುತ ಪಡಿಸೋಕೆ ಸ್ವಲ್ಪ ಕಸಿವಿಸಿ, ಆದರು ಹೇಳಿ ಆದಮೇಲೆ ಬರೆದು ತೀರಬೇಕು.

ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!
ಸೂರ್ಯಾಸ್ತದ ತಿಳಿಗೆಂಪು
ಹಕ್ಕಿಗಳ ಗುಂಪು ಗುಂಪು
ಹಸಿರೆಲೆಗಳ ಸೊಂಪು
ಹಾಡುಗಳೆಲ್ಲವೂ ಹಿ೦ಪು ಹಿ೦ಪು
ಬೆಳ್ಮುಗಿಲ ಚಿತ್ತಾರ
ಕೊಲ್ಬಂಡೆಗಳ ಆಕಾರ
ಸವಿ ಮಾತುಗಳ ಝೇಂಕಾರ
ಹೃದಯದಲ್ಲೇನೋ ಸಂಚಾರ
ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!

ಆಗಷ್ಟೇ ಬರೆದಿಟ್ಟುಕೊಂಡ ಕವನವಿದು. ಡೈರಿ-ಯಲ್ಲಿ ಉಳಿಯಿತು. ಇದನ್ನ ಕವನ ಅಂತಾರ? ನೆನಪಾಗಿದ್ದು ನಾನು ೭ನೆ ತರಗತಿಯಲ್ಲಿದ್ದಾಗ ಬರೆದ ನನ್ನ ಮೊದಲನೇ ಕವನ. "ಅಮ್ಮ". ಈ ಕವನ ನಮ್ಮ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪ್ರತಿ ವರ್ಷವೂ ಶಾಲಾ ವಾರ್ಷಿಕೋತ್ಸವ ನಡೆಯುತಿದ್ದದ್ದು ಬೆಂಗಳೂರಿನ ಪ್ರಸಿದ್ದ ಟೌನ್ಹಾಲಿನಲ್ಲಿ. ವಾರ್ಷಿಕ ಪುಸ್ತಕವನ್ನು ಬಿಡುಗಡೆ ಮಾಡಿದ್ದ ಮುಖ್ಯಾತಿಥಿಗಳು ವೇದಿಕೆಯ ಮೇಲೆ, ಎಲ್ಲರ ಮುಂದು ನನ್ನ ಕವನ ಮೆಚ್ಚಿ ಓದಿದ್ದರು. ಆ ದಿನ ನನಗರಿವಿಲ್ಲದ ಒಂದು ಖುಷಿ. ನನ್ನ ಹಳೆಯ Geometry ಪುಸ್ತಕದ ಹಾಳೆಗಳ ಮೇಲೆ ಕವನ ಬರೆಯಲು ಶುರುವಿಟ್ಟೆ. ಆ ಹಾಳೆಗಳನ್ನೆಲ್ಲಾ ಪುಸ್ತಕದಿಂದ ಬಿಡಿಸಿ - ಒಂದು ಗಟ್ಟಿಯಾದ ಫೈಲಿನೊಳಗೆ ಸೇರಿಸಿಟ್ಟೆ. ಇದುವರೆಗೂ ಆ ಫೈಲನ್ನು ಯಾರಿಗೂ ತೋರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಪ್ರೇರಣೆ ಯಾರಿಂದ ಯಾವಾಗ ಹೇಗೆ ದೊರೆವುದೋ! ಅದಕ್ಕೆ ವಿಪರೀತವಾದ ಶಕ್ತಿ ಇದೆ ಅನ್ನೋದು ನನ್ನ ನಂಬಿಕೆ.


ಕನ್ನಡ ಅಂದ್ರೆ ಒಲವು, ಅಭಿಮಾನ! ಮಾತೃಭಾಷೆ ತೆಲುಗು! ಸ್ನೇಹಿತರೆಲ್ಲರೂ ಹಿಂದಿ - ರಾಜಸ್ತಾನಿ - ಗುಜರಾತಿನವರು, ನೆರೆ -ಹೊರೆಯವರು ಅಂದ್ರವಾಲ್ಳು! ನರ್ಸರಿಯಿಂದ ಓದಿದ್ದು ಇಂಗ್ಲಿಷ್ ಮೀಡಿಯಂನಲ್ಲಿ - ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಅಷ್ಟಕ್ಕಷ್ಟೇ! ಆದರೇನಂತೆ ಕನ್ನಡ ಇಷ್ಟಪಡೋಕೆ ಕನ್ನಡವೆ ಮಾತೃಭಾಷೆ ಆಗಬೇಕೆ?.... ನಾನು ಅವರ ಅರ್ಧಾಂಗಿ - ಅವರು ಕನ್ನಡದವರು - ನಾನು ಕನ್ನಡತಿ, ಇಷ್ಟು ಸಾಕೆ?

Wednesday, February 22, 2012

ಕನ್ನಡದೂರಿನ ಕನ್ನಡತಿ ನಾನು.......



೨೦೦೮ ನವೆಂಬರ್ ತಿಂಗಳಲ್ಲಿ,

- ೫ ವರ್ಷಗಳ ಕಾಲ ಯೋಕೊಗಾವ ಇಂಡಿಯಾದಲ್ಲಿ ಕೆಲಸ ಮಾಡಿ ಆಗಷ್ಟೇ ಆಸಿಪೆಕ್ ಅನ್ನುವ ಕಂಪನಿ ಒಂದರ ಚೇರ್ಮನ್ನಿಗೆ ಅಸಿಸ್ಟೆಂಟ್‌ಆಗಿ ಸೇರಿದ್ದೆ.
ಅದುವರೆಗೂ ಆರ್ಕುಟ್ನ ಪರಿಚಯ ನನಗಿರಲಿಲ್ಲ. ನಿಜ ಹೇಳಬೇಕಂದ್ರೆ ಆರ್ಕುಟ್ ಅನ್ನುವ ಪದ ಕೇಳಿಯೇ ಇರಲಿಲ್ಲ. ಕಾರಣ ಇಷ್ಟೇ, - ಯಾವುದೇ ಸಾಮಾಜಿಕ ಅಂತರ್ಜಾಲಗಳ ಬಳಕೆ ಯೋಕೊಗಾವದ ಕೆಲಸಗಾರರಿಗೆ ಲಭ್ಯವಿರಲಿಲ್ಲ. ಆಸಿಪೆಕ್‌ಗೆ ಸೇರಿದ ಮೊದಲೆರಡು ದಿನಗಳಲ್ಲಿ ನನಗೆ ಆತ್ಮೀಯತೆ ತೋರಿದವರು ವನಜ ಹಾಗೂ ರಜನಿ. ಮೂಲತಃ ಕೇರಳದವರು! ಬೆಂಗಳೂರಿನ ವಾಸ ಇವರಿಗೆ ಅಷ್ಟಿಷ್ಟು ಕನ್ನಡ ಮಾತನಾಡೋದನ್ನ ಕಲಿಸಿಯೇ ಇತ್ತು.

ಉತ್ತರ-ಭಾರತೀಯರು, ಆಂಗ್ಲೋ-ಭಾರತೀಯರು ಹಾಗು ತಮ್ಮ ಇಂಟರ್ನ್-ಶಿಪ್ ಮಾಡಲು ಬಂದ ಹೊರ ದೇಶದವರೇ ಕೂಡಿದ್ದ ಆ ಸಂಸ್ಥೆಯಲ್ಲಿ ನನ್ನವರಂತೆ ನನಗೆ ಕಂಡಿದ್ದು ರಜನಿ ಹಾಗು ವನಜ.

೫ ವರ್ಷಗಳು ಅಂದರೆ - ಸುಮಾರು ೧೮೦೦ಕ್ಕೂ ಹೆಚ್ಚು ದಿನಗಳ ಕಾಲ ಯೋಕೊಗಾವದಲ್ಲಿ ಕೆಲಸ ಮಾಡಿದ್ದೆ! ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಆ ಸಂಸ್ಥೆಯಲ್ಲಿ - ಅನೇಕ ಸ್ನೇಹಿತರು! ನನ್ನ ಸ್ನೇಹಿತರನ್ನ ಅಗಲಿದ ನೋವು ಇನ್ನು ಹಸಿಯಾಗೆ ಇದ್ದ ದಿನಗಳವು! ಮುಖ ಮನದ ಕನ್ನಡಿ ಎನ್ನುವ ಹಾಗೆ -ನನ್ನ ಮುಖದಲ್ಲಿ ಆ ಅಗಲಿಕೆಯ ಛಾಯೆ ಆಗಾಗ ಎದ್ದು ಕಾಣುತಿತ್ತು. ಇದನ್ನ ಗಮನಿಸಿದ ರಜನಿ, ಆರ್ಕುಟ್ ಅನ್ನುವ ಅಂತರ್ಜಾಲದ ನೆಲೆಯೊಂದನ್ನು ಪರಿಚಯಿಸಿದಳು. ನನಗಾಗಿ ಆರ್ಕುಟ್ನಲ್ಲಿ ಒಂದು ಖಾತೆ ಸಹ ತೆರೆದು ಕೊಟ್ಟಳು! ರಜನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ - ಕಳೆದ ಉಳಿದ ಸ್ನೇಹಿತರನ್ನೆಲ್ಲ ಗುಡ್ಡೆ ಹಾಕಿಕೊಂಡೆ. ಅಬ್ಬ! ಸ್ನೇಹಕ್ಕೆ ಸ್ನೇಹವೇ ಸಾಟಿ! ಮರುಕಳಿಸಿತು ನನ್ನಲ್ಲಿ ಕುಗ್ಗಿದ್ದ ಉತ್ಸಾಹ ಹಾಗು ಹುರುಪು.

ಆರ್ಕುಟ್ ಏನಿದು?:
ಹೀಗೆ ಆರ್ಕುಟ್‌ನ ಒಳಗೆ ಧುಮುಕಿ ಇದರ ಸರಿ-ತಪ್ಪು-ಒಪ್ಪುಗಳನ್ನ ಜಾಲಾಡಿದೆ! ಆಗ ನನಗನಿಸಿದ್ದು, - ಅಂತರ್ಜಾಲ... ಹಂತ ಹಂತವಾಗಿ ತನ್ನ ಬಲೆಗೆ ಸಿಲುಕಿಸುವ ಜಾಲವೇ ಸರಿ ಎಂದು. ಇದನ್ನ ಒಳಿತಿಗಾಗಿ ಉಪಯೋಗಿಸುವವರು ಎಷ್ಟು ಮಂದಿ ಇದ್ದಾರೋ - ಕೆಡುಕಿಗೆ೦ದೆ ಬಳಸುವವರೂ ಅಷ್ಟೇ ಮಂದಿ! ಸ್ಪಾಮ್ / ವೈರಸ್ / ಹ್ಯಾಕಿಂಗ್ ನಿಂದ ಕೂಡಿ ನಮ್ಮ ಕ೦ಪ್ಯೂಟರ್ ಅಲ್ಲದೆ ಮನಸ್ಥಿತಿಯನ್ನು ಕದಡುವ ಶಕ್ತಿ ಈ ಜಾಲಕ್ಕಿದೆ. ಅದೇನೇ ಇರಲಿ ನಮ್ಮ ಜೋಪಾನ ನಮ್ಮ ಕೈಯಲ್ಲಿರಬೇಕು ಅನ್ನುವ ದೊಡ್ಡವರ ಮಾತು ನೆನಪಾಗಿತ್ತು.


ನನ್ನ ಹುಡುಕಾಟದ ಮಧ್ಯೆ ಆರ್ಕುಟ್‌ನ ಮತ್ತೊಂದು ವಿಶೇಷ ಕಂಡೆ! ಅದೇ ಸಮುದಾಯಗಳು / ಕಮ್ಯುನಿಟಿಗಳು. ಅಲ್ಲಿ ಪ್ರತಿ ಆಶಯಕ್ಕೊಂದು ಸಮುದಾಯ, ಪ್ರತಿ ಭಾಷೆಗೊಂದು ಸಮುದಾಯ, ಇಷ್ಟ - ಕಷ್ಟಗಳಿಗೊಂದು ಸಮುದಾಯ, ಪ್ರೇಮಕ್ಕೆ - ಪ್ರಣಯಕ್ಕೆ ಒಂದೊಂದು ಸಮುದಾಯ, ಬೇಜಾರಿಗೊಂದು - ಸಂತಸಕ್ಕೊಂದು ಸಮುದಾಯ.... ಹೇಳಬೇಕೆಂದರೆ ಮನದಲ್ಲಿ ನೆನೆಸಿದ ಪ್ರತಿಯೊಂದು ಅಂಶಗಳಿಗೆ ಅಲ್ಲೊಂದು ಸಮುದಾಯವಿತ್ತು. ಇದೊಂದು ಅಚ್ಚರಿಯಂತೆ ಕಂಡಿತ್ತು ಅಂದು.
ನನಗಿಷ್ಟವಾದ ಸಮುದಾಯಗಳಿಗೆಲ್ಲ ನಾನು ಸದಸ್ಯೆಯಾದೆ, - ಬಡ ಮಕ್ಕಳ ಅಭಿವೃದ್ದಿ, ಹೆಣ್ಣು ಮಗುವನ್ನು ಉಳಿಸಿ, ವಯಸ್ಸಾದ ಜೀವಗಳಿಗೆ ಬೆಂಬಲ,ಸೋನು ನಿಗಮ್ ಫ್ಯಾನ್ ಕ್ಲಬ್, ಕನ್ನಡ ಹಾಡುಗಳು, ಚಿತ್ರತಾರೆ ಕೊಂಕೋಣ ಸೇನ್, ಸೂರ್ಯ, ಆರ್ ಕೆ ನಾರಾಯಣ್, ರಂಗಶಂಕರ ..... ಹೀಗೆ ಅನೇಕ ಅನೇಕ ಸಮುದಾಯಗಳಿಗೆ ಸದಸ್ಯೆಯಾದೆ. ಇಲ್ಲಿ ನಡೆಸುವ ಕಾರ್ಯಚಟುವಟಿಕೆಗಳನ್ನ ಗಮನಿಸಿದೆ. ಆರ್ಕುಟ್ ಬಗ್ಗೆ ಇದಿಷ್ಟು ತಿಳಿದುಕೊಂಡೆ.

ಇನ್ನು ಆಸಿಪೆಕ್ನಲ್ಲಿ :

ಕನ್ನಡದಲ್ಲಿ ನನ್ನ ಹೆಸರಿನ ನಾಮಫಲಕ ಬರೆದು ಹಾಕಿಕೊಂಡಿದ್ದೆ. "ಜೊತೆಯಲಿ ಜೊತೆ - ಜೊತೆಯಲಿ ಇರುವೆನು ಹೀಗೆ ಎಂದು" ಅಂತ ಕನ್ನಡ ಹಾಡಿನ ರಾಗವನ್ನು ಮನಸಲ್ಲಿಯೇ ಗುನಗುನಿಸಿದ್ದೆ! ಇದನ್ನು ಕೇಳಿದ್ದ ರಜನಿ - ವನಜ, "ಕನ್ನಡ ಹಾಡು ಹಾಡ್ತೀಯ ಗುಡ್ ಗುಡ್" ಅಂದಿದ್ದರು. ಸುಮಾರು ಕನ್ನಡ ಹಾಡುಗಳನ್ನು ಹಾಡಿಸಿಕೊಂಡಿದ್ದರು. ಹಾಡುವ ಮೊದಲು ಸಾಲುಗಳ ಅರ್ಥವನ್ನು ಹೇಳುತಿದ್ದ ಕಾರಣ ಅವರಿಬ್ಬರಿಗೂ ಆ ಹಾಡುಗಳು ಇಷ್ಟವಾಗತೊಡಗಿದವು! ಅದು ಯಾವ ಮಟ್ಟಿಗೆ ಇಷ್ಟವಾಗಿತ್ತೆಂದರೆ "ಅವರುಗಳ ಕನ್ನಡ ಫೇವರಿಟ್" ಹಾಡುಗಳ ಪಟ್ಟಿ ಸಹ ಮಾಡಿಕೊಂಡಿದ್ದರು. ಅವರಿಗಿಷ್ಟ ಬಂದಾಗಲೆಲ್ಲ "roops - ಪ್ಲೀಸ್ ಸಿಂಗ್ ದಿಸ್, ಸಿಂಗ್ ದಟ್" ಅಂತ ತಮ್ಮ ಇಷ್ಟವಾದ ಕನ್ನಡ ಹಾಡುಗಳನ್ನ ಹಾಡಿಸುತ್ತಿದ್ದರು.
ನಾನೇನು ಮಹಾನ್ ಗಾಯಕಿಯಲ್ಲ! ನಾನು ಯಾವ ಮಟ್ಟಿಗೆ ಹಾಡಬಲ್ಲೆ ಎಂದು ಕೇಳದಿರಿ - ಇದೊಂದು ಗೋಜಲು ಪ್ರಶ್ನೆ! ಆ ಸಮಯದಲ್ಲಿ ಕನ್ನಡ ತಿಳಿಯದವರ ಮುಂದೆ ನಾನು ಹಾಡುತಿದ್ದ ಹಾಡುಗಳು ನನಗೆ ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಿತ್ತು ಮಾತ್ರ.


ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ನೋಟೀಸ್ ಬೋರ್ಡ್ ಒಂದರ ಮೇಲೆ ಹೀಗೆ ಗೀಚಿಕೊಂಡೆ!

ಕನ್ನಡದೂರಿನ ಕನ್ನಡತಿ ನಾನು!
ಹೊಳೆಯುವ ಮೂಗುತಿ ಹೇಳದೆ ಏನು?

ಹೀಗೆ ಬರೆಯಲು ಕಾರಣ? ಮತ್ತದೇ ಲಾಜಿಕ್! ಕಾರಣ ಏಕೆ ಬೇಕು... ಬರೆದೆನೆಂದರೆ ಹೀಗೆ ಬರೆಯಬೇಕನಿಸಿತ್ತು ಅಷ್ಟೇ!
ಇದನ್ನು ನೋಡಿದ ವನಜ,- "ಯಾನಿದು {ಏನಿದು} ರೂಪ, ವಾಟ್ ಈಸ್ ದೀಸ್?" ಅಂತ ಕೇಳಿದ್ದೆ ತಡ, "ವೇಟ್ - ಲೆಟ್ ಮಿ ಟೆಲ್ ಯು"... ಅಂತ ಇದರ ಅರ್ಥ ಅವಳಿಗೆ ಅರ್ಥೈಸಿದೆ! "ವಃ ವಃ ಟೂ ಗುಡ್, ವಾಟ್ ಯು ಆರ್ ಪೊಯೆಟ್ಟು?" ಅಂತ ಆಶ್ಚರ್ಯವಾಗಿ ರಾಗವಾಗಿ ಕೇಳಿದ್ದಳು. "Nopes, i just scribble.. & if you call me a poet! either I am lucky to have met you or you are a Sweet Dumb!" [ಇಲ್ಲಮ್ಮ! ಹೀಗೆ ಅದು ಇದು ಗೀಚುವ ಅಭ್ಯಾಸ. ನೀನು ನನ್ನ ಕವಿ ಅಂತ ಕರೆದರೆ, -ನಿನ್ನ ಬೇಟಿ ಆದದ್ದು ನನ್ನ ಅದೃಷ್ಟ ಇರಬೇಕು ಅಥವಾ ನೀನು ಮುದ್ದು ದಡ್ಡಿಯಾಗಿರಬೇಕು!].....


ಈ ಮಾತುಕತೆಯೇನೋ ಅಲ್ಲಿಗೆ ಮುಗಿದಿತ್ತು. ಆದರೆ ಇದರ ಪರಿಣಾಮ ಮಾತ್ರ ನನ್ನ ತಲೆಯಲ್ಲಿ ಕನ್ನಡಕ್ಕಾಗಿ ಮತ್ತೊಂದು ಸಸಿಯನ್ನು ನೆಟ್ಟಿತ್ತು! ಏನದು ...?

Sunday, February 19, 2012

ಪ್ರದಕ್ಷಿಣೆ:

ಕೆಲವೊಂದು ಪದಗಳು ಮನಸ್ಸಿಗೆ ಇಷ್ಟವಾಗಿ ಹೋಗ್ತದೆ ಇಷ್ಟವಾಗದೇ ಹೋದದ್ದನ್ನು ಆಚೆ ತಳ್ಳಿಬಿಟ್ಟರೆ ಮನಸ್ಸು ನಿರಾಳ!. ಆದರೆ ಏನೇ ಆದರೂ ಇಷ್ಟ ಅಗ್ಬೇಕಂದ್ರೆ ಅದಕ್ಕೆ ಕಾರಣಗಳಿರಬೇಕ? ನನ್ನ ಮಟ್ಟಿಗೆ ಕೆಲವು ಪದಗಳು ಅಥವಾ ಘಟನೆಗಳು ಇಷ್ಟವಾಗಲು ಕಾರಣಗಳಿದ್ದರೆ - ಇನ್ನು ಕೆಲವಕ್ಕೆ ಕಾರಣವೇ ಇರೋಲ್ಲ.


ಮನಸ್ಸಿಗೆ ತುಂಬಾ ಇಷ್ಟವಾಗುವ ಕೆಲವು ಪದಗಳಲ್ಲಿ ಈಗಷ್ಟೇ ಸೇರ್ಪಡೆಯಾದ ಪದ 'ಪ್ರದಕ್ಷಿಣೆ'!
ಹೆಸರಿನಲ್ಲೇ ಭಕ್ತಿ, ಶ್ರದ್ಧೆ, ವಿನಯ ಎಲ್ಲವೂ ಒಮ್ಮಿಂದೊಮ್ಮೆಲೆ ಮೂಡಿಸುವ ಪದ ಅನಿಸಿತು.
ಮೊದಲಬಾರೀ ಈ ಹೆಸರು ಕೇಳಿದಾಗ..ನಮ್ಮೊಳಗೇ ಎಲ್ಲೋ ಇರುವ ಪದವಲ್ಲವೇ ಅನಿಸಿತು!!. ಏಕೆಂದರೆ ಕೆಲವಕ್ಕೆ ಕಾರಣಗಳೇ ಇಲ್ಲದ ಹಾಗೆ, ಮನುಷ್ಯ ತನ್ನೊಳಗೆ ಅರಿವಿದ್ದೋ, ಅರಿವಿಲ್ಲದೆಯೋ ಕೆಲವು ಭಾವನೆಗಳಿಗೆ 'ಪ್ರದಕ್ಷಿಣೆ' ಹಾಕುತ್ತಲೇ ಇರುತ್ತಾನೆ.

ಪ್ರದಕ್ಷಿಣೆ ಹೆಸರು ಕಿವಿಗೆ ಬಿದ್ದಾಗ, ಒಂದು ಗರ್ಭಗುಡಿಯ ಸುತ್ತ ಹೋಗಿ ಬಂದ ಭಾವನೆ! ದೇವಸ್ಥಾನಕ್ಕೆ ಹೋಗದೆ ದೇವರ ಸುತ್ತ ಪ್ರದಕ್ಷಿಣೆ ಹಾಕಿದ ಭಾವನೆ..! ಈ ಭಾವನೇನೆ ಇರಬಹುದು - ಈ ಹೆಸರು ಇಷ್ಟವಾಗಲು ಕಾರಣ.

'ಜಗದಗಲ ಒಂದು ಸುತ್ತು' ...ಸ್ನೇಹಿತರೇ, ಒಂದೇ ಸುತ್ತು ಸಾಕೆ.. ನನ್ನನ್ನು ಬಿಟ್ಟರೆ ನನ್ನ ವಾನರ ಸೇನೆಯೊಂದಿಗೆ ರಿಂಗ-ರಿಂಗ-ರೋಸೆಸ್ ಅಂತ ಸುತ್ಮೇಲೆ ಸುತ್ತು-ಸುತ್ತ್ಮೇಲೆ ಸುತ್ತು.. ಹೊಡೆಯುತಿದ್ದೆನೇನೋ!

ಸಧ್ಯಕ್ಕೆ ಜಗದಗಲ ಒಂದು ಸುತ್ತು ಅನ್ನುವಾಗ ಕಲ್ಪನೆಯಾಗಿದ್ದು, ಅದೊಂದು ಸಣ್ಣ ಭೂ-ಚೆಂಡಿನಂತೆ, ಆ ಭೂಮಿಯನ್ನ ತಬ್ಬಿಕೊಂಡಂತೆ, ಬಿರಬಿರನೆ ಓಡಿ ಒಂದು ಸುತ್ತು ಹೊಡೆದು ನಾನೇ ಫಸ್ಟ್ ಅಂತ ಏದುಸಿರು ಬಿಟ್ಟು ಹೇಳಿಕೊಂಡಂತೆ, ಇದಕ್ಕೂ ಮೀರಿ ಅನಿಸಿದ್ದು, 'ಹೇಳಿದಷ್ಟು ಸುಲಭವಾಗಿ, ವಾಸ್ತವತೆಯಲ್ಲಿ ಈ ಜಗತನ್ನು ಇಷ್ಟು ಬೇಗ ಒಂದು ಸುತ್ತು ಹೊಡೆದು ಬರಬಹುದೇ ಅಂತ.
ಒಂದೊಂದು ಜೀವಕ್ಕೆ ಒಂದೊಂದು 'ಜಗತ್ತು', ಒಬೊಬ್ಬರ ಭಾವನೆಯಲ್ಲಿ ಒಂದೊಂದು 'ಜಗತ್ತು' - ಈ ಪದಕ್ಕೂ ಪರಿಮಿತಿ ಎಲ್ಲಿದೆ? ಇದರ ಒಳಾರ್ಥ ಎಲ್ಲೆಲ್ಲಿಯ ತನಕ ಸೀಮಿತ?-ಹೌದು, ಸೀಮಾತೀತ!!

ಅದೇನೇ ಅದರು ಜಗತ್ತು ಕೈಗೆಟುಕಿಸಿದಂತ ಅನುಭವ ಕೊಟ್ಟಿದ್ದು ಈ ಪ್ರದಕ್ಷಿಣೆಯ 'ಜಗದಗಲ ಒಂದು ಸುತ್ತು'..
ನವಿರಾದ ನೆಂಟಸ್ತಿಕೆ ಬೆಳೆಯುತ್ತಿದೆ ಈ ಪದಗಳ ಜೊತೆ, ಈ ತಾಣದ ಜೊತೆ.
ನನಗರಿವಿಲ್ಲದೆ ಸುಲಭವಾಗಿ ಈ ಭಾವನೆಗಳನ್ನ ಮೂಡಿಸಿ ಪ್ರದಕ್ಷಿಣೆ!

ನಮ್ಮ ತಂಡವನ್ನು ನಾವು ಒಂದು ಸಮುದಾಯ ಎಂದು ಕರೆದುಕೊಳ್ಳಲು, ಅಂತರಜಾಲವೂ ಕಾರಣ ಬಿಡಿ. 3k ಅಂದರೇ ಅಚ್ಚರಿ ಕೆಲವರಿಗೆ. ಕನ್ನಡದಲ್ಲಿ ಮೂರುಖ ಎಂದು ಓದಿ, ನಮ್ಮನ್ನು ಲೀಲಾಜಾಲವಾಗಿ ಮತ್ತು ಅಕಾರಣವಾಗಿ(?!) ಮೂರ್ಖರ ಪಟ್ಟಿಗೆ ಸೇರಿಸಿಬಿಡುತ್ತಾರೆ. ಅದು 3k ಅಂದರೆ ಕನ್ನಡ-ಕವಿತೆ-ಕವನ ಎಂದು ಹೇಳಿದರೆ ಮುಸಿ ಮುಸಿ ನಗುತ್ತಾರೆ!!. ಕವಿತ-ಕವನ.....ಏನು ವ್ಯತ್ಯಾಸ ಎಂದು ಕೇಳಿದರೆ, ಕೇಳಿದವರ ಜೊತೆಗೆ ನಾವೂ ಮೂರ್ಖರೇ......?? ಗೊತ್ತಿಲ್ಲಪ್ಪ.

ಆದರೆ ನಾನಂತೂ ಮೂರ್ಖರ ತಂಡದ ನಾಯಕಿ- 'ಮಹಾನ್ ಮೂರ್ಖ 'ಎಂದೇ ಪ್ರಸಿದ್ದ. ಆದರೆ ನಮ್ಮ ಸುತ್ತಲೂ ಹೀಗೆ 'ಪ್ರದಕ್ಷಿಣೆ' ಅರ್ಥ ಕಂಡುಕೊಂಡಿದ್ದರೆ ಅದಕ್ಕೆ ನಾವು,ಕವಿತೆ-ಕವನಕ್ಕಿಂತಲೂ ಕನ್ನಡ ಪ್ರೀತಿಯೇ ದೊಡ್ಡದು ಎಂದು ನಂಬಿದ್ದೇವೆ-ಆ ಮೂಲಕ ನಾವು ಮೂರ್ಖರಲ್ಲ ಸ್ವಾಮಿ.

ನಮ್ಮ ಬಂಡವಾಳದ ಬಗ್ಗೆಯೂ ಕುತೂಹಲ ಸಹಜ. ನಮ್ಮಲ್ಲೂ 'ಬಂಡವಾಳಶಾಹಿ'ಗಳಿದ್ದಾರೆ. ಮೂಲ ಬಂಡವಾಳ-ಕನ್ನಡ ಪರ ಮನಸ್ಸು. ಅದನ್ನು ತಂದು ಇಲ್ಲಿ ಹಾಕಿದರೆ ಮುಗಿಯಿತು. ಮತ್ತೆ ನಮ್ಮ ಸದಸ್ಯರುಗಳ ಭಾವನೆಗಳೇ ಇದರ ಬಂಡವಾಳ............!
ಆ ಭಾವನೆಗಳ ಖಜಾನೆ ಹೊತ್ತು ಪ್ರದಕ್ಷಿಣೆ ಹಾಕಲು ಸಜ್ಜಾಗಿರುವೆ. ನಿಮ್ಮ ಪ್ರೀತಿ ಬಯಸುತ್ತ........ ಪ್ರೀತಿಯೊಂದಿಗೆ ಮೆಚ್ಚುಗೆಯೂ ಇರಲಿ...ತಪ್ಪಿದಲ್ಲಿ ತಿದ್ದಲು ಮರೆಯದಿರಿ.....ನಾವು ಮೂರ್ಖರಾದರೂ ನೀವು ಅಲ್ಲವಲ್ಲ......??

ಅಂದ ಹಾಗೆ...ಇದು ಮುಗಿಯುವ ಕಥೆಯಲ್ಲ......ಕಥೆಯ ಆರಂಭ ಅಷ್ಟೇ.....ಕಥೆ ಮುಂದೆಯೂ ಇದೆ.

ಬಾಳೊಂದು ಭಾವಗೀತೆ

ನಿಮ್ಮೊಂದಿಗೆ

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...