Wednesday, February 20, 2013

ಸಾಧ್ಯವಾದರೆ ಕೈ ಜೋಡಿಸಿ, ಇಲ್ಲವಾದರೆ......

"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾಗ ವಿಚಾರಿಸುತಿದ್ದಾರೆ. ಆಗಲಿ, ನೋಡೋಣ ಅಂತ ಹೇಳಿ ಸುಮ್ಮನಾಗ್ತಿದೀನಿ.

ಯಾಕೋ ಈ ನಡುವೆ ಯಾರನ್ನೂ ಅಲ್ಲಿಗೆ ಕರೆದೊಯ್ಯುವ ಮುನ್ನ ಯೋಚಿಸುವನ್ತಾಗಿದೆ! NGO ಗೆ ಹೋದವರಲ್ಲಿ ಕೆಲವರಿಗೆ ಆ ಮಕ್ಕಳನ್ನ ಹೇಗೆ ಮಾತಾಡಿಸಬೇಕು, ಏನೇನು ಕೇಳಬೇಕು, ಏನೇನು ಕೇಳಬಾರದು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇರೋದಿಲ್ಲ. ಎಲ್ಲರೂ ಹೀಗಿರ್ತಾರೆ ಅಂತಲ್ಲ. ಆದ್ರೆ - ಹೀಗೂ ಇರ್ತಾರೆ ಅನ್ನೋದೇ ವಿಪರ್ಯಾಸ. ಅಲ್ಲಿಗೆ ಹೋಗುವ ಮುನ್ನ ನನ್ನದೊಂದು ನಿವೇದನೆ ಸದಾ ಇರುತ್ತದೆ. ಮಕ್ಕಳೊಡನೆ ಆಡಿ, ಅವರನ್ನ ನಗಿಸಿ, ಮುದ್ದಿಸಿ, ಮಾತನಾಡಿಸಿ ತಮ್ಮ ದಿನವನ್ನ ಅರ್ಥಪೂರ್ಣವಾಗಿಸಿ ಅಂತ. ಆದರು ಮಕ್ಕಳನ್ನು ಬೇಟಿಯಾದವರಲ್ಲಿ ಅನೇಕ ಪ್ರಶ್ನೆಗಳಿರುತ್ತವೆ!

"ಒಹ್, ನಿಂಗೆ ಅಮ್ಮ ಇಲ್ವಾ ಹಾಗಿದ್ರೆ?, ನಿಂಗೇ, ಒಹ್ ಇಬ್ರೂ ಇಲ್ವಾ? ಛೆ ಛೆ! ಪಾಪ, ಯಾವಾಗ್ ಬಂದ್ರಿ ಇಲ್ಗೆ? ಯಾರ್ ಕರ್ಕೊಂಡ್ ಬಂದಿದ್ದು? ನಿಂದು ಯಾವೂರನ್ತಾನೆ ಗೊತ್ತಿಲ್ವ? ನಿಮ್ಮಪ್ಪ ಅಮ್ಮ ನೆನಪಾಗ್ತಾರ? ನೆನಪಾದಾಗ ಏನ್ ಮಾಡ್ತೀರ? ಛೆ, ಅಯ್ಯೋ ಪಾಪ! ನಿಮಗೂ ಒಂದು ಮನೆ ಅಂತ ಇದ್ದಿದ್ದರೆ ಚೆನ್ನಾಗಿರ್ತಿತ್ತು ಅನ್ನಿಸಿರುತ್ತೆ ಅಲ್ವ?"



ಇಂಥ ಪ್ರಶ್ನೆಗಳಿಂದ ಮಕ್ಕಳ ಮನಸಿನ ಮೇಲೆ ಯಾವ ಪರಿಣಾಮ ಬೀಳಬಹುದೆಂದು ಯೋಚಿಸುವ ಗೋಜಿಗೂ ಹೋಗುವುದಿಲ್ಲ ಇವರು. ಆಶ್ರಮಕ್ಕೆ ಬಂದ ಅತಿಥಿಗಳೆಲ್ಲ ಹೋದ ಮೇಲೆ, ಕೆಲವು ಮಕ್ಕಳ ಮನಸ್ಥಿತಿಯಲ್ಲಿ ಏರು ಪೇರು ಕಾಣಬಹುದು. ಯಾರ ಬಳಿಯೂ ಮಾತನಾಡದೆ ಇದ್ದಕಿದ್ದ ಹಾಗೆ ಮಂಕಾಗಿಬಿಡ್ತಾರೆ. ಮತ್ತೊಮ್ಮೆ ಈ ಮಕ್ಕಳನ್ನ ಒಂದು ಮನಸ್ಥಿತಿಗೆ ತರುವಲ್ಲಿ ನಮ್ಮೆಲ್ಲರ ಪ್ರಯತ್ನ ಒಮ್ಮೊಮ್ಮೆ ವಿಫಲವಾಗುತ್ತೆ.

ಇತ್ತೀಚಿಗೊಬ್ಬರು, "ನೀವು ಹೇಳಿದ್ರಿ ಇದು ಅನಾಥಾಶ್ರಮ - Orphanage ಅಂತ, ನಾವೆಲ್ಲೋ ಅಪ್ಪ-ಅಮ್ಮ ಯಾರು ಇರದ ಅನಾಥರು ಅಂದುಕೊಂಡ್ವಿ" ಅಂತ ನನ್ನ ಕೇಳಿಯೇ ಬಿಟ್ಟರು. "ಯಾಕೆ ಸರ್, ತುಂಬ disappoint ಆಗೋಯ್ತ? ಏನೋ ಒಂದು image ಇಟ್ಟುಕೊಂಡು ಬಂದಿದ್ರಿ ಅನ್ಸುತ್ತೆ! ಸಧ್ಯ, ಈ ಮಕ್ಕಳಿಗೆ ಯಾರೂ ಇಲ್ಲದೆ ಯಾರಾದರೊಬ್ಬರು ಇದ್ದಾರಲ್ಲ ಅಂತ ಖುಷಿಪಡಬೇಕು ಅಲ್ವ? ನಿಜ, ಈ ಆಶ್ರಮದಲ್ಲಿ ಕೆಲವರಿಗೆ ಅಪ್ಪ, ಕೆಲವರಿಗೆ ಅಮ್ಮ, ಇನ್ನೂ ಕೆಲವರಿಗೆ ಯಾರೋ ಸಂಬಂಧಿಕರು ಅಂತ ಇದ್ದಾರೆ, ಇಬ್ಬರೂ ಇರದ ಮಕ್ಕಳಿಗೆ ಯಾರೂ ಇಲ್ಲ ಅಂತಲ್ಲ - ನಾವಿದೀವಿ" ಅಂತ ಹೇಳಬೇಕಾಯ್ತು. "ಅಲ್ಲಿದ್ದಾನೆ ನೋಡಿ, ಅವರಪ್ಪ ಆ ಹುಡುಗನ ಮುಂದೆಯೇ ಕೊಲೆಯಾಗಿ ಹೋದ, ಮತ್ತೊಬ್ಬ ಇದ್ದಾನಲ್ಲ ಅವನಮ್ಮ ಜೈಲಿನಲ್ಲಿ, ಇವನಪ್ಪ ದೊಡ್ಡ ಕುಡುಕ, ಇವರಮ್ಮ ಬಿಟ್ಟು ಎಲ್ಲಿಗೊದರೋ ಗೊತ್ತಿಲ್ಲ, ಅವನ ಚಿಕ್ಕಪ್ಪ ಅವನಿಗೆ ಕೊಟ್ಟ ಕಾಟದ ಗುರುತುಗಳು ಅವನ ಮುಖದಲ್ಲಿವೆ ನೋಡಿ, ಇವನು ಯಾವೂರಿಂದ ಓಡಿ ಬಂದನೋ ಗೊತ್ತಿಲ್ಲ, ಹೀಗೆ..... ಪಿಳಿ ಪಿಳಿ ಎಂದು ನೋಡುತಿರುವ ಪುಟ್ಟ ಕಣ್ಣುಗಳ ಹಿಂದೆ ಅನೇಕಾನೇಕ ಕಥೆಗಳಿವೆ, ಅವರನ್ನೆಲ್ಲ ಯಾಕೆ ಕೆಣಕಿ ಕಾಡ್ತೀರಿ?" ಅಂತ ಕೇಳಬೇಕನಿಸಿತ್ತು.

ಸೇವೆಯ ಹೆಸರಿನಲ್ಲಿ ಪುಣ್ಯಗಳಿಸಲು ಹೊರಟ ಮಂದಿಯ ನಡುವೆ ಅರಿವಿಲ್ಲದೆ ಪೆಟ್ಟು ತಿನ್ನುವ ಕಂದಮ್ಮಗಳು ಇವರು. ಸಮಾಜವನ್ನ ಹೆದರಿಸುವ ಶಕ್ತಿ / ಕಲೆ ಒಲಿಯುವು ಮುಂಚೆಯೇ ಇವರಲ್ಲಿ ಕೀಳರಿಮೆ ಮೂಡಿಸುವುದು ಎಷ್ಟು ಸರಿ? ಹಿಂದೊಮ್ಮೆ IT ಕಂಪನಿಯ ಗುಂಪೊಂದು ಆಶ್ರಮಕ್ಕೆ ಬಂದು ಹೋದ ಮೇಲೆ, "ರೂಪಕ್ಕ, ಅಳು ಬರೋತರ ಆಗ್ತಿದೆ" ಅಂತ ಕೃಷ್ಣ ಹೇಳಿದ್ದು ಈಗಲೂ ನೆನಪಿದೆ. ಅವನಿಗೆ ಸಮಜಾಯಷಿ ಹೇಳಿ ಮನೆಗೆ ಬಂದಾಗ ಮನಸು ಭಾರವಾಗಿತ್ತು, ಯಾರನ್ನ ಪ್ರಶ್ನಿಸೋದು? ಯಾರಿಗೆ ಉತ್ತರಿಸೋದು?

ಕೃಷ್ಣನ - ದೀಪಾವಳಿ

ದೀಪಾವಳಿ, ಎಲ್ಲರ ಮನೆಯಲ್ಲು ಸ೦ತಸ,
ರುಚಿ-ಅಡುಗೆ, ಹೊಸ-ಬಟ್ಟೆ, ಪಟಾಕಿಗಳ ಹಾವಳಿ!
ಕೃಷ್ಣನಿಗೆ ಮಾತ್ರ ಎ೦ದಿನ೦ತೆ ದಿನಚರಿ,
ಎದ್ದವನೇ ಆಶ್ರಮದ ಸುತ್ತ ಒಡೆದೆಸೆದು ಕಸ ಕಡ್ಡಿ,
ಗೋಡೆಗೊರಗಿ ಕುಳಿತ ಸುತ್ತಿಟ್ಟ ಚಾಪೆಯ ಹರಡಿ!

ಮನೆ ಮ೦ದಿಯೊಡನೆ ಬೆಳೆದ ಅನುಭವ ಅವನಿಗೆಲ್ಲಿ,
ಹಿ೦ದಿಲ್ಲ-ಮು೦ದಿಲ್ಲ,
ತೊಳೆದ ಎಂಜಲು ತಟ್ಟೆ ಹೊರತೊಂದು ನೆನಪಿಲ್ಲ!
ಒಡ್ಡುತನ - ಬಡತನಗಳ ನಡುವೆ ಹೇಗೆ ಬೆಳೆದು ಬ೦ದನೋ,
ಅ೦ತು ಸೇರಿದ್ದ ಆಶ್ರಮ - ಪುಣ್ಯಾತ್ಮರ ನೆರವೇನೋ!

ಅಲ್ಲಿರುವ ಅಣ್ಣ ತಮ್ಮ೦ದಿರೆ ಅವನಪಾಲಿಗೆಲ್ಲ,
ಪ್ರೀತಿ ಪ್ರೇಮ ತು೦ಬಿದ೦ತೆ ಬಾ೦ಧವ್ಯದ ಒಡಲ!
ಹ೦ಚಿಕೊಳ್ಳಲು ಅವನಲ್ಲಿ ಮಾತುಕತೆಗಳು ಅನೇಕ,
ಭಾವಗಳ ಬಚ್ಚಿಟ್ಟ - ಅವನಿಗೇಕೊ ಬಿ೦ಕ!

ಅ೦ದೊಮ್ಮೆ, ಇ೦ದೊಮ್ಮೆ ಬ೦ದು ಹೋಗುವ ಮ೦ದಿ,
ಹಣ್ಣು, ಹಾಲು, ಸಿಹಿತಿನಿಸು ಕೊಡುವುದು೦ಟು
ತಮ್ಮ ಗೆಲುವು ಸಂಭ್ರಮಗಳ ನೆಪವೊಡ್ಡಿ!
ಯಾರೊ ತೊಟ್ಟು ಎಸೆದ ಬಟ್ಟೆ, ಆಡಿಬಿಟ್ಟ ಆಟಿಕೆಗಳು,
ಓದಿಬಿಟ್ಟ ಹಾಳೆಗಳ ಅ೦ಟಿಸಿ ಓದುವ ಪುಸ್ತಕಗಳು!

ಅವರಿವರ ಕರುಣೆಗೆ ತುತ್ತಾಗಿ ಬೆಳೆಯುತ,
ಮು೦ದೇನು ಎ೦ದು ಅರಿಯದ ಬದುಕು!
ಪ್ರತಿ ಹೆಜ್ಜೆಗೂ ಭಿಕ್ಷೆ - ಮಾಡದ ತಪ್ಪಿಗೆ ಶಿಕ್ಷೆ,
ಕನಸ ಕಾಣಲು ಸಹ ಮನದೊಳಗೆ ಅಳುಕು!
ಕೃಷ್ಣನ ಪರಪುಟ್ಟ ಕಣ್ಣುಗಳು ಬೆದರಿದ೦ತೆ,
ಮೌನರೋದನೆ ಪ್ರಶ್ನಾರ್ತಕ ಒಳಗೊಳಗೆ!
"ನನಗೇಕೆ ಈ ಬಾಳು..?, ನಾನಿಲ್ಲಿ ಹೀಗೇಕೆ "..?
ಅ೦ಜಿಕೆ ನಡುವೆ ಅನಿವಾರ್ಯ -
 ಬಯಸುವುದು ಹೇಗೆ
ಹೊ೦ಬಣ್ಣದಾಕಾಶ, ಬೆಳಕಿನದೀವಳಿ?

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...