Wednesday, February 29, 2012




ಸೋಮವಾರದ ನೀಲಿ ಶುಭೋದಯ..... ಮಂಡೇ ಮಾರ್ನಿಂಗ್ ಬ್ಲೂಸ್!

ವೀಕೆಂಡ್ ಮುಗಿಸಿಕೊಂಡು ಬರುವ ಕಾರ್ಪೋರೆಟ್ ಮಂದಿ ತಮ್ಮ ಸೋಮವಾರಗಳಿಗೆ ಚಾಲನೆ ನೀಡಲು ಬಳಸುವ ಪದಸಮುಚ್ಚಯ ಇದು. ನೀಲಿ ಬಣ್ಣದ ಪದಪ್ರಯೋಗ ಏಕಿರಬಹುದು? ಅಮೆರಿಕನ್ನರು ವಿಷಾದಕರ ಗೀತೆಗಳನ್ನ ಉಲ್ಲೇಖಿಸಲು ಬ್ಲೂ ಥೀಮ್ಸ್ ಎಂದು ಬಳಸುವಾಗ, ಸೋಮವಾರದ ಸೋಮಾರಿತನಕ್ಕೆ ಈ ಹೆಸರು ರೂಡಿಸಿಕೊಂಡಿದ್ದಾರೆ! ಬ್ಲೂ - ನೀಲಿ - ವಿಶಾಲವಾದ ಮುಗಿಲಿನ ಮೈಬಣ್ಣ - ವಿಷಾದವೇಕೆ? ಪ್ರತೀ ಸೋಮವಾರ ತಾಜಾತನದ ವಾರವೊಂದು ಆಗಷ್ಟೇಗರಿಗರಿಯ ಉಡುಗೊರೆಯಾಗಿ ನನ್ನ ಮುಂದಿಟ್ಟಂತೆ ನನ್ನ ಭಾವನೆ! ವಾರದ ಕೆಲಸಗಳನ್ನೆಲ್ಲ ಕಣ್ಮುಂದೆ ತಂದುಕೊಂಡು ಅವುಗಳ ಆದ್ಯತೆಗನುಗುಣವಾಗಿ ಪೇರಿಸಿಕೊಳ್ಳುವ ಪ್ರಮುಖವಾರ ಈ ಸೋಮವಾರ.

ಸೋಮೇಶ್ವರ, ದಿ ಚಾಲೆಂಜಿಂಗ್ ಸ್ಟಾರ್!

"ಮೇಡಂ ಕಾಫಿ ಆರ್ ಟೀ?" ಅಂತ ಕೇಳ್ಕೊಂಡು ಬಂದ ಸೋಮೇಶ. ಈ ಸೋಮೇಶನ ಬಗ್ಗೆ ಒಂದೆರಡು ಮಾತು. ನಾನು ಕೆಲಸ ಮಾಡುತಿದ್ದ ಕಂಪನಿಯ ಆಫೀಸ್ ಬಾಯ್, ಮಹಾನ್ ಮಾತಿನ ಮಲ್ಲ! ಆದರೆ ಅಷ್ಟೇ ಚುರುಕಾಗಿ ಕೆಲಸ ನಿರ್ವಹಿಸುವಾತ. ಹಾಗೋ ಹೀಗೋ ಅಷ್ಟಿಷ್ಟು ಇಂಗ್ಲಿಷ್ - ಹಿಂದಿ ಮಾತನಾಡಿಕೊಂಡು ಕೆಲಸ ನಿಭಾಯಿಸುವ ಚಾಣಾಕ್ಷ. ಇಡೀ ಆಫೀಸಿನಲ್ಲಿ ನನ್ನ ಬಿಟ್ಟರೆ ಕನ್ನಡದಲ್ಲಿ ಮಾತನಾಡ ಬಲ್ಲ ಏಕೈಕ ವ್ಯಕ್ತಿ ಈ ಸೋಮೇಶ. ಇವನೊಟ್ಟಿಗೆ ಕನ್ನಡದಲ್ಲಿ ಮಾತ್ನಾಡೋದೊಂದು ಖುಷಿ. ಸೋಮೇಶನಿಗೊಬ್ಬ ಹೀರೋ! ಅವನ ಬಾಸ್, ಅವನ ಆರಾಧ್ಯದೈವ, ಅವನ ಅಣ್ಣ, ಅವನ ಗುರು.... ಚಾಲೆಂಜಿಂಗ್ ಸ್ಟಾರ್ ದರ್ಶನ್! ಅವನಿಂದಲೇ ನಾನು ತಿಳಿದಿದ್ದು, ದರ್ಶನ್ಗೆ ಈ ಬಿರುದಿದೆ ಎಂದು. ಚಾಲೆಂಜಿಂಗ್ ಸ್ಟಾರ್ ಅಂತ ಯಾಕೆ ಕರೀತಾರೆ ಅಂತ ಕೇಳ್ದಾಗ, "ನಮ್ಮಣ್ಣ ಮೇಡಂ - ಏನ್ ಹೇಳಿದ್ರೂ ಚಾಲೆಂಜ್ ಥರಾನೆ ತಗೊಳ್ತಾರೆ ಅದಕ್ಕೆ" ಅಂತ ಹೇಳಿಕೊಂಡಿದ್ದ. ಚಾಲೆಂಜಿಂಗ್ ಸ್ಟಾರ್ ಅಂದ್ರೆ ಹೀಗ??? ದರ್ಶನ್ ಕುರಿತು ಹೇಳಿಕೊಂಡಾಗೆಲ್ಲ ಅವನ ಮುಖದಲ್ಲೊಂದು ಹೊಳೆಯುವ ಕಾಂತಿ! ದರ್ಶನ್ ಕುರಿತಂತೆ ಎಲ್ಲಾ ವಿಷಯಗಳನ್ನು ಸಂಗ್ರಹಿಸಿದ್ದ, ಯಾವ ದಿನ ಯಾವ ಶೂಟಿಂಗ್ನಲ್ಲಿದ್ದಾರೆ ಅನ್ನುವ ಮಾಹಿತಿ ಸಹ ಅವನಿಗೆ ತಿಳಿಯುತ್ತಿತ್ತು. "ಮೇಡಂ, ನಿಮ್ಹತ್ರನೆ ನಾನು ಕನ್ನಡ ಮಾತಾಡೋದು, ಅದಕ್ಕೆ ನಿಮಗೆ ಸ್ಪೆಷಲ್ ಕಾಫಿ" ಅಂತ ಹೇಳೋದಲ್ಲ್ದೆ, ಆಫೀಸಿನಲ್ಲಿ ಇರುವವರ ಬಳಿಯೆಲ್ಲ "ಕನ್ನಡ ಮೇಡಂ" ಅಂತಲೇ ನನ್ನ ಹೆಸರನ್ನು ಬದಲಾಯಿಸಿಬಿಟ್ಟಿದ್ದ.

ಅದೊಂದು ಸೋಮವಾರ

ಸೋಮವಾರದ ಸಂಜೆ, ಕನ್ನಡದ ಸ್ಪೆಷಲ್ ಕಾಫಿ ನನ್ನ ಟೇಬಲ್ಲಿಗೆ ಬಂತು. ಎಂದಿನಂತೆ ಸೋಮೇಶ ಅವನಣ್ಣನ ಕುರಿತಂತೆ ಹೇಳತೊಡಗಿದ, "ಮೇಡಂ, ನಮ್ಮಣ್ಣ ದರ್ಶನ್ ಇವತ್ತು ಮಧ್ಯಾನ್ಹ ಎಡವಿದ್ರಂತೆ! ಬಲಗಾಲಿನ ಕಿರುಬೆರಳಿಗೆ ತಗುಲಿ ರಕ್ತ ಬಂತಂತೆ! ನಾಳೆ ಇದೆ ವಿಷಯ ಪೇಪರ್ನಲ್ಲಿ ಬರೋದು, ಅವ್ರ ಮನೆ ಹತ್ರ ಹೋಗಿ ಹೇಗಿದ್ದಾರಂತ ವಿಚಾರಿಸಿಕೊಂಡು ಬರಬೇಕು, ಅವರ ಮನೆ ಸೆಕ್ಯೂರಿಟಿ ನನಗೆ ಚೆನ್ನಾಗಿ ಪರಿಚಯ ಇದ್ದಾರೆ, ಹೋದ್ರೆ ಸಾಕು ಎಲ್ಲ ವಿಷಯ ಅವ್ರೆ ಹೇಳ್ಬಿಡ್ತಾರೆ, ನಮ್ಮಣ್ಣನಿಗೆ ಏನಾಗದಿದ್ರೆ ಸಾಕು", ವಿಪರೀತ ವಿಷಾದದಿಂದ ಹೇಳಿದ. "ಸೋಮ, ನಿಮ್ಮ ದರ್ಶನ್ ಅವರ ಗಾಯ ವಾಸಿಮಾಡ್ಕೊಳ್ತಾರೆ ಬಿಡು. ಎರಡು ತಿಂಗಳಾಯ್ತು ಮನೆಗೆ ಹೋಗಿ ಅಂತಿದ್ಯಲ್ಲ, ನಿಮ್ಮ ತಂದೆಗೆ ಹುಷಾರಿಲ್ಲ ಅಂತಿದ್ಯಲ್ಲ, ಫೋನ್ ಮಾಡಿ ವಿಚಾರ್ಸಿದ್ಯ? ಹೇಗಿದ್ದಾರೆ ಈಗ? " ಅಂತ ಕೇಳಿದ್ದೆ. "ಬಂದೆ ಮೇಡಂ" ಅಂತ ಹೇಳಿ, ಅಲ್ಲಿಂದ ಹೊರಟೆ ಬಿಟ್ಟ. ನನ್ನ ಮಾತು ಕಟುವಾಯ್ತೇನೋ? ನಯವಾಗೆ ಹೇಳಿದ್ನಲ್ಲ. ಅಷ್ಟಕ್ಕೂ ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಅನಾರೋಗ್ಯದಿಂದ ಹಾಸಿಗೆ ಹಿಡಿದ ಅವನ ತಂದೆ, ಮನೆಯೊಳಗೇ - ಹೊರಗೆ ದುಡಿಯುವ ತಾಯಿ! ಜವಾಬ್ದಾರಿ ಕಳೆದುಕೊಳ್ಳಬಾರದು ಹುಡುಗ ಅನ್ನುವ ದೃಷ್ಟಿಯಲ್ಲಿ ಹೀಗಂದೆ, ನನಗೆ ನಾನೇ ಸಮರ್ತಿಸಿಕೊಂಡೆ. ಮಂಗಳವಾರ ಆಫೀಸಿಗೆ ಬರಲಿಲ್ಲ ಸೋಮೇಶ, ಕನ್ನಡದ ಸ್ಪೆಷಲ್ ಕಾಫಿ ಸಹ ಟೇಬಲ್ಲಿಗೆ ಬರಲಿಲ್ಲ! ಕಾಫಿ-ಮೇಕರ್ ಬಳಿ ಹೋಗಿ ನನ್ನ ಕಾಫಿ ನಾನೇ ಮಾಡಿಕೊಂಡು ಬಂದೆ. ಜೊತೆಗೆ, ದರ್ಶನ್ ಕಾಲ್ಬೆರಳು ನೆನೆಸಿಕೊಂಡು ಸಣ್ಣ ನಗೆಯೊಂದು ಬಂತು.

ಬುಧವಾರ ಬೆಳ್ಳಂ ಬೆಳಗ್ಗೆ

ಆಫೀಸಿಗೆ ಕಾಲಿಟ್ಟು ಸೀಟಿನ ಬಳಿ ಹೋಗಿದ್ದೆ ತಡ, ಸೋಮೇಶ ಪ್ರತ್ಯಕ್ಷ. "ಮೇಡಂ, ನಮ್ಮೂರಿಗೊಗಿದ್ದೆ, ನಮ್ಮಪ್ಪ ಅಮ್ಮನ್ನ ನೋಡ್ಕೊಂಡು ಬಂದೆ, ನಮ್ಮಪ್ಪನಿಗೆ ಪರವಾಗಿಲ್ಲ ಈಗ, ಹಣ್ಣು ಔಷದಿ ಕೊಡ್ಸಿ ಸ್ವಲ್ಪ ದುಡ್ಡು ಕೊಟ್ಟು ಬಂದೆ. ನೋಡಿ ಈ ದೇವರ ದಾರ ನಮ್ಮಮ್ಮ ಕಟ್ಟಿದ್ದು ಕೈಗೆ" ಅವನ ಕಯ್ಯಲ್ಲಿದ್ದ ಕಪ್ಪು ದಾರ ತೋರಿಸಿದ. "ಡಾಕ್ಟ್ರು ಹೇಳೋವ್ರೆ - ಒಂದು ಸಣ್ಣ ಆಪರೇಶನ್ ಮಾಡಿದ್ರೆ ಎಲ್ಲಾ ಸರಿ ಹೋಗ್ತದೆ ಅಂತ, ಎಲ್ಲಾ ವಾಸಿ ಆದ್ರೆ ನಮೂರ ಜಾತ್ರೆ ಟೈಮ್ನಲ್ಲಿ ಒಂದು ಕುರಿ ಕೊಡ್ತೀವಿ ಅಂತ ಹರಸಿಕೊಂಡು ಬಂದೆ" ಅಂದ. ಓ - ಇವನಿಗೆ ಪ್ರತಿಕ್ರಿಯೆ ನೀಡೋಕೆ ನನಗೆ ಅರೆಕ್ಷಣ ಬೇಕಾಯ್ತು! "ಸರಿ, ಸರಿ.... ಊರಿಗೋಗಿದ್ಯ, ಒಳ್ಳೆ ಕೆಲಸ ಮಾಡಿ ಬಂದೆ, ನಿಮ್ಮಪ್ಪ ಅಮ್ಮನ ಜೊತೆ ಸಂಪರ್ಕದಲ್ಲಿರು ಸೋಮ, ಮರೆತಂಗಿರಬೇಡ, ಹೆತ್ತವರು, ವಯಸ್ಸಾಗಿದೆ ನಿರ್ಲಕ್ಷೆ ಮಾಡಬಾರದು ಅಲ್ವಾ! ಗುಡ್ ಬಾಯ್ ನೀನು. ಈಗ್ಹೇಳು ನಿಮ್ಮ ದರ್ಶನ್ ಕಾಲುಗಳು ಸುರಕ್ಷಿತವಾಗಿದಾವ?" ಅಂತ ಕೇಳಿದ್ದೆ ತಡ....... ಮತ್ತೆ ಶುರುವಿಟ್ಟ ಸೋಮೇಶ. ಅದೇನೇ ಇರಲಿ, ನಮ್ಮವರು, ನನ್ನೂರು, ನನ್ನ ಜನ, ನನ್ನ ತವರು, ನಾನಿಷ್ಟ ಪಡುವ ನೆಲ ಜಲ ಜೀವ ಜಂತುಗಳು ಸುರಕ್ಷಿತವಾಗಿದ್ದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದೆ ಅನ್ನುವ ಗಾಢವಾದ ತೃಪ್ತಿ ತಂತಾನೇ ಮೂಡುತ್ತದೆ. ಈ ತೃಪ್ತಿಗಾಗಿ ಹಂಬಲಿಸುವ ಸ್ವಾರ್ಥಜೀವಿ ಈ ಮನಸು.

ಬಾನಿನ ವಿಹಂಗಮ ....ಹಾರಲು ಸಂಭ್ರಮ

ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ಬಿಳಿ ಬೋರ್ಡ್ ನನ್ನೊಮ್ಮೆ ನೋಡಿ, ಏನೋ ಹೇಳಲು ಹೊರಟು ಹಾಗೆ ಸುಮ್ಮನಾದಂತೆ ಭಾಸವಾಯ್ತು! ಹೋಯ್ ಗುರಾಯಿಸಬೇಡ! ಅಂತ ಅದರಮೇಲೆ ಗೀಚಿದೆ. ಕಯ್ಯಲ್ಲಿ ಕಾಫಿ ಹಿಡಿದು ಕಿಟಕಿಯಿಂದಾಚೆ ಒಮ್ಮೆ ನೋಡಿದೆ, - ನೀಲಿ ಬಾನು : ಪಾರಿವಾಳಗಳ ಗುಂಪು : ಬಿಳಿ ಗುಡ್ದೆಗಳ ಹಾಗೆ ಮೋಡಗಳು : ಹಾಯೆನಿಸಿತು! ನನ್ನ ಡೈರಿ ತೆಗೆದು ಕವನವೊಂದನ್ನ ಬರೆದಿಟ್ಟೆ! ಆ ಸಮಯದಲ್ಲಿ ನನ್ನ ಮಟ್ಟಿಗೆ ನಾನೊಂದು ಕವನ ಬರೆದೆನೆಂಬ ಬ್ರಮೆಯಲ್ಲಿದ್ದೆ. ಈಗದನ್ನು ಪ್ರಸ್ತುತ ಪಡಿಸೋಕೆ ಸ್ವಲ್ಪ ಕಸಿವಿಸಿ, ಆದರು ಹೇಳಿ ಆದಮೇಲೆ ಬರೆದು ತೀರಬೇಕು.

ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!
ಸೂರ್ಯಾಸ್ತದ ತಿಳಿಗೆಂಪು
ಹಕ್ಕಿಗಳ ಗುಂಪು ಗುಂಪು
ಹಸಿರೆಲೆಗಳ ಸೊಂಪು
ಹಾಡುಗಳೆಲ್ಲವೂ ಹಿ೦ಪು ಹಿ೦ಪು
ಬೆಳ್ಮುಗಿಲ ಚಿತ್ತಾರ
ಕೊಲ್ಬಂಡೆಗಳ ಆಕಾರ
ಸವಿ ಮಾತುಗಳ ಝೇಂಕಾರ
ಹೃದಯದಲ್ಲೇನೋ ಸಂಚಾರ
ಸೌಂದರ್ಯದ ಸುಗಮ ಎಲ್ಲೆಲ್ಲು
ತಿಳಿ ಸಂಜೆಯ ನೆನಪು ನನ್ನಲ್ಲೂ!

ಆಗಷ್ಟೇ ಬರೆದಿಟ್ಟುಕೊಂಡ ಕವನವಿದು. ಡೈರಿ-ಯಲ್ಲಿ ಉಳಿಯಿತು. ಇದನ್ನ ಕವನ ಅಂತಾರ? ನೆನಪಾಗಿದ್ದು ನಾನು ೭ನೆ ತರಗತಿಯಲ್ಲಿದ್ದಾಗ ಬರೆದ ನನ್ನ ಮೊದಲನೇ ಕವನ. "ಅಮ್ಮ". ಈ ಕವನ ನಮ್ಮ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪ್ರತಿ ವರ್ಷವೂ ಶಾಲಾ ವಾರ್ಷಿಕೋತ್ಸವ ನಡೆಯುತಿದ್ದದ್ದು ಬೆಂಗಳೂರಿನ ಪ್ರಸಿದ್ದ ಟೌನ್ಹಾಲಿನಲ್ಲಿ. ವಾರ್ಷಿಕ ಪುಸ್ತಕವನ್ನು ಬಿಡುಗಡೆ ಮಾಡಿದ್ದ ಮುಖ್ಯಾತಿಥಿಗಳು ವೇದಿಕೆಯ ಮೇಲೆ, ಎಲ್ಲರ ಮುಂದು ನನ್ನ ಕವನ ಮೆಚ್ಚಿ ಓದಿದ್ದರು. ಆ ದಿನ ನನಗರಿವಿಲ್ಲದ ಒಂದು ಖುಷಿ. ನನ್ನ ಹಳೆಯ Geometry ಪುಸ್ತಕದ ಹಾಳೆಗಳ ಮೇಲೆ ಕವನ ಬರೆಯಲು ಶುರುವಿಟ್ಟೆ. ಆ ಹಾಳೆಗಳನ್ನೆಲ್ಲಾ ಪುಸ್ತಕದಿಂದ ಬಿಡಿಸಿ - ಒಂದು ಗಟ್ಟಿಯಾದ ಫೈಲಿನೊಳಗೆ ಸೇರಿಸಿಟ್ಟೆ. ಇದುವರೆಗೂ ಆ ಫೈಲನ್ನು ಯಾರಿಗೂ ತೋರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಪ್ರೇರಣೆ ಯಾರಿಂದ ಯಾವಾಗ ಹೇಗೆ ದೊರೆವುದೋ! ಅದಕ್ಕೆ ವಿಪರೀತವಾದ ಶಕ್ತಿ ಇದೆ ಅನ್ನೋದು ನನ್ನ ನಂಬಿಕೆ.


ಕನ್ನಡ ಅಂದ್ರೆ ಒಲವು, ಅಭಿಮಾನ! ಮಾತೃಭಾಷೆ ತೆಲುಗು! ಸ್ನೇಹಿತರೆಲ್ಲರೂ ಹಿಂದಿ - ರಾಜಸ್ತಾನಿ - ಗುಜರಾತಿನವರು, ನೆರೆ -ಹೊರೆಯವರು ಅಂದ್ರವಾಲ್ಳು! ನರ್ಸರಿಯಿಂದ ಓದಿದ್ದು ಇಂಗ್ಲಿಷ್ ಮೀಡಿಯಂನಲ್ಲಿ - ಅಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಅಷ್ಟಕ್ಕಷ್ಟೇ! ಆದರೇನಂತೆ ಕನ್ನಡ ಇಷ್ಟಪಡೋಕೆ ಕನ್ನಡವೆ ಮಾತೃಭಾಷೆ ಆಗಬೇಕೆ?.... ನಾನು ಅವರ ಅರ್ಧಾಂಗಿ - ಅವರು ಕನ್ನಡದವರು - ನಾನು ಕನ್ನಡತಿ, ಇಷ್ಟು ಸಾಕೆ?

Wednesday, February 22, 2012

ಕನ್ನಡದೂರಿನ ಕನ್ನಡತಿ ನಾನು.......



೨೦೦೮ ನವೆಂಬರ್ ತಿಂಗಳಲ್ಲಿ,

- ೫ ವರ್ಷಗಳ ಕಾಲ ಯೋಕೊಗಾವ ಇಂಡಿಯಾದಲ್ಲಿ ಕೆಲಸ ಮಾಡಿ ಆಗಷ್ಟೇ ಆಸಿಪೆಕ್ ಅನ್ನುವ ಕಂಪನಿ ಒಂದರ ಚೇರ್ಮನ್ನಿಗೆ ಅಸಿಸ್ಟೆಂಟ್‌ಆಗಿ ಸೇರಿದ್ದೆ.
ಅದುವರೆಗೂ ಆರ್ಕುಟ್ನ ಪರಿಚಯ ನನಗಿರಲಿಲ್ಲ. ನಿಜ ಹೇಳಬೇಕಂದ್ರೆ ಆರ್ಕುಟ್ ಅನ್ನುವ ಪದ ಕೇಳಿಯೇ ಇರಲಿಲ್ಲ. ಕಾರಣ ಇಷ್ಟೇ, - ಯಾವುದೇ ಸಾಮಾಜಿಕ ಅಂತರ್ಜಾಲಗಳ ಬಳಕೆ ಯೋಕೊಗಾವದ ಕೆಲಸಗಾರರಿಗೆ ಲಭ್ಯವಿರಲಿಲ್ಲ. ಆಸಿಪೆಕ್‌ಗೆ ಸೇರಿದ ಮೊದಲೆರಡು ದಿನಗಳಲ್ಲಿ ನನಗೆ ಆತ್ಮೀಯತೆ ತೋರಿದವರು ವನಜ ಹಾಗೂ ರಜನಿ. ಮೂಲತಃ ಕೇರಳದವರು! ಬೆಂಗಳೂರಿನ ವಾಸ ಇವರಿಗೆ ಅಷ್ಟಿಷ್ಟು ಕನ್ನಡ ಮಾತನಾಡೋದನ್ನ ಕಲಿಸಿಯೇ ಇತ್ತು.

ಉತ್ತರ-ಭಾರತೀಯರು, ಆಂಗ್ಲೋ-ಭಾರತೀಯರು ಹಾಗು ತಮ್ಮ ಇಂಟರ್ನ್-ಶಿಪ್ ಮಾಡಲು ಬಂದ ಹೊರ ದೇಶದವರೇ ಕೂಡಿದ್ದ ಆ ಸಂಸ್ಥೆಯಲ್ಲಿ ನನ್ನವರಂತೆ ನನಗೆ ಕಂಡಿದ್ದು ರಜನಿ ಹಾಗು ವನಜ.

೫ ವರ್ಷಗಳು ಅಂದರೆ - ಸುಮಾರು ೧೮೦೦ಕ್ಕೂ ಹೆಚ್ಚು ದಿನಗಳ ಕಾಲ ಯೋಕೊಗಾವದಲ್ಲಿ ಕೆಲಸ ಮಾಡಿದ್ದೆ! ಸಾವಿರಕ್ಕೂ ಹೆಚ್ಚು ಮಂದಿ ಇದ್ದ ಆ ಸಂಸ್ಥೆಯಲ್ಲಿ - ಅನೇಕ ಸ್ನೇಹಿತರು! ನನ್ನ ಸ್ನೇಹಿತರನ್ನ ಅಗಲಿದ ನೋವು ಇನ್ನು ಹಸಿಯಾಗೆ ಇದ್ದ ದಿನಗಳವು! ಮುಖ ಮನದ ಕನ್ನಡಿ ಎನ್ನುವ ಹಾಗೆ -ನನ್ನ ಮುಖದಲ್ಲಿ ಆ ಅಗಲಿಕೆಯ ಛಾಯೆ ಆಗಾಗ ಎದ್ದು ಕಾಣುತಿತ್ತು. ಇದನ್ನ ಗಮನಿಸಿದ ರಜನಿ, ಆರ್ಕುಟ್ ಅನ್ನುವ ಅಂತರ್ಜಾಲದ ನೆಲೆಯೊಂದನ್ನು ಪರಿಚಯಿಸಿದಳು. ನನಗಾಗಿ ಆರ್ಕುಟ್ನಲ್ಲಿ ಒಂದು ಖಾತೆ ಸಹ ತೆರೆದು ಕೊಟ್ಟಳು! ರಜನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ - ಕಳೆದ ಉಳಿದ ಸ್ನೇಹಿತರನ್ನೆಲ್ಲ ಗುಡ್ಡೆ ಹಾಕಿಕೊಂಡೆ. ಅಬ್ಬ! ಸ್ನೇಹಕ್ಕೆ ಸ್ನೇಹವೇ ಸಾಟಿ! ಮರುಕಳಿಸಿತು ನನ್ನಲ್ಲಿ ಕುಗ್ಗಿದ್ದ ಉತ್ಸಾಹ ಹಾಗು ಹುರುಪು.

ಆರ್ಕುಟ್ ಏನಿದು?:
ಹೀಗೆ ಆರ್ಕುಟ್‌ನ ಒಳಗೆ ಧುಮುಕಿ ಇದರ ಸರಿ-ತಪ್ಪು-ಒಪ್ಪುಗಳನ್ನ ಜಾಲಾಡಿದೆ! ಆಗ ನನಗನಿಸಿದ್ದು, - ಅಂತರ್ಜಾಲ... ಹಂತ ಹಂತವಾಗಿ ತನ್ನ ಬಲೆಗೆ ಸಿಲುಕಿಸುವ ಜಾಲವೇ ಸರಿ ಎಂದು. ಇದನ್ನ ಒಳಿತಿಗಾಗಿ ಉಪಯೋಗಿಸುವವರು ಎಷ್ಟು ಮಂದಿ ಇದ್ದಾರೋ - ಕೆಡುಕಿಗೆ೦ದೆ ಬಳಸುವವರೂ ಅಷ್ಟೇ ಮಂದಿ! ಸ್ಪಾಮ್ / ವೈರಸ್ / ಹ್ಯಾಕಿಂಗ್ ನಿಂದ ಕೂಡಿ ನಮ್ಮ ಕ೦ಪ್ಯೂಟರ್ ಅಲ್ಲದೆ ಮನಸ್ಥಿತಿಯನ್ನು ಕದಡುವ ಶಕ್ತಿ ಈ ಜಾಲಕ್ಕಿದೆ. ಅದೇನೇ ಇರಲಿ ನಮ್ಮ ಜೋಪಾನ ನಮ್ಮ ಕೈಯಲ್ಲಿರಬೇಕು ಅನ್ನುವ ದೊಡ್ಡವರ ಮಾತು ನೆನಪಾಗಿತ್ತು.


ನನ್ನ ಹುಡುಕಾಟದ ಮಧ್ಯೆ ಆರ್ಕುಟ್‌ನ ಮತ್ತೊಂದು ವಿಶೇಷ ಕಂಡೆ! ಅದೇ ಸಮುದಾಯಗಳು / ಕಮ್ಯುನಿಟಿಗಳು. ಅಲ್ಲಿ ಪ್ರತಿ ಆಶಯಕ್ಕೊಂದು ಸಮುದಾಯ, ಪ್ರತಿ ಭಾಷೆಗೊಂದು ಸಮುದಾಯ, ಇಷ್ಟ - ಕಷ್ಟಗಳಿಗೊಂದು ಸಮುದಾಯ, ಪ್ರೇಮಕ್ಕೆ - ಪ್ರಣಯಕ್ಕೆ ಒಂದೊಂದು ಸಮುದಾಯ, ಬೇಜಾರಿಗೊಂದು - ಸಂತಸಕ್ಕೊಂದು ಸಮುದಾಯ.... ಹೇಳಬೇಕೆಂದರೆ ಮನದಲ್ಲಿ ನೆನೆಸಿದ ಪ್ರತಿಯೊಂದು ಅಂಶಗಳಿಗೆ ಅಲ್ಲೊಂದು ಸಮುದಾಯವಿತ್ತು. ಇದೊಂದು ಅಚ್ಚರಿಯಂತೆ ಕಂಡಿತ್ತು ಅಂದು.
ನನಗಿಷ್ಟವಾದ ಸಮುದಾಯಗಳಿಗೆಲ್ಲ ನಾನು ಸದಸ್ಯೆಯಾದೆ, - ಬಡ ಮಕ್ಕಳ ಅಭಿವೃದ್ದಿ, ಹೆಣ್ಣು ಮಗುವನ್ನು ಉಳಿಸಿ, ವಯಸ್ಸಾದ ಜೀವಗಳಿಗೆ ಬೆಂಬಲ,ಸೋನು ನಿಗಮ್ ಫ್ಯಾನ್ ಕ್ಲಬ್, ಕನ್ನಡ ಹಾಡುಗಳು, ಚಿತ್ರತಾರೆ ಕೊಂಕೋಣ ಸೇನ್, ಸೂರ್ಯ, ಆರ್ ಕೆ ನಾರಾಯಣ್, ರಂಗಶಂಕರ ..... ಹೀಗೆ ಅನೇಕ ಅನೇಕ ಸಮುದಾಯಗಳಿಗೆ ಸದಸ್ಯೆಯಾದೆ. ಇಲ್ಲಿ ನಡೆಸುವ ಕಾರ್ಯಚಟುವಟಿಕೆಗಳನ್ನ ಗಮನಿಸಿದೆ. ಆರ್ಕುಟ್ ಬಗ್ಗೆ ಇದಿಷ್ಟು ತಿಳಿದುಕೊಂಡೆ.

ಇನ್ನು ಆಸಿಪೆಕ್ನಲ್ಲಿ :

ಕನ್ನಡದಲ್ಲಿ ನನ್ನ ಹೆಸರಿನ ನಾಮಫಲಕ ಬರೆದು ಹಾಕಿಕೊಂಡಿದ್ದೆ. "ಜೊತೆಯಲಿ ಜೊತೆ - ಜೊತೆಯಲಿ ಇರುವೆನು ಹೀಗೆ ಎಂದು" ಅಂತ ಕನ್ನಡ ಹಾಡಿನ ರಾಗವನ್ನು ಮನಸಲ್ಲಿಯೇ ಗುನಗುನಿಸಿದ್ದೆ! ಇದನ್ನು ಕೇಳಿದ್ದ ರಜನಿ - ವನಜ, "ಕನ್ನಡ ಹಾಡು ಹಾಡ್ತೀಯ ಗುಡ್ ಗುಡ್" ಅಂದಿದ್ದರು. ಸುಮಾರು ಕನ್ನಡ ಹಾಡುಗಳನ್ನು ಹಾಡಿಸಿಕೊಂಡಿದ್ದರು. ಹಾಡುವ ಮೊದಲು ಸಾಲುಗಳ ಅರ್ಥವನ್ನು ಹೇಳುತಿದ್ದ ಕಾರಣ ಅವರಿಬ್ಬರಿಗೂ ಆ ಹಾಡುಗಳು ಇಷ್ಟವಾಗತೊಡಗಿದವು! ಅದು ಯಾವ ಮಟ್ಟಿಗೆ ಇಷ್ಟವಾಗಿತ್ತೆಂದರೆ "ಅವರುಗಳ ಕನ್ನಡ ಫೇವರಿಟ್" ಹಾಡುಗಳ ಪಟ್ಟಿ ಸಹ ಮಾಡಿಕೊಂಡಿದ್ದರು. ಅವರಿಗಿಷ್ಟ ಬಂದಾಗಲೆಲ್ಲ "roops - ಪ್ಲೀಸ್ ಸಿಂಗ್ ದಿಸ್, ಸಿಂಗ್ ದಟ್" ಅಂತ ತಮ್ಮ ಇಷ್ಟವಾದ ಕನ್ನಡ ಹಾಡುಗಳನ್ನ ಹಾಡಿಸುತ್ತಿದ್ದರು.
ನಾನೇನು ಮಹಾನ್ ಗಾಯಕಿಯಲ್ಲ! ನಾನು ಯಾವ ಮಟ್ಟಿಗೆ ಹಾಡಬಲ್ಲೆ ಎಂದು ಕೇಳದಿರಿ - ಇದೊಂದು ಗೋಜಲು ಪ್ರಶ್ನೆ! ಆ ಸಮಯದಲ್ಲಿ ಕನ್ನಡ ತಿಳಿಯದವರ ಮುಂದೆ ನಾನು ಹಾಡುತಿದ್ದ ಹಾಡುಗಳು ನನಗೆ ಕನ್ನಡದ ಮೇಲಿನ ಅಭಿಮಾನವನ್ನು ಹೆಚ್ಚಿಸುತ್ತಿತ್ತು ಮಾತ್ರ.


ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಊಟ ಮುಗಿಸಿ ನನ್ನ ಟೇಬಲ್ಲಿಗೆ ಅಂಟಿಕೊಂಡಿದ್ದ ನೋಟೀಸ್ ಬೋರ್ಡ್ ಒಂದರ ಮೇಲೆ ಹೀಗೆ ಗೀಚಿಕೊಂಡೆ!

ಕನ್ನಡದೂರಿನ ಕನ್ನಡತಿ ನಾನು!
ಹೊಳೆಯುವ ಮೂಗುತಿ ಹೇಳದೆ ಏನು?

ಹೀಗೆ ಬರೆಯಲು ಕಾರಣ? ಮತ್ತದೇ ಲಾಜಿಕ್! ಕಾರಣ ಏಕೆ ಬೇಕು... ಬರೆದೆನೆಂದರೆ ಹೀಗೆ ಬರೆಯಬೇಕನಿಸಿತ್ತು ಅಷ್ಟೇ!
ಇದನ್ನು ನೋಡಿದ ವನಜ,- "ಯಾನಿದು {ಏನಿದು} ರೂಪ, ವಾಟ್ ಈಸ್ ದೀಸ್?" ಅಂತ ಕೇಳಿದ್ದೆ ತಡ, "ವೇಟ್ - ಲೆಟ್ ಮಿ ಟೆಲ್ ಯು"... ಅಂತ ಇದರ ಅರ್ಥ ಅವಳಿಗೆ ಅರ್ಥೈಸಿದೆ! "ವಃ ವಃ ಟೂ ಗುಡ್, ವಾಟ್ ಯು ಆರ್ ಪೊಯೆಟ್ಟು?" ಅಂತ ಆಶ್ಚರ್ಯವಾಗಿ ರಾಗವಾಗಿ ಕೇಳಿದ್ದಳು. "Nopes, i just scribble.. & if you call me a poet! either I am lucky to have met you or you are a Sweet Dumb!" [ಇಲ್ಲಮ್ಮ! ಹೀಗೆ ಅದು ಇದು ಗೀಚುವ ಅಭ್ಯಾಸ. ನೀನು ನನ್ನ ಕವಿ ಅಂತ ಕರೆದರೆ, -ನಿನ್ನ ಬೇಟಿ ಆದದ್ದು ನನ್ನ ಅದೃಷ್ಟ ಇರಬೇಕು ಅಥವಾ ನೀನು ಮುದ್ದು ದಡ್ಡಿಯಾಗಿರಬೇಕು!].....


ಈ ಮಾತುಕತೆಯೇನೋ ಅಲ್ಲಿಗೆ ಮುಗಿದಿತ್ತು. ಆದರೆ ಇದರ ಪರಿಣಾಮ ಮಾತ್ರ ನನ್ನ ತಲೆಯಲ್ಲಿ ಕನ್ನಡಕ್ಕಾಗಿ ಮತ್ತೊಂದು ಸಸಿಯನ್ನು ನೆಟ್ಟಿತ್ತು! ಏನದು ...?

Sunday, February 19, 2012

ಪ್ರದಕ್ಷಿಣೆ:

ಕೆಲವೊಂದು ಪದಗಳು ಮನಸ್ಸಿಗೆ ಇಷ್ಟವಾಗಿ ಹೋಗ್ತದೆ ಇಷ್ಟವಾಗದೇ ಹೋದದ್ದನ್ನು ಆಚೆ ತಳ್ಳಿಬಿಟ್ಟರೆ ಮನಸ್ಸು ನಿರಾಳ!. ಆದರೆ ಏನೇ ಆದರೂ ಇಷ್ಟ ಅಗ್ಬೇಕಂದ್ರೆ ಅದಕ್ಕೆ ಕಾರಣಗಳಿರಬೇಕ? ನನ್ನ ಮಟ್ಟಿಗೆ ಕೆಲವು ಪದಗಳು ಅಥವಾ ಘಟನೆಗಳು ಇಷ್ಟವಾಗಲು ಕಾರಣಗಳಿದ್ದರೆ - ಇನ್ನು ಕೆಲವಕ್ಕೆ ಕಾರಣವೇ ಇರೋಲ್ಲ.


ಮನಸ್ಸಿಗೆ ತುಂಬಾ ಇಷ್ಟವಾಗುವ ಕೆಲವು ಪದಗಳಲ್ಲಿ ಈಗಷ್ಟೇ ಸೇರ್ಪಡೆಯಾದ ಪದ 'ಪ್ರದಕ್ಷಿಣೆ'!
ಹೆಸರಿನಲ್ಲೇ ಭಕ್ತಿ, ಶ್ರದ್ಧೆ, ವಿನಯ ಎಲ್ಲವೂ ಒಮ್ಮಿಂದೊಮ್ಮೆಲೆ ಮೂಡಿಸುವ ಪದ ಅನಿಸಿತು.
ಮೊದಲಬಾರೀ ಈ ಹೆಸರು ಕೇಳಿದಾಗ..ನಮ್ಮೊಳಗೇ ಎಲ್ಲೋ ಇರುವ ಪದವಲ್ಲವೇ ಅನಿಸಿತು!!. ಏಕೆಂದರೆ ಕೆಲವಕ್ಕೆ ಕಾರಣಗಳೇ ಇಲ್ಲದ ಹಾಗೆ, ಮನುಷ್ಯ ತನ್ನೊಳಗೆ ಅರಿವಿದ್ದೋ, ಅರಿವಿಲ್ಲದೆಯೋ ಕೆಲವು ಭಾವನೆಗಳಿಗೆ 'ಪ್ರದಕ್ಷಿಣೆ' ಹಾಕುತ್ತಲೇ ಇರುತ್ತಾನೆ.

ಪ್ರದಕ್ಷಿಣೆ ಹೆಸರು ಕಿವಿಗೆ ಬಿದ್ದಾಗ, ಒಂದು ಗರ್ಭಗುಡಿಯ ಸುತ್ತ ಹೋಗಿ ಬಂದ ಭಾವನೆ! ದೇವಸ್ಥಾನಕ್ಕೆ ಹೋಗದೆ ದೇವರ ಸುತ್ತ ಪ್ರದಕ್ಷಿಣೆ ಹಾಕಿದ ಭಾವನೆ..! ಈ ಭಾವನೇನೆ ಇರಬಹುದು - ಈ ಹೆಸರು ಇಷ್ಟವಾಗಲು ಕಾರಣ.

'ಜಗದಗಲ ಒಂದು ಸುತ್ತು' ...ಸ್ನೇಹಿತರೇ, ಒಂದೇ ಸುತ್ತು ಸಾಕೆ.. ನನ್ನನ್ನು ಬಿಟ್ಟರೆ ನನ್ನ ವಾನರ ಸೇನೆಯೊಂದಿಗೆ ರಿಂಗ-ರಿಂಗ-ರೋಸೆಸ್ ಅಂತ ಸುತ್ಮೇಲೆ ಸುತ್ತು-ಸುತ್ತ್ಮೇಲೆ ಸುತ್ತು.. ಹೊಡೆಯುತಿದ್ದೆನೇನೋ!

ಸಧ್ಯಕ್ಕೆ ಜಗದಗಲ ಒಂದು ಸುತ್ತು ಅನ್ನುವಾಗ ಕಲ್ಪನೆಯಾಗಿದ್ದು, ಅದೊಂದು ಸಣ್ಣ ಭೂ-ಚೆಂಡಿನಂತೆ, ಆ ಭೂಮಿಯನ್ನ ತಬ್ಬಿಕೊಂಡಂತೆ, ಬಿರಬಿರನೆ ಓಡಿ ಒಂದು ಸುತ್ತು ಹೊಡೆದು ನಾನೇ ಫಸ್ಟ್ ಅಂತ ಏದುಸಿರು ಬಿಟ್ಟು ಹೇಳಿಕೊಂಡಂತೆ, ಇದಕ್ಕೂ ಮೀರಿ ಅನಿಸಿದ್ದು, 'ಹೇಳಿದಷ್ಟು ಸುಲಭವಾಗಿ, ವಾಸ್ತವತೆಯಲ್ಲಿ ಈ ಜಗತನ್ನು ಇಷ್ಟು ಬೇಗ ಒಂದು ಸುತ್ತು ಹೊಡೆದು ಬರಬಹುದೇ ಅಂತ.
ಒಂದೊಂದು ಜೀವಕ್ಕೆ ಒಂದೊಂದು 'ಜಗತ್ತು', ಒಬೊಬ್ಬರ ಭಾವನೆಯಲ್ಲಿ ಒಂದೊಂದು 'ಜಗತ್ತು' - ಈ ಪದಕ್ಕೂ ಪರಿಮಿತಿ ಎಲ್ಲಿದೆ? ಇದರ ಒಳಾರ್ಥ ಎಲ್ಲೆಲ್ಲಿಯ ತನಕ ಸೀಮಿತ?-ಹೌದು, ಸೀಮಾತೀತ!!

ಅದೇನೇ ಅದರು ಜಗತ್ತು ಕೈಗೆಟುಕಿಸಿದಂತ ಅನುಭವ ಕೊಟ್ಟಿದ್ದು ಈ ಪ್ರದಕ್ಷಿಣೆಯ 'ಜಗದಗಲ ಒಂದು ಸುತ್ತು'..
ನವಿರಾದ ನೆಂಟಸ್ತಿಕೆ ಬೆಳೆಯುತ್ತಿದೆ ಈ ಪದಗಳ ಜೊತೆ, ಈ ತಾಣದ ಜೊತೆ.
ನನಗರಿವಿಲ್ಲದೆ ಸುಲಭವಾಗಿ ಈ ಭಾವನೆಗಳನ್ನ ಮೂಡಿಸಿ ಪ್ರದಕ್ಷಿಣೆ!

ನಮ್ಮ ತಂಡವನ್ನು ನಾವು ಒಂದು ಸಮುದಾಯ ಎಂದು ಕರೆದುಕೊಳ್ಳಲು, ಅಂತರಜಾಲವೂ ಕಾರಣ ಬಿಡಿ. 3k ಅಂದರೇ ಅಚ್ಚರಿ ಕೆಲವರಿಗೆ. ಕನ್ನಡದಲ್ಲಿ ಮೂರುಖ ಎಂದು ಓದಿ, ನಮ್ಮನ್ನು ಲೀಲಾಜಾಲವಾಗಿ ಮತ್ತು ಅಕಾರಣವಾಗಿ(?!) ಮೂರ್ಖರ ಪಟ್ಟಿಗೆ ಸೇರಿಸಿಬಿಡುತ್ತಾರೆ. ಅದು 3k ಅಂದರೆ ಕನ್ನಡ-ಕವಿತೆ-ಕವನ ಎಂದು ಹೇಳಿದರೆ ಮುಸಿ ಮುಸಿ ನಗುತ್ತಾರೆ!!. ಕವಿತ-ಕವನ.....ಏನು ವ್ಯತ್ಯಾಸ ಎಂದು ಕೇಳಿದರೆ, ಕೇಳಿದವರ ಜೊತೆಗೆ ನಾವೂ ಮೂರ್ಖರೇ......?? ಗೊತ್ತಿಲ್ಲಪ್ಪ.

ಆದರೆ ನಾನಂತೂ ಮೂರ್ಖರ ತಂಡದ ನಾಯಕಿ- 'ಮಹಾನ್ ಮೂರ್ಖ 'ಎಂದೇ ಪ್ರಸಿದ್ದ. ಆದರೆ ನಮ್ಮ ಸುತ್ತಲೂ ಹೀಗೆ 'ಪ್ರದಕ್ಷಿಣೆ' ಅರ್ಥ ಕಂಡುಕೊಂಡಿದ್ದರೆ ಅದಕ್ಕೆ ನಾವು,ಕವಿತೆ-ಕವನಕ್ಕಿಂತಲೂ ಕನ್ನಡ ಪ್ರೀತಿಯೇ ದೊಡ್ಡದು ಎಂದು ನಂಬಿದ್ದೇವೆ-ಆ ಮೂಲಕ ನಾವು ಮೂರ್ಖರಲ್ಲ ಸ್ವಾಮಿ.

ನಮ್ಮ ಬಂಡವಾಳದ ಬಗ್ಗೆಯೂ ಕುತೂಹಲ ಸಹಜ. ನಮ್ಮಲ್ಲೂ 'ಬಂಡವಾಳಶಾಹಿ'ಗಳಿದ್ದಾರೆ. ಮೂಲ ಬಂಡವಾಳ-ಕನ್ನಡ ಪರ ಮನಸ್ಸು. ಅದನ್ನು ತಂದು ಇಲ್ಲಿ ಹಾಕಿದರೆ ಮುಗಿಯಿತು. ಮತ್ತೆ ನಮ್ಮ ಸದಸ್ಯರುಗಳ ಭಾವನೆಗಳೇ ಇದರ ಬಂಡವಾಳ............!
ಆ ಭಾವನೆಗಳ ಖಜಾನೆ ಹೊತ್ತು ಪ್ರದಕ್ಷಿಣೆ ಹಾಕಲು ಸಜ್ಜಾಗಿರುವೆ. ನಿಮ್ಮ ಪ್ರೀತಿ ಬಯಸುತ್ತ........ ಪ್ರೀತಿಯೊಂದಿಗೆ ಮೆಚ್ಚುಗೆಯೂ ಇರಲಿ...ತಪ್ಪಿದಲ್ಲಿ ತಿದ್ದಲು ಮರೆಯದಿರಿ.....ನಾವು ಮೂರ್ಖರಾದರೂ ನೀವು ಅಲ್ಲವಲ್ಲ......??

ಅಂದ ಹಾಗೆ...ಇದು ಮುಗಿಯುವ ಕಥೆಯಲ್ಲ......ಕಥೆಯ ಆರಂಭ ಅಷ್ಟೇ.....ಕಥೆ ಮುಂದೆಯೂ ಇದೆ.

ಬಾಳೊಂದು ಭಾವಗೀತೆ

ನಿಮ್ಮೊಂದಿಗೆ

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...