Wednesday, March 5, 2014

ಹೀಗೊಂದು ಮಹಿಳಾ ದಿನಾಚರಣೆ!!

ಈ ದಿನ ಎಂದಿಲ್ಲದ ಕೆಲಸ ಮನೆಯಿಂದಲೇ ಮೊದಲಾಗಿತ್ತು, ಅನಿರೀಕ್ಷಿತ ನೆಂಟರು - ಅತಿಥಿ ದೇವೋಭವ! ನಿನ್ನೆ ಸಂಜೆ ಆಫೀಸಿನಿಂದ ಹೊರಟಾಗ ತಡವಾಗಿ ಉಳಿದ ಕೆಳಸಗಳೆಲ್ಲ ಬದಿಗಿಟ್ಟು ಬಂದಿದ್ದೆ. ಈ ದಿನ ಮನೆಯಿಂದಲೇ ವಿಳಂಬ. ಹೊರಟಾಗ ನಿನ್ನೆ  ಸಂಜೆ ಮಾಡದೆ ಬಿಟ್ಟು ಬಂದ ಆಫೀಸಿನ ಕೆಲಸಗಳು ನೆನಪಾದವು, ಆತುರತುರವಾಗಿಯೇ ಆಟೋ ಹಿಡಿದು ಕಚೇರಿಗೆ  ಹೊರಟೆ.

Happy Womens Day 2012 04

ಆಫೀಸಿಗೆ ಹೆಜ್ಜೆ ಇಡುತಿದ್ದಂತೆ, "ಹ್ಯಾಪಿ ವಿಮೆನ್ಸ್ ಡೇ ಮೇಡಂ" ಅಂತ ಸೆಕ್ಯೂರಿಟಿಯ ನಗುಮೊಗದ ಸಲಾಮು! ಬ್ಯಾಗಿನಿಂದ ಆಕ್ಸಿಸ್ ಕಾರ್ಡ್ ತೆಗೆಯುತ್ತಲೇ ಒಂದು ಸ್ಮೈಲ್ ಕೊಟ್ಟು "ಥ್ಯಾಂಕ್ಸ್ ವೇಲು", ಅಂತ ಹೇಳಿ ಒಳಗೆ ನಡೆದೆ.  ಈ ದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ!  ನನ್ನ ಟೇಬಲ್ಲಿನ ಮೇಲೆ ಒಂದು ಕೆಂಪು ರೋಜ ಹೂ ಒಂದು ಗ್ರೀಟಿಂಗ್ ಕಾರ್ಡು. "Happy Women's Day To Smt. Roopa Satish, from Admin Staff" ಅಂತ ಬರೆದಿತ್ತು. ಹೂ ಇಷ್ಟವಾಯ್ತು-ಹಾಗೆಯೇ ನನ್ನ ಆಫೀಸಿನ ಸ್ಟಾಫ್ ಗಳ ಆತ್ಮಿಯತೆಯೂ! ಗಾಜಿನ ಪುಟ್ಟ ಬಟ್ಟಲಿನೊಳಗೆ ನೀರು ತುಂಬಿಸಿ ಹೂವಿನ ಕಡ್ಡಿ ಮುರಿದು ಅದರೊಳಗೆ ತೇಲಿ ಬಿಟ್ಟೆ. ಇನ್ನು ಮೇಲ್ ಬಾಕ್ಸ್ ತುಂಬಾ ವಿಶೇಷವಾದ ಶುಭ ಸಂದೇಶಗಳು. ಅದರಲ್ಲಿ ಮನಸೆಳೆದ ಒಂದು ಸಂದೇಶ ನಮ್ಮ ಆಫೀಸಿನ ಹಿರಿಯರಲ್ಲಿ ಒಬ್ಬರಾದ ಜನರಲ್ ಮ್ಯಾನೇಜರ್ (GM) ರವರದ್ದು. ಹೆಣ್ಣು ಸಮಾಜದ ಕಣ್ಣು ಎನ್ನುತ್ತ ತಾಯಿ-ಮಗಳು-ಪ್ರೇಯಸಿ-ಅಕ್ಕ-ತಂಗಿಯರ ಪ್ರತಿರೂಪಗಳ ಬಗ್ಗೆ ವಿಶೇಷವಾಗಿ ವಿವರಿಸಿ ಬರೆದ ಆ ಸಂದೇಶ ಓದುವಾಗ "ಅಟ್ಟದ ಮೇಲೆ / ಬೆಟ್ಟದ ಮೇಲೆ" ಕುಳಿತ ಭಾವನೆಯೇನೋ ಮೂಡಿದ್ದು ನಿಜ. ಆದರು ಚುಟುಕಾಗಿ "ಧನ್ಯವಾದ ಸರ್" ಅಂತ ಉತ್ತರಿಸಿ ಮುಗಿಸಿದೆ. ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಕಂಪನಿಯ GM ರವರಿಂದ ಒಂದು ಆಹ್ವಾನ, - "ಆಫೀಸಿನ ಎಲ್ಲಾ ಹೆಣ್ಣುಮಕ್ಕಳಿಗೂ ಈ ದಿನ ರೆಸಿಡೆನ್ಸಿ ಹೋಟೆಲಿನಲ್ಲಿ ಬುಫೆ ಲಂಚ್ ಕಂಪನಿಯವತಿಯಿಂದ" ಎಂದು.
ಆಫೀಸಿನ ಹತ್ತಿರದಲ್ಲೇ ಇದ್ದ ರೆಸಿಡೆನ್ಸಿ ಹೋಟೆಲ್ ನಲ್ಲಿ ಈ ದಿನ ಹೆಣ್ಣುಮಕ್ಕಳದ್ದೇ ಕಾರುಬಾರು. ಹೆಂಗೆಳೆಯರ ಈ ವಿಶೇಷ ಔತಣ ಕೂಟದಲ್ಲಿ GM ರವರ ಉದಾರ  ಮನೋಭಾವ, ವಿಶಾಲ ಹೃದಯ ಹಾಗು ಆತ್ಮೀಯ ಸಂದೇಶಗಳ ಕುರಿತಾಗಿಯೇ ಹೆಚ್ಚಿನ ಮಾತುಕತೆ. ನನ್ನ ಕಣ್ಣು ಮನಸೆಲ್ಲ ಅಲ್ಲಿದ್ದ ಚಿಕನ್ ಬಿರಿಯಾನಿಯ ಕಡೆಗೆ ಇದ್ದಿದ್ದು ಯಾರು ಗಮನಿಸಿರಲಾರರು, ಅಥವ ಗಮನಿಸಿದರೂ ಏನಂತೆ ಬಿರಿಯಾನಿ ತಿನ್ನದೇ ಹೋದರೆ - ಬಿರಿಯಾನಿಯಾದ ಕೋಳಿ ಬೇಜಾರು ಮಾಡಿಕೊಂಡೀತು. ಕೆಲಸವಿದ್ದ ಕಾರಣ ಊಟ ಮುಗಿಸಿ ಹೋಟೆಲಿನಿಂದ ಒಬ್ಬಳೆ ಆಫೀಸಿಗೆ ಬಿರಬಿರನೆ ಹೊರಟು ಬಂದೆ.

ಶೋನು ನಿಜಮ್ : ಹೇಳೋದೊಂಥರ - ಕೇಳೋದೊಂಥರ
ಕಿವಿಗೆ ಈಯರ್ ಫೋನ್ ಹಾಕಿಕೊಂಡು ಸೋಮೇಶ ಮೆಟ್ಟಿಲಿನ ಮೇಲೆ ಕುಳಿತಿದ್ದ. "ಹೋಯ್ ಸೋಮ ಯಾವ್ ಹಾಡು?" ಹುಬ್ಬೇರಿಸಿ ಕೇಳಿದೆ. ಇಡೀ ಆಫೀಸಿನಲ್ಲಿ ಕನ್ನಡ ಹಾಡುಗಳನ್ನ ಕೇಳುವ ಏಕೈಕ ಕ೦ದ ನಮ್ಮ ಆಫಿಸ್ ಬಾಯ್ ಸೋಮೇಶ. "ಹೇಳೋದೊಂಥರ ಥರ ಕೇಳೋದೊಂಥರ ಥರ ಹಾಡು, ಷೋಣು ನಿಜಮ್ ಮೇಡಂ" ಅಂದ. ನಗು ಬಂದರು ಸಾವರಿಸಿಕೊಂಡು, "ನಿನ್ನ ತಲೆ, ಅದು ಹೇಳಲೊಂಥರ ಥರ, ಕೇಳಲೊಂಥರ ಥರ ಕಣೋ, ಆಮೇಲೆ ಹಾಡಿರೋದು ಷೋಣು ನಿಜಮ್ ಅಲ್ಲ ಸೋನು ನಿಗಮ್, ಕೊಲೆ-ಕೊಲೆ ಮಾಡ್ಬಿಡ್ತೀನಿ ತಪ್ಪು ತಪ್ಪಾಗಿ ಹೆಸರನೆಲ್ಲ ಹೇಳಿದ್ರೆ ಗೊತ್ತಾಯ್ತ" ಅಂತ ಅವನ ಕಾಲೆಳೆದು ನನ್ನ ಸೀಟಿಗೆ ಬಂದೆ.

ಕಿತ್ತಳೆ ಹಣ್ಣು ಸುಲಿಯದಿದ್ದರೆ!!!
ಆಗಲೇ ಪಕ್ಕದ ರೂಮಿನಿಂದ ಜೋರಾಗಿ ಕೇಳಿ ಬರ್ತಿದ್ದ GM ರವರ ಮಾತುಗಳು ಬೇಡವೆಂದರೂ ಕಿವಿಯ ಮುಟ್ಟಿತು . ತೆಲುಗಿನಲ್ಲಿ ಹೆಂಡತಿಯನ್ನು ಕೀಳಾಗಿ ಕೆಟ್ಟ ಮಾತುಗಳಿಂದ ಬಯ್ಯುವುದು ಕೇಳಿದವು! ಮನೆಗೆ ಬಂದರೆ ನಾಕು ಬಾರಿಸಿ ಬಿಡುವೆ ಎಂದು ಅರಚುತಿದ್ದರು. ಕಾರಣ? ಇವರ ಊಟದ ಡಬ್ಬಿಯಲ್ಲಿದ್ದ ಸಂಡಿಗೆ ಸರಿಯಾಗಿ ಕರಿದಿರಲಿಲ್ಲ,  ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದಿರಲಿಲ್ಲ!!!!!  ಬಹುಶ ನಾನಿರುವುದು ಅವರಿಗೆ ತಿಳಿದಂತಿರಲಿಲ್ಲ. ಇವರ ಮಾತುಗಳನ್ನ ಕೇಳುತಿದ್ದಂತೆ ಇವರ ಮುಂದೆ ಹೋಗಿ ತಿನ್ದದೆಲ್ಲ ಕಕ್ಕಿಬಿಡುವ ಹಾಗೆ ಅನಿಸಿತ್ತು, ಆ ಹೂವು, ಗ್ರೀಟಿಂಗ್ ಕಾರ್ಡು, ಅವರು ಕಳಿಸಿದ್ದ ಮೇಲ್ ಎಲ್ಲವನ್ನು ಹರಿದು ಮುಖದ ಮೇಲೆ ಎಸೆದು ಬರಬೇಕೆನಿಸಿತು. ತನ್ನ ಮನೆಯ ದೀವಿಗೆ - ತನ್ನ ಮಡದಿ! ಸಮಾಜದಲ್ಲಿ ತನಗೆ ದೊರೆತ ಸ್ಥಾನ ಮಾನಗಳಲ್ಲಿ ಪಾಲುದಾರಳು, ಇವನ ಹೊರ ಪ್ರಪಂಚದ ಹಸಿ ಗುಟ್ಟುಗಳೆಲ್ಲ ತಿಳಿದೋ-ತಿಳಿಯದೆಯೋ ಇವನಿಗಾಗಿ ಜೀವ ತೇಯುವ ಶ್ರೀಮತಿ.  ತನ್ನ ಮನೆಯ ಸ್ತ್ರೀಯರನ್ನು ಗೌರವಿಸದೆ ಸಮಾಜದ ಮುಂದೆ ಧರಿಸುವ ಮುಖವಾಡದ ಇವರ ಬದುಕಿಗೆ ದಿಕ್ಕಾರವೆಸೆದೆ. 
ಇನ್ನೊಂದು ತಾಸಿನಲ್ಲಿ GM ರವರು ಎದ್ದು ಬಂದು, "ದಿಸ್ ವೀಕೆಂಡ್ ಐ ಆಮ್ ಟೂ ಬಿಜಿ ವಿಲ್ ಕ್ಲೀನ್ ಮೈ ಕಾರ್ ಅ೦ಡ್ ಗರಾಜ್" ಅಂತ ಯಾರಿಗೋ ಹೇಳಿಕೊಂಡು ರೋದಿಸುತ್ತಿರುವುದು ಕೇಳಿಬಂತು. ಮನೆ, ಕಾರು, ಮೋಟಾರು ಕ್ಲೀನ್ ಆಗುವ ಕೆಲಸವೇನೋ ಸರಿ ಸರ್, ನಿಮ್ಮ ಮನಸು ಕ್ಲೀನ್ ಆಗಲಿಕ್ಕೆ???

ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ
ಹೀಗಂದುಕೊಂಡು ಬಾಟಲಿಯ ನೀರನ್ನು ಪೂರ್ತಿಯಾಗಿ ಕುಡಿದು ಮುಗಿಸಿದೆ. ನನ್ನ ದೈನಿತ್ಯದ ಕೆಲಸ ಕಾರ್ಯಗಳ ನಡುವೆ ಆರ್ಕುಟ್ನ ನನ್ನ 3K-ಸಮುದಾಯಕ್ಕೆ ಆಗಾಗ ಬೇಟಿಯಾಗುವುದು ರೂಡಿ. ಈ ದಿನದ ಕವನಗಳ ಮೇಲೊಂದು ಕಣ್ಹಾಯಿಸಿ - ಮೆಚ್ಚುಗೆ ವ್ಯಕ್ತಪಡಿಸಿ - ಸಂತೃಪ್ತಳಾಗುವ ಈ ಹವ್ಯಾಸ ಮುದ ನೀಡಿತ್ತು. ಅನೇಕ ವಿಷಯಗಳ ಬಗ್ಗೆ ಕುತೂಹಲವೆಸಗುವ ಕವನಗಳ ನಡುವೆ ನಿಬ್ಬೆರಗಾಗಿ ನಿಂತ ಅನುಭವ. ಈ ದಿನದ ಕವನಗಳು ವಿಶೇಷವಾಗಿ ಹೆಣ್ಣಿನ ಕುರಿತು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕುರಿತು! ಈಗಷ್ಟೇ ಶುರುವಾದ ಈ ಸಮುಧಾಯ ಮುಕ್ತವಾಗಿ ಮಾತನಾಡುವ ಧೈರ್ಯ ಮಾಡಲು ಯತ್ನಿಸುತಿದ್ದೆ. ಹೇಳಬೇಕೆಂದರೆ ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. ಈ ಸ್ನೇಹ - ಈ ಬಂಧ ಎಲ್ಲಿಗೆ ಮುಟ್ಟುವುದೋ! ಇದರ ನಡುವೆ ಯಾರೋ "ರೂಪಕ್ಕ" ಅಂತ ಕರೆದಂಗಾಯ್ತು, ಯಾರದು? ಕಣ್ಣಾಲಿಗಳಲ್ಲಿ ಎರಡು ಬಿಂದು ಥಟ್ಟನೆ ಜಾರಿತ್ತು? ಹೆಚ್ಚಿಗೆ ಮಾತನಾಡದೆ ಆರ್ಕುಟ್ನಿಂದ ಹೊರಬಂದೆ. "ರೂಪಕ್ಕ" ಅನ್ನುವ ಶಬ್ದ ಬರೆ ಹೆಸರಾಗಿರಲಿಲ್ಲ...... ಮನದಾಳದಿ ಅವಿತ, ನಿತ್ಯ ಕಾಡುವ, ಧೂಳಿಡಿದ ನೆನಪುಗಳ ಮೇಲೆ ಬಿರುಮಳೆ ಸುರಿದಂತೆ! ಇನ್ನುಳಿದರ್ಧ ದಿನ ಭಾರವಾಯ್ತು! ಯಾಕೆ?

19 comments:

  1. ಶುಭಾಶಯಗಳ ಮುಖವಾಡದ ಹಿಂದಿನ ವಾಸ್ತವ ತಿವಿಯುವಂತಿದೆ. ಹೀಗಾಗಿ, ಸ್ವಲ್ಪ ಸಂಕೋಚ ಹಾಗು ಹೆದರಿಕೆಯಿಂದಲೇ ನಿಮಗೆ ವಿಲಂಬಿತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಕ್ಷಮೆ ಇರಲಿ.

    ReplyDelete
    Replies
    1. ಸುನಾತ್ ಸರ್,
      ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ್ಯವಾದಗಳು.
      ನೀವು ಹಿರಿಯರು, ನಮ್ಮನ್ನ ಆಶೀರ್ವದಿಸಿ ಸರ್ ಸಾಕು, ಉಳಿದದ್ದೆಲ್ಲ ತಾನಾಗೆ ನೆರವೇರುತ್ತದೆ.

      Delete
  2. ಹೊರಗಿನ ಮನುಷ್ಯ ರೋಜಾ ಹೂವಿನಂತೆ ಸಲೀಸಾಗಿ ನಟಿಸಬಲ್ಲ, ಅಂತರಂಗದಲ್ಲಿ ಜಗದ ನೋಟದಿಂದ ಅವಿತ ಮುಳ್ಳುಗಳು ಅವ್ಯಕ್ತ. ತುಂಬ ಮಾರ್ಮಿಕವಾದ ಬರಹ.

    ಬಿರಿಯಾನಿಯ ಬಗ್ಗೆ ಇನ್ನೂ ಅರ್ಧ ಪುಟ ಬರೆಯ ಬಹುದಿತ್ತು ಅಲ್ಲವೇ, ಕೋಳಿಯು ಕುರಿಗೂ ನ್ಯಾಯ ದೊರಕಿಸಿದಂತಾಗುತ್ತಿತ್ತು.

    ಈ ಸಾಮಾಜಿಕ ಮಾಧ್ಯಮದ ಸ್ನೇಹ ಬಂಧನಗಳು ಏನನ್ನೂ ಬಯಸದ ನಿಜವಾದ ಆತ್ಮೀಯ ಬಂಧನಗಳು. ಇಲ್ಲದಿದ್ದರೆ ಎಲ್ಲಿಯ ಪಲವಳ್ಳಿ ಮತ್ತು ಎಲ್ಲಿಯ 3K, ಯಾವ ಜನ್ಮದ ಮೈತ್ರಿ?

    (ಇನ್ನು ಮೇಲೆ ವಾರಕ್ಕೊಂದಾದರೂ ಮುಗಿಲು ತೇಲಲಿ)
    ಅಧಿನಾಯಕಿ Roopa Satish ಮೇಡಂ.

    ReplyDelete
    Replies
    1. ಬದರಿ ಯವರೆ,
      ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಪ್ರೀತಿಯ ಧನ್ಯವಾದ... :)
      ನಿಜ ಯಾವ ಜನ್ಮದ ಮೈತ್ರಿಯೋ ಇದು......
      ಇನ್ನು ಚಿಕನ್ ಬಿರಿಯಾನಿಯ ಬಗ್ಗೆ ಕೇಳಿದ್ದಿರಲ್ಲ, ಹೀಗೊ೦ದು ಪದ್ಯ ಬರೆದದ್ದು ನೆನಪಾಯ್ತು :)

      ನಿನಗಾಗಿ
      =====
      ಸಂತಸದ
      ದಿಸೆಯಲಿ
      ಬೇಸತ್ತ
      ಘಳಿಗೆಯಲಿ
      ನಿನ್ನ ಬೇಟಿ!

      ಹೊಸ ಬಗೆಯ
      ಖುಷಿಯಾಗಿ,
      ಹೊಸ ಬಗೆಯ
      ರುಚಿಯಾಗಿ
      ನಿನಗೆ ನೀನೆ
      ಸಾಟಿ !

      ನಿನಗಾಗಿ
      ನನ್ನಲ್ಲಿರುವ
      ಪ್ರೀತಿ,
      ಮೋಹ
      ದಿನದಿಂದ
      ದಿನಕ್ಕೆ
      ಹೆಚ್ಚುತಲೇ
      ಇದೆ!

      ಓ ನನ್ನ ಮುದ್ದು.... ಕೋಳಿಯೆ.....
      ಇದೋ ನಿನಗೊಂದು ಉಮ್ಮ್ಹ .....!!

      Delete
  3. ಅಪರಿಚಿತರ ನಡುವಿನ ಸಂಭಾಷಣೆ ಒಂದು ರೀತಿಯ ಅನಿರೀಕ್ಷಿತ ಸ್ನೇಹ ಬಾಂಧವ್ಯಕ್ಕೆ ಎಡೆಮಾಡುತಿರುವಂತೆ ಎನಿಸಿತು. super Roopa

    ReplyDelete
    Replies
    1. ಮೇಡಂ ಇದು ಈಗಿನ ಪರಿಸರವು ಅನುಸರಿಸುತ್ತಿರುವ ಸತ್ಸಂಪ್ರದಾಯ
      ಮನೆಯ ದೇವರ ಮನೆಯಲ್ಲಿ ಜೇಡದ ಬಲೆ ಇದ್ದರೂ ಊರ ದೇವಸ್ಥಾನದಲ್ಲಿ ಪಾರಾಯಣ..

      Delete
    2. ಧನ್ಯವಾದ ರಮೇಶ್,
      ಆ ಬಾ೦ಧವ್ಯಗಳ ಗುರುತು ನಿಮ್ಮ ಈ ಕಾಮೆ೦ಟ್ ಹಾಗು ನನ್ನ ಈ ಕಾಮೆ೦ಟ್... :)

      Delete
    3. ಪವನ್,
      ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರೀತಿಯ ಧನ್ಯವಾದ :)
      ನಿಮ್ಮ ಮಾತು ಅಕ್ಷರಶಃ ನಿಜ....... ಬದಲಾವಣೆ ಮನೆಯಿ೦ದಾಗಬೇಕಿದೆ, ಮನದಿ೦ದಾಗಬೇಕಿದೆ...

      Delete
  4. ತುಂಬಾ ಇಷ್ಟ ಆಯ್ತು ಮೇಡಂ ನಿಮ್ಮ ಬರಹ.


    ನನ್ನದೊಂದು ಮಾತು ಮೇಡಂ...
    ನಮ್ಮೂರ ಶಿಕ್ಷಕರು ನಮಗೆ ವರದಕ್ಷಿಣೆ ಪಿಡುಗಿನ ಬಗ್ಗೆ ಎಷ್ಟು ಚಂದ ಪಾಠ ಹೇಳಿದ್ದರಂದರೆ ಅದನ್ನ ನೀವೂ ಕೇಳಬೇಕಿತ್ತು.


    ಆದರೆ ಆ ಪುಣ್ಯಾತ್ಮ ತಗೆದುಕೊಂಡಿದ್ದ ವರದಕ್ಷಿಣೆ ಅವನಿಗಿಂತ ಭಾರ ಅಂತ ಈಗ ಗೊತ್ತಾಗಿದ್ದು..!

    ನಮ್ಮ ಕಡೆ ದನ ಕಾಯೋನಿಗೆ ಒಂದು ರೇಟು, ಕುರಿ ಕಾಯೋನಿಗೆ ಒಂದು ರೇಟು, ಕಲಿತದ್ದು + ಆದ ಹಾಗೆ ಅದು ಕೂಡ ಬೆಳೆಯುತ್ತೆ.

    ಒಂದು ವಿಪರ್ಯಾಸ ಅಂದ್ರೆ ಹೆಚ್ಚು ಕಲಿತ ಹೆಚ್ಚು ಬುದ್ದಿವಂತನಿಗೆ ಹೆಚ್ಚು...
    ಅವರೇನು ಕಲಿಸಿದರು, ಇವರೇನು ಕಲಿತರು....!

    ಕೊಟ್ಟು ಕೊಡೋ ವಸ್ತು ಇದೊಂದೆ ಇರಬೇಕೇನು ಅನಿಸುತ್ತೆ.

    ನಿಮ್ಮಂತವರು ಇನ್ನೊಂದಿಷ್ಟು ಜನ ಹುಟ್ಟಿದ್ರೇ ಶೋಷನೆಗೆ ಒಳಗಾಗುವವರ ಹೊಟ್ಟೆಯಲ್ಲಿ ಹುಟ್ಟೋ ನಮ್ಮಂತವರೂ ಬದುಕಲು ಶಕ್ತಿ ಬಂದೀತು.


    Sorry ಮೇಡಂ ಇದು ನನ್ನ ಅನಿಸಿಕೆ ಮಾತ್ರ...

    ReplyDelete
    Replies
    1. ವಿಜಯ್,
      ಓದಿ, ಮೆಚ್ಛಿ, ಪ್ರತಿಕ್ರಿಯೆ ನೀಡಿದಕ್ಕೆ ಪ್ರೀತಿಯ ನಮನ .....
      ಬದಲಾವಣೆ ಅತ್ಯಗತ್ಯ..., ಈ ಹಳೆಯ ಸಾ೦ಪ್ರದಾಯಿಕ ಅರ್ಥವಿಲ್ಲದ ಕಟ್ಟುಪಾಡುಗಳು ನಿಜಕ್ಕೂ ಮನಕಲುಕುತ್ತದೆ, ನಮ್ಮಿ೦ದಾಗುವ ಬದಲಾವಣೆಗಳು ನಾವು ಮಾಡಲೇಬೇಕು... ನಮ್ಮ ಮು೦ದಿನ ಪೀಳಿಗೆಗೆ ಮಾರ್ಗದರ್ಶನ ನೀಡಲೇಬೇಕು...
      ಸಧ್ಯಕ್ಕೆ, S L ಬೈರಪ್ಪನವರ "ದಾಟು" ಓದುತಿದ್ದೇನೆ, ಈ ಕಟ್ಟುಪಾಡುಗಳು ಎಷ್ಟೊ೦ದು ಬೇರೂರಿದೆಯೆ೦ದರೆ, ಇನ್ನೆಷ್ಟು ತಲೆಮಾರುಗಳು ಬರಬೇಕಿದೆಯೋ ಇದನ್ನೆಲ್ಲ ಸರಿ ಮಾಡಲು ಅ೦ತ ಯೋಚಿಸುತಿದ್ದೆ.
      ನಿಮ್ಮ ಅನಿಸಿಕೆ ಇಷ್ಟವಾಯ್ತು ವಿಜಯ್....ಮತ್ತೊಮ್ಮೆ ಧನ್ಯವಾದ ನಿಮಗೆ.

      Delete
  5. Thank u ಮೇಡಂ ಪ್ರತಿಕ್ರಿಯೆ ನೀಡಿದ್ದಕ್ಕೆ.

    ReplyDelete
  6. ಆಚರಣೆಗಳು ಪ್ರೀತಿಯಿಂದ ಆದಲ್ಲಿ ಅರ್ಥವತ್ತಾಗುತ್ತದೆ...
    ಗೌರವ
    ಪ್ರೀತಿ..ಹೃದಯದಲ್ಲಿದ್ದರೆ ಆಚರಣೆಗಳು ಬೇಕಾ ಎನಿಸುತ್ತದೆ..

    ಮತ್ತೊಮ್ಮೆ ಶುಭಾಶಯಗಳು...

    ನನ್ನ ..
    ನಮ್ಮ ಜಗತ್ತನ್ನು ಸುಂದರಗೊಳಿಸಿದ ಎಲ್ಲರಿಗೂ..

    "ಮಹಿಳಾ ದಿನಾಚರಣೆಯ ಶುಭಾಶಯಗಳು..."

    ReplyDelete
    Replies
    1. ನಿಜ ಪ್ರಕಾಶ್ ಜೀ,
      ಓದಿಗೆ, ಪ್ರತಿಕ್ರಿಯೆಗೆ ಧನ್ಯವಾದಗಳು.....

      Delete
  7. ಎರಡು ನಿಮಿಷ ಸುಮ್ಮನೆ ಕೂತೆ ನಿಮ್ಮ ಪೋಸ್ಟ್ ಓದಿ.. ಮಹಿಳಾ ದಿನದ ಶುಭಾಶಯಗಳು.. ಅಷ್ಟೆ ಹೇಳಬಲ್ಲೆ :)

    ReplyDelete
    Replies
    1. ಯೆಸ್ ನಿವೇದಿತ....
      ಹೀಗೂ ಒ೦ದು ಮಹಿಳಾ ದಿನಾಚರಣೆ ಅಷ್ಟೆ....
      ನಿಮಗೂ ಸಹ ಶುಭಾಶಯಗಳು, ಓದಿ ಪ್ರತಿಕ್ರಿಯೆ ನೀಡಿದಕ್ಕಾಗಿ ಪ್ರೀತಿಯ ಧನ್ಯವಾದ :)

      Delete
  8. ಮಹಿಳಾ ದಿನದ ಶುಭಾಶಯಗಳು ಮತ್ತು ಚಿಂತನೆ ಮತ್ತು ಮಂಥನ ತುಂಬಿತು ನಿಮ್ಮ ಲೇಖನ ರೂಪಾ....

    ReplyDelete
    Replies
    1. Azad Sir, pratikriyege preetiya dhanyavaada :)

      Delete
  9. "ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ".. ಮೋಡದ ಮರೆಯಲ್ಲಿ . ಚಿತ್ರದಲ್ಲಿ ಅಣ್ಣಾವ್ರ ಹಾಡು.. ಶುದ್ಧ ಎನ್ನುವುದು ಮನದ ಒಳಗೆ ಇರಬೇಕು.. ಆಗ ಜಗವೇ ಸುಂದರ ಎನ್ನಿಸುತ್ತದೆ..

    ಕೆಲವು ನಿಮಿಷಗಳ ಹಿಂದೆ ಬ್ಲಾಗ್ ನಲ್ಲಿ ಕಾಮೆಂಟ್ ಹಾಕುವಾಗ ಕೆಲವೊಮ್ಮೆ ಮುಖವಾಡಗ ಅವಶ್ಯಕತೆ ಇರುತ್ತದೆ ಎಂದು ಹೇಳಿದ್ದೆ. ಹೌದು ಮುಖವಾಡದ ಅವಶ್ಯಕತೆ ಇದೆ ಆದರೆ ಅದರ ಬಣ್ಣ ಬಯಲಾಗದೆ ಇರುವ ಹಾಗೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲೆ ಇರುತ್ತದೆ..

    ಎಷ್ಟು ಸುಂದರವಾಗಿ ಮೂರು ಹಂತಗಳಲ್ಲಿ ಮನುಜರ ಬಣ್ಣ ಬಯಲಾಗಿ ಬಿಟ್ಟಿತು ಅಲ್ಲವೇ..

    ಮಹಿಳೆ... ತಂಗಿ ಅಕ್ಕ ತಾಯಿ.. ಊಹು ಇದಕ್ಕೆ ಉತ್ತರ ಮೇ ೭ ರಂದು..

    ಬ್ಲಾಗ್ ಲೋಕದ ಎಲ್ಲಾ ಮಹಿಳ ಮಣಿಗಳಿಗೂ ಶುಭಾಶಯಗಳು..

    ಸೂಪರ್ DFR ಇಷ್ಟವಾಯಿತು...

    ReplyDelete
    Replies
    1. Sri,
      You are always an inspiration to writers :) nimma odige, prathikriyege dhanyavaada :)

      Delete

ಪ್ರತಿ ಬೆಳಗೂ ಹೊಸತನ....

ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...